ಪ್ರೋಮೊ ಬರಲೇ ಇಲ್ಲ: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಗೊಂದಲದಲ್ಲಿ ಪ್ರೇಕ್ಷಕರು
Weekend With Ramesh : ಶನಿವಾರ ಮತ್ತು ಭಾನುವಾರ ಬರ್ತಿದೆ ಅಂದ್ರೆ ಕಿರುತೆರೆಯ ಪ್ರೇಕ್ಷಕರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗೋ ವೀಕೆಂಡ್ ವಿತ್ ರಮೇಶ್ ನ ಸೀಸನ್ ಐದರ ಎಪಿಸೋಡ್ ಗಳಿಗಾಗಿ ಕಾಯ್ತಾ ಇರ್ತಾರೆ. ಈಗಾಗಲೇ ವೀಕೆಂಡ್ ವಿತ್ ರಮೇಶ್ ಸೀಸನ್ ಐದು ಜನರ ಮೆಚ್ಚುಗೆಯನ್ನು ಪಡೆದಿದೆ. ಈ ಬಾರಿಯ ಸೀಸನ್ ಮಾರ್ಚ್ 25 ರಂದು ಆರಂಭವಾಗಿತ್ತು. ಮೊದಲ ವಾರದ ಎರಡು ಸಂಚಿಕೆಗಳಲ್ಲಿ ಮೋಹಕ ತಾರೆ ನಟಿ ರಮ್ಯ ಸಾಧಕರ ಕುರ್ಚಿಯಲ್ಲಿ ಕುಳಿತಿದ್ದರು.ಈ ಎಪಿಸೋಡ್ ಗಳ ವಿಚಾರ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ಅದಾದ ನಂತರದ ವಾರಗಳಲ್ಲಿ ಪ್ರಭುದೇವ, ಡಾಲಿ ಧನಂಜಯ, ಡಾ.ಮಂಜುನಾಥ್, ದತ್ತಣ್ಣ, ಸಿಹಿ ಕಹಿ ಚಂದ್ರು, ನೆನಪಿರಲಿ ಪ್ರೇಮ್, ಅವಿನಾಶ್, ಮಂಡ್ಯ ರಮೇಶ್, ಗುರುರಾಜ ಕರ್ಜಗಿ, ನಾ. ಸೋಮೇಶ್ವರ್, ಚಿನ್ನಿ ಮಾಸ್ಟರ್ ಇನ್ನಿತರರು ಸಾಧಕರ ಕುರ್ಚಿಯನ್ನು ಅಲಂಕರಿಸಿದ್ದರು.
ಕಳೆದ ವಾರದ ಎರಡು ಎಪಿಸೋಡ್ ಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಹಾಡುಗಳನ್ನು ಬರೆದಿರುವ, ಕವಿ, ಸಾಹಿತಿ ನಾಗೇಂದ್ರ ಪ್ರಸಾದ್ ಅವರು ವೀಕೆಂಡ್ ಟೆಂಟ್ ನಲ್ಲಿ ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನ, ಸಾಧನೆಯ ಕಥೆಯನ್ನು ಹೇಳಿದ್ದರು.
ಆದರೆ ಈ ವಾರ ವಾಹಿನಿಯು ಪ್ರತಿ ವಾರದ ಹಾಗೆ ವಾರಾಂತ್ಯಕ್ಕೂ ಮೊದಲೇ ಈ ವಾರದ ಸಾಧಕ ಯಾರು ಎನ್ನುವ ಸುಳಿವನ್ನು ನೀಡಿ, ಅನಂತರ ಪ್ರೋಮೋ ಹಾಕಿ ಪ್ರೇಕ್ಷಕರ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡಿಲ್ಲ ಎನ್ನುವುದು ಅಚ್ಚರಿಯನ್ನು ಮೂಡಿಸಿದೆ.
ವಾಹಿನಿಯು ಈ ವಾರಾಂತ್ಯದ ಎಪಿಸೋಡ್ ಗಳ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದನ್ನು ನೋಡಿ ಪ್ರೇಕ್ಷಕರು, ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರ ಆಗಲ್ವ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನೆಯೊಂದನ್ನು ಮಾಡಿದ್ದಾರೆ.
ವಾರದ ಕೊನೆಯ ಭಾಗಕ್ಕೆ ಬಂದರೂ ಪ್ರೊಮೊ ಇಲ್ಲದನ್ನು ನೋಡಿ ವೀಕ್ಷಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ವೀಕೆಂಡ್ ವಿತ್ ರಮೇಶ್ ಟೀಂ ಹೊಸ ಸಾಧಕರ ಹುಡುಕಾಟಲ್ಲಿ ಇದ್ಯಾ? ಮಾಹಿತಿ ಕಲೆ ಹಾಕುವಲ್ಲಿ ತಡ ಆಗಿದೆಯಾ? ಎನ್ನುವುದು ಸಹಾ ಈಗ ಮೂಡಿರುವ ಪ್ರಶ್ನೆಗಳಾಗಿವೆ.
ಅಲ್ಲದೇ ಹೆಚ್ಚಾಗಿ ಸಿನಿಮಾ ಸೆಲೆಬ್ರಿಟಿಗಳೇ ಸಾಧಕರ ಕುರ್ಚಿಯಲ್ಲಿ ಕೂರುತಿರುವುದನ್ನು ನೋಡಿದ ಪ್ರೇಕ್ಷಕರು ಸಹಾ ಸಿನಿಮಾ ರಂಗದವರು ಮಾತ್ರವೇ ಅಲ್ಲ ಬೇರೆ ಬೇರೆ ಕ್ಷೇತ್ರದ ಸಾಧಕರನ್ನೂ ಕರೆ ತನ್ನಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ.