ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತರಲ್ಲಿ ಆರು ವಾರಗಳು ಈಗಾಗಲೇ ಕಳೆದಿದ್ದು, ಏಳನೇ ವಾರದ ಆಟ ಆರಂಭವಾಗಿದ್ದು, ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಬಿಗ್ ಬಾಸ್ ನಿಂದ ಕಳೆದ ಆರು ವಾರಗಳಲ್ಲಿ ಐಶ್ವರ್ಯ ಪಿಸ್ಸೆ, ನವಾಜ್, ದರ್ಶ್ ಚಂದ್ರಪ್ಪ, ಮಯೂರಿ, ನೇಹಾ ಗೌಡ ಮತ್ತು ಸಾನ್ಯಾ ಅಯ್ಯರ್ ಎಲಿಮಿನೇಷನ್ ಎದುರಿಸಿ ಬಿಗ್ ಬಾಸ್ ಆಟದಿಂದ ಔಟ್ ಆಗಿ ಹೊರ ಬಂದಾಗಿದೆ. ಹದಿನೆಂಟು ಜನರಿದ್ದ ಮನೆಯಲ್ಲಿ ಈಗ ಹನ್ನೆರಡು ಜನ ಮಾತ್ರ ಇದ್ದಾರೆ. ಇನ್ನು ಶೀಘ್ರದಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಕೂಡಾ ಆಗುತ್ತೆ ಎನ್ನುವ ಸುದ್ದಿಗಳು ಸಹಾ ಹರಿದಾಡಿ, ಯಾರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡ್ತಾರೆ ಅಂತ ತಿಳಿಯೋದಕ್ಕೆ ಪ್ರೇಕ್ಷಕರು ಸಾಕಷ್ಟು ಕಾತರರಾಗಿದ್ದಾರೆ.
ಆದರೆ ಈಗ ಏಳನೇ ವಾರದಲ್ಲಿ ಒಂದು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ಬಿಗ್ ಬಾಸ್. ನಾಮಿನೇಷನ್ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಬಿಗ್ ಬಾಸ್ ಪ್ರೇಕ್ಷಕರಿಗೆ, “ವೀಕ್ಷಕರ ಗಮನಕ್ಕೆ: ವೋಟಿಂಗ್ ಲೈನ್ ತೆರೆದಿರುವುದಿಲ್ಲ” ಎನ್ನುವ ಸೂಚನೆಯೊಂದನ್ನು ನೀಡಿದ್ದಾರೆ. ಈ ಸೂಚನೆ ನೋಡಿದ ನಂತರ ಎಲ್ಲರ ಮನಸ್ಸಿನಲ್ಲಿ ಮೂಡಿರುವ ಅನುಮಾನ ಅಥವಾ ಪ್ರಶ್ನೆ ಒಂದೇ, ಈ ವಾರ ಬಿಗ್ ಬಾಸ್ ನಲ್ಲಿ ಎಲಿಮಿನೇಷನ್ ಇರಲ್ವಾ? ಅಂತ. ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆದವರು ಇಬ್ಬರು. ಕ್ಯಾಪ್ಟನ್ ಆಗಿರೋದ್ರಿಂದ ಪ್ರಶಾಂತ್ ಸಂಬರ್ಗಿ ಸೇಫ್ ಆದ್ರೆ, ಟಾಸ್ಕ್ ನಲ್ಲಿ ವಿನೋದ್ ಗೊಬ್ಬರಗಾಲ ಕಾವ್ಯಶ್ರೀ ಅವರನ್ನು ಸೇಫ್ ಮಾಡಿದ್ದರು.
ಇನ್ನು ಮನೆಯ ಸದಸ್ಯರುಗಳ ಮತಗಳ ಆಧಾರದ ಮೇಲೆ ನಾಮಿನೇಟ್ ಆದವರು, ರೂಪೇಶ್ ರಾಜಣ್ಣ, ಅರುಣ್ ಸಾಗರ್, ದೀಪಿಕಾ ದಾಸ್, ದಿವ್ಯ ಉರುಡುಗ, ಅನುಪಮಾ ಗೌಡ ಮತ್ತು ಆರ್ಯವರ್ಧನ್ ಗುರೂಜಿ ಅವರು. ಇನ್ನು ಕ್ಯಾಪ್ಟನ್ ಪ್ರಶಾಂತ್ ಸಂಬರ್ಗಿ ಅವರು ಅಮೂಲ್ಯ ಗೌಡ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಏನೋ ಸಾಂಗವಾಗಿ ನಡೆದಾಗಿದೆ. ಆದರೆ ಬಿಗ್ ಬಾಸ್ ನೀಡಿರುವ ಹೊಸ ಟ್ವಿಸ್ಟ್ ನಿಂದಾಗಿ ನಾಮಿನೇಟ್ ಆಗಿರುವ ಎಲ್ಲರೂ ಸಹಾ ಈ ವಾರ ಸೇಫ್ ಆದಂತೆ ಕಾಣುತ್ತಿದೆ. ನಾಮಿನೇಟ್ ಆಗಿರುವವರಿಗೆ ಈ ವಿಷಯ ತಿಳಿದಿಲ್ಲವಷ್ಟೇ.
ಇನ್ನು ಈ ವಾರ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಡೋರು ಯಾರು? ಮನೆಗೆ ನವೀನರು ಬರ್ತಾರೋ ಅಥವಾ ಪ್ರವೀಣರನ್ನೇ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಕ್ಕೆ ಕಳುಹಿಸುತ್ತಾರಾ? ಅನ್ನೋ ಪ್ರಶ್ನೆ ಕಾಡಿದೆ. ಇನ್ನು ಕೆಲವು ಮಾದ್ಯಮಗಳ ವರದಿಗಳ ಪ್ರಕಾರ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸಿಕ್ಕಾಪಟ್ಟೆ ಸದ್ದು ಸುದ್ದಿಯನ್ನು ಮಾಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಎಂಟ್ರಿ ನೀಡ್ತಾರೆ ಎನ್ನುವ ಸುದ್ದಿಗಳು ಸಹಾ ಹರಿದಾಡುತ್ತಾ ಎಲ್ಲರ ಗಮನವನ್ನು ಸೆಳೆದಿದೆ. ಒಟ್ಟಾರೆ ಏಳನೇ ವಾರ ಏನೆಲ್ಲಾ ಆಗಲಿದೆ ಅನ್ನೋದು ಖಂಡಿತ ಕುತೂಹಲ ಮೂಡಿಸಿದೆ.