ಸದಾ ಒಂದಲ್ಲಾ ಒಂದು ವಿಷಯವಾಗಿ ಮಾದ್ಯಮಗಳಲ್ಲಿ ಸುದ್ದಿಯಾಗುವ ನಟಿ ಕಂಗನಾ ರಣಾವತ್ ಸಿನಿಮಾಗಳಿಗಿಂತ ತಾನು ನೀಡುವ ಬೋಲ್ಡ್ ಹೇಳಿಕೆಗಳು ಮತ್ತು ಸ್ಟಾರ್ ನಟ, ನಟಿಯರ ಬಗ್ಗೆ ಆಡುವ ಮಾತುಗಳು ಮತ್ತು ಸೂಕ್ಷ್ಮ ವಿಚಾರಗಳಲ್ಲಿ ನೀಡುವ ಹೇಳಿಕೆಗಳಿಂದಲೇ ಸಿಕ್ಕಾಪಟ್ಟೆ ಸಂಚಲನವನ್ನು ಸೃಷ್ಟಿಸುತ್ತಾರೆ. ಕಂಗನಾ ಎಂದ ಮೇಲೆ ಅಲ್ಲೊಂದು ಕಾಂಟ್ರವರ್ಸಿ ಖಂಡಿತ ಎನ್ನುವಂತಾಗಿದೆ. ಈಗ ಕಂಗನಾ ಕುರಿತಾದ ಹೊಸ ವಿಚಾರವೊಂದು ಸಾಕಷ್ಟು ಸುದ್ದಿ ಮಾಡಿದೆ. ಈ ವಿಚಾರವನ್ನು ಕೇಳಿ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ನೆಟ್ಟಿಗರು ಸಹಾ ಅಚ್ಚರಿ ಯನ್ನು ವ್ಯಕ್ತಪಡಿಸಿದ್ದಾರೆ. ಹೌದು, ನಟಿ ಕಂಗನಾ ರಾಜಕೀಯ ಪ್ರವೇಶ ಮಾಡಲು ಸಜ್ಜಾಗಿದ್ದು, ಈ ಸುದ್ದಿ ಅಚ್ಚರಿಯನ್ನು ಮೂಡಿಸಿದೆ.
ಕಂಗನಾ ತಾನು ರಾಜಕೀಯಕ್ಕೆ ಪ್ರವೇಶ ನೀಡುತ್ತಿರುವ ವಿಚಾರದ ಕುರಿತಾಗಿ ಸುಳಿವೊಂದನ್ನು ನೀಡಿದ ಬೆನ್ನಲ್ಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನಟಿ ಕಂಗನಾಗೆ ಬಿಜೆಪಿ ಗೆ ಸೇರ್ಪಡೆಯಾಗಲು ಗ್ರೀನ್ ಸಿಗ್ನಲ್ ಅನ್ನು ನೀಡಿದ್ದಾರೆ. ಇದೇ ವೇಳೆ ಅವರು ಮಾತನಾಡುತ್ತಾ, ಬಾಲಿವುಡ್ ನಟರಿಗೆ ಬಿಜೆಪಿಗೆ ಸೇರ್ಪಡೆಯಾಗಲು ಸ್ವಾಗತಾರ್ಹ,ಆದರೆ ಸಮಾಲೋಚನೆ ನಡೆಸಿದ ನಂತರವೇ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ನಿರ್ಣಯ ವನ್ನು ತೆಗೆದುಕೊಳ್ಳಲಾಗುವುದು ಎನ್ನುವ ಮಾತನ್ನು ಅವರು ಹೇಳಿದ್ದಾರೆ. ನಿನ್ನೆಯಷ್ಟೇ ನಟಿ ಕಂಗನಾ ತನ್ನ ರಾಜಕೀಯ ಪ್ರವೇಶದ ವಿಚಾರವಾಗಿ ಮಾತನಾಡಿದ್ದರು.
ನಟಿ ಕಂಗನಾ, ಪರಿಸ್ಥಿತಿ ಏನೇ ಇರಲಿ, ಸರ್ಕಾರವು ನನ್ನ ಭಾಗವಹಿಸುವಿಕೆಯನ್ನು ಬಯಸಿದರೆ ನಾನು ರಾಜಕೀಯಕ್ಕೆ ಬರುತ್ತೇನೆ. ಹಿಮಾಚಲ ಪ್ರದೇಶದ ಜನರು ನನಗೆ ತಮ್ಮ ಸೇವೆಯನ್ನು ಮಾಡಲು ಅವಕಾಶವನ್ನು ನೀಡಿದರೆ ಅದನ್ನು ನಾನು ನನ್ನ ಸೌಭಾಗ್ಯ ಮತ್ತು ಅದೃಷ್ಟ ಎಂದುಕೊಳ್ಳುತ್ತೇನೆಂದು ಹೇಳಿದ್ದರು. ಇದಾದ ನಂತರ ಈ ವಿಚಾರವಾಗಿ ಜೆ.ಪಿ. ನಡ್ಡಾ ಅವರ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಕಂಗನಾ ಬಿಜೆಪಿ ಸೇರ್ಪಡೆಗೆ ಸ್ವಾಗತ ಇದೆ ಎನ್ನುವ ಮಾತನ್ನು ಹೇಳಿದ್ದಾರೆ.
ಪಕ್ಷದೊಂದಿಗೆ ಕೆಲಸವನ್ನು ಮಾಡಲು ಬಯಸುವವರಿಗೆ ಸಾಕಷ್ಟು ಸ್ಥಳವಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಕೇವಲ ನನ್ನ ನಿರ್ಧಾರ ಮಾತ್ರವಲ್ಲ. ಅದು ತಳಮಟ್ಟದಿಂದ ಸಮಾಲೋಚನೆ ನಡೆಯುವ ಪ್ರಕ್ರಿಯೆಯಾಗಿದೆ. ಚುನಾವಣಾ ಸಮಿತಿಯಿಂದ ಸಂಸದೀಯ ಮಂಡಳಿಯ ವರೆಗೆ ಸಮಾಲೋಚನೆ ನಡೆಯಬೇಕು ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಎಲ್ಲರಿಗೂ ಬಿಜೆಪಿಗೆ ಸ್ವಾಗತ, ಷರತ್ತುಗಳ ಆಧಾರದ ಮೇಲೆ ಯಾರನ್ನೂ ತೆಗೆದುಕೊಳ್ಳುವುದಿಲ್ಲ. ಪಕ್ಷ ಸೇರಿದ ನಂತರ ಅವರ ಸಾಮರ್ಥ್ಯವನ್ನು ನಿರ್ಧರಿಸಲಾಗುವುದು ಎಂದಿದ್ದಾರೆ.