Jaggesh: ಅಶ್ವಿನಿ ಅವರ ಬೆಂಬಲಕ್ಕೆ ನಿಂತ ಜಗ್ಗೇಶ್; ಹೆಣ್ಣಿಗೆ ನೋವು ಕೊಟ್ಟವನು ಉದ್ದಾರ ಆಗಲ್ಲ ಎಂದ ನಟ

Written by Soma Shekar

Published on:

---Join Our Channel---

Jaggesh: ದೊಡ್ಮನೆ ಸೊಸೆ, ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯೊಬ್ಬ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಕುರಿತಾಗಿ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲು ಮಾಡಲಾಗಿದೆ. ಅಲ್ಲದೇ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಟೀಕೆಗಳು ಕೇಳಿ ಬರುತ್ತಿದ್ದು, ಪೋಸ್ಟ್ ಮಾಡಿದವನನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಜರುಗಿಸುವಂತೆ ಅನೇಕರು ಆಗ್ರಹಿಸುತ್ತಿದ್ದಾರೆ.‌

ಆರ್‌ ಸಿ ಬಿ ಸೋಲಿಗೆ ಅಶ್ವಿನಿ ಅವರೇ ಕಾರಣವೆಂದು ನಿಂದಿಸುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈಗ ಇದೇ ವಿಚಾರವಾಗಿ ಕನ್ನಡ ಸಿನಿಮಾರಂಗದ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅವರು ದನಿ ಎತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಣ್ಣು ಕುಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆದ ಇತಿಹಾಸವಿಲ್ಲ ಎಂದು ಹೇಳಿರುವ ಜಗ್ಗೇಶ್ (Jaggesh) ಅವರು ಹಿಡಿ ಶಾಪವನ್ನು ಹಾಕಿದ್ದಾರೆ.

ಜಗ್ಗೇಶ್ ಅವರು ತಮ್ಮ ಪೋಸ್ಟ್ ನಲ್ಲಿ, ಪುನೀತನ ಮಡದಿ ಅಣಕಿಸಿದ ನತದೃಷ್ಟರೆ, ನಿಮಗೂ ತಾಯಿ ಇರಬೇಕು ಹಾಗು ತಾಯಿ ಬೆಲೆ ಗೊತ್ತಿರಬೇಕು.. ಒಂದು ವೇಳೆ ತಾಯಿ, ಹೆಣ್ಣು ಗೌರವ ಇಲ್ಲ ಎಂದರೆ ಕಂಡಿತ ಅಂಥವರು ಮನುಕುಲಕ್ಕೆ ಅನರ್ಹ! ಪುನೀತನ ಮಡದಿ ಅನಾಥಳಲ್ಲ, ತನ್ನ ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ. ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ದಾರ ಆದ ಇತಿಹಾಸವಿಲ್ಲಾ! ಎಂದು ಬರೆದುಕೊಂಡಿದ್ದಾರೆ.

ಕಳೆದ ಮಾರ್ಚ್ ತಿಂಗಳ 19ನೇ ತಾರೀಕಿನಂದು ಆರ್ ಸಿ ಬಿ ಅನ್‌ ಬಾಕ್ಸ್ ಇವೆಂಟ್ ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಆಹ್ವಾನ ನೀಡಲಾಗಿತ್ತು. ಅಶ್ವಿನಿ ಅವರು ಆ ಸಮಾರಂಭದಲ್ಲಿ ಭಾಗಿಯಾಗಿದ್ದರು. ನಂತರ ಐಪಿಎಲ್ ಆರಂಭವಾದ ಮೇಲೆ ಆರ್‌ ಸಿ ಬಿ ತಂಡ ಒಂದಷ್ಟು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಈ ವಿಚಾರವಾಗಿ ದರ್ಶನ್ ಅಭಿಮಾನಿ ಎಂದು, ಗಜಪಡೆ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಟ್ಟದಾಗಿ ಪೋಸ್ಟ್ ಒಂದನ್ನು ಮಾಡಲಾಗಿತ್ತು.

ಅದರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಆರ್‌ ಸಿ ಬಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತಂಡ ಸೋಲನ್ನು ಕಾಣುವಂತಾಗಿದೆ ಎಂದು ನಿಂದನೆಯನ್ನು ಮಾಡಲಾಗಿದೆ. ಪೋಸ್ಟ್ ವೈರಲ್ ಆಗಿ ಅಭಿಮಾನಿಗಳಿಂದ ವಿರೋಧ ಹೊರ ಬಿದ್ದ ಬೆನ್ನಲ್ಲೇ ಪೋಸ್ಟ್ ಶೇರ್ ಮಾಡಿದ್ದ ಖಾತೆಯ ಹೆಸರನ್ನ ‘ಸುದೀಪ್ ಅಭಿಮಾನಿ’ ಅಂತ ಬದಲಾವಣೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗಳ ನಂತರ ಅಪ್ಪು ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಇದರ ವಿರುದ್ಧ ಕಾನೂನು ಸಮರವನ್ನು ಸಾರಿದ್ದಾರೆ.

Leave a Comment