ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯ ನಂತರ ಎಲ್ಲಾ ಕಡೆ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಅಲ್ಲದೇ ಸಿನಿಮಾಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿಯನ್ನು ಸಹಾ ಘೋಷಣೆ ಮಾಡಿದೆ. ಎಲ್ಲರ ಮನಗೆದ್ದಿರುವ ಸಿನಿಮಾಕ್ಕೆ ರಾಜ್ಯ ಸರ್ಕಾರವೇ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿದ ನಂತರ ಈ ವಿಚಾರದ ಕುರಿತಾಗಿ ಒಂದಷ್ಟು ಜನ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರರಂಗದ ಖ್ಯಾತ ನಿರ್ದೇಶಕ ಮಂಸೋರೆ ಅವರು ಕೂಡಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಅವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಒಂದು ದೀರ್ಘವಾದ ಪೋಸ್ಟ್ ಕೂಡಾ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆಯಷ್ಟೇ 777 ಚಾರ್ಲಿ ಸಿನಿಮಾಕ್ಕೆ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿದೆ. ಇದನ್ನು ಪ್ರಶ್ನೆ ಮಾಡಿರುವ ನಿರ್ದೇಶಕ ಮಂಸೋರೆಯವರು, ಕನ್ನಡ ಚಿತ್ರಕ್ಕೆ ವಿನಾಯಿತಿ ನೀಡಿದ್ದಕ್ಕೆ ಸಂತೋಷವಿದೆ ಆದರೆ ಕನ್ನಡದಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳು ಬಂದಿವೆ. ಆ ಚಿತ್ರಗಳಿಗೆ ನೀವು ಏಕೆ ವಿನಾಯಿತಿಯನ್ನು ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಮಂಸೋರೆ ಅವರು ತೆರಿಗೆ ಹಣವನ್ನು ನಿಮ್ಮ ಜೇಬಿನಿಂದ ಕೊಡ್ತೀರಾ? ಎನ್ನುವ ಪ್ರಶ್ನೆಯನ್ನು ಕೂಡಾ ಮಾಡಿದ್ದಾರೆ. ಕನ್ನಡ ಚಿತ್ರಗಳಿಗೆ ಇದ್ದ ತೆರಿಗೆ ವಿನಾಯಿತಿಯನ್ನು ನಿಮ್ಮ ಬಿಜೆಪಿ ಸರ್ಕಾರವೇ ಕಿತ್ತುಕೊಂಡಿದೆ. ಚಾರ್ಲಿ ಚಿತ್ರಕ್ಕೆ ನೀಡಿರುವ ತೆರಿಗೆ ವಿನಾಯಿತಿ ಹಣವನ್ನು ನಿಮ್ಮ ಜೇಬಿನಿಂದ ಕೊಡ್ತೀರಾ ? ಅಣ್ಣಾವ್ರು ಮಾಡಿದ ಹೋರಾಟದಿಂದ ಕನ್ನಡ ಸಿನಿಮಾಗಳಿಗೆ ವಿನಾಯಿತಿ ಸಿಕ್ಕಿತ್ತು. ಈಗ ನಿಮ್ಮ ಸರ್ಕಾರ ಕನ್ನಡ ಸಿನಿಮಾಗಳಿಗೆ ಸಂಪೂರ್ಣ ವಿನಾಯಿತಿ ನೀಡುತ್ತಾ? ಎನ್ನುವ ಪ್ರಶ್ನೆಯನ್ನು ಮಂಸೋರೆ ಅವರು ಸಿಎಂ ಅವರ ಮುಂದಿಟ್ಟಿದ್ದಾರೆ.
ನಾಯಿಯಷ್ಟು ಅಮೂಲ್ಯವಾದ ಜೀವವನ್ನು ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶವನ್ನು ಎತ್ತಿ ಹಿಡಿಯುವ ಅದೆಷ್ಟೋ ಕನ್ನಡ ಸಿನಿಮಾಗಳು ಈಗಾಗಲೇ ಬಂದಿದೆ. ಅಂತಹ ಸಿನಿಮಾಗಳು ಪ್ರತಿವರ್ಷ ತಯಾರಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಕನ್ನಡ ಸಿನಿಮಾಗಳು ಕನ್ನಡ ನೆಲದಲ್ಲಿ ಸಿದ್ಧವಾಗುತ್ತಿದೆ, ಅದಕ್ಕೆಲ್ಲಾ ತೆರಿಗೆ ವಿನಾಯಿತಿ ನೀಡುತ್ತೀರಾ? ಎನ್ನುವ ಪ್ರಶ್ನೆಯನ್ನು ಸಹ ಮಾಡಿದ್ದಾರೆ.