ರಣಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ, ಅಮಿತಾಬ್ ಬಚ್ಚನ್, ಮೌನಿ ರಾಯ್ ರಂತಹ ಜನಪ್ರಿಯ ಮತ್ತು ದಿಗ್ಗಜ ನಟರು ನಟಿಸಿರುವ ಬಾಲಿವುಡ್ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರದ ಮೇಲೆ ಬಾಲಿವುಡ್ ಸಿನಿಮಾ ರಂಗಕ್ಕೆ ಸಾಕಷ್ಟು ನಿರೀಕ್ಷೆಗಳು ಇವೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ದಿನಗಳು ಚೆನ್ನಾಗಿಲ್ಲ. ಯಾವುದೇ ಹೊಸ ಸಿನಿಮಾ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಿಲ್ಲ. ಒಂದು ಕಡೆ ಬಾಯ್ಕಾಟ್ ಟ್ರೆಂಡ್ ತಣ್ಣಗಾಗುವ ಸೂಚನೆಗಳು ಸಿಗುತ್ತಿಲ್ಲ, ಮತ್ತೊಂದು ಕಡೆ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗುತ್ತಿವೆ. ಇಂತಹ ಪರಿಸ್ಥಿತಿಗಳಲ್ಲಿ ದೊಡ್ಡ ಬಜೆಟ್ ಸಿನಿಮಾ ಆಗಿರುವ ಬ್ರಹ್ಮಾಸ್ತ್ರ, ಸೂಪರ್ ಹಿಟ್ ಸಾಲಿಗೆ ಸೇರಲು ದೊಡ್ಡ ಮಟ್ಟದಲ್ಲಿ ಗಳಿಕೆಯನ್ನು ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎನ್ನುವುದು ವಾಸ್ತವ.
ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣಕ್ಕಾಗಿ ಇದರ ನಿರ್ಮಾಪಕರು ಬರೋಬ್ಬರಿ ಎಂಟು ವರ್ಷಗಳಿಂದ ಶ್ರಮ ಪಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಅವರ ಪ್ರಕಾರ ಅವರು ಈ ಸಿನಿಮಾವನ್ನು ಬಹಳ ವರ್ಷಗಳ ಹಿಂದೆಯೇ ಪ್ಲಾನ್ ಮಾಡಿದ್ದರು, ಆದರೆ ನಟ ರಣಬೀರ್ ಕಪೂರ್ ಅವರು ಸಾವಧಾನವಾಗಿ ಒಂದೊಂದೇ ಹೆಜ್ಜೆಯನ್ನು ಇಡಲು ಸೂಚಿಸಿದ್ದರಿಂದ ಅವರು ಸಿನಿಮಾವನ್ನು ನಿಧಾನ ಮಾಡಿದ್ದಾಗಿ ಹೇಳಿದ್ದಾರೆ. ಅವರೇ ಹೇಳುವಂತೆ ಈ ಸಿನಿಮಾ ನಿರ್ಮಾಣಕ್ಕಾಗಿ ಬರೋಬ್ಬರಿ 410 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಿಕೆ ಮಾಡಲಾಗಿದೆ ಎನ್ನಲಾಗಿದೆ. ಆದ್ದರಿಂದಲೇ ಸಿನಿಮಾ ಮೇಲೆ ನಿರೀಕ್ಷೆಗಳು ಸಹಾ ದೊಡ್ಡ ಮಟ್ಟದಲ್ಲಿಯೇ ಇದೆ.
ಬ್ರಹ್ಮಾಸ್ತ್ರ ಸಿನಿಮಾ ಕೇವಲ ಸ್ಟಾರ್ ಗಳ ಸಮ್ಮೇಳನ ಇರುವ ಸಿನಿಮಾ ಮಾತ್ರವಲ್ಲ ಬದಲಾಗಿ ಈ ಸಿನಿಮಾದ ವಿಶ್ಯುಯಲ್ ಎಫೆಕ್ಟ್ಸ್ ಮೇಲೆ ಸಹಾ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಲಾಗಿದೆ. ಈ ಸಿನಿಮಾದಲ್ಲಿ ನಟ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಹೀಗೆ ಬಹಳ ದೊಡ್ಡ ಮೊತ್ತದಲ್ಲಿ ಹಣವನ್ನು ಖರ್ಚು ಮಾಡಿ ಸಿನಿಮಾ ನಿರ್ಮಾಣ ಮಾಡಿರುವ ಕಾರಣದಿಂದಾಗಿ ಈ ಸಿನಿಮಾ ಹಿಟ್ ಆಗಲೇಬೇಕಾದ ಅನಿವಾರ್ಯತೆ ಇದೆ. ಸಿನಿಮಾದ ಪ್ರಮೋಶನ್ ಸಹಾ ಬಹಳ ಜೋರಾಗಿ ನಡೆಯುತ್ತಿದೆ.
ಆದರೆ ಇದೇ ವೇಳೆ ಇನ್ನೊಂದು ಕಡೆ ಬಾಯ್ಕಾಟ್ ಬ್ರಹ್ಮಾಸ್ತ್ರ ಎನ್ನುವ ಕೂಗು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗುತ್ತಾ ಸಾಗಿದೆ. ನಟಿ ಆಲಿಯಾ ನೀಡಿದ ಹೇಳಿಕೆ, ಹತ್ತು ವರ್ಷಗಳ ಹಿಂದೆ ರಣಬೀರ್ ಕಪೂರ್ ನೀಡಿದ್ದ ಗೋ ಮಾಂಸ ಸೇವನೆಯ ಹೇಳಿಕೆ, ನಟಿ ಅನುಷ್ಕಾ ಶರ್ಮಾ ರಣಬೀರ್ ಕಪೂರ್ ಡ್ರ ಗ್ ಬಳಸುತ್ತಾರೆ ಎಂದು ನೀಡಿದ್ದ ಹೇಳಿಕೆಗಳು ಈಗ ಮತ್ತೊಮ್ಮೆ ವೈರಲ್ ಆಗಿದ್ದು ನೆಟ್ಟಿಗರು ಇವೆಲ್ಲವುಗಳ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಕರೆ ನೀಡಿದ್ದಾರೆ.