ಟಾಲಿವುಡ್ ನ ಸ್ಟಾರ್ ನಟರಲ್ಲಿ ರಾಣಾ ದಗ್ಗುಬಾಟಿ ಸಹಾ ಒಬ್ಬರಾಗಿದ್ದಾರೆ. ನಟ ರಾಣಾ ದಗ್ಗುಬಾಟಿ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಹಾ ಅವರಿಗೆ ದೊಡ್ಡ ಮಟ್ಟದ ಸ್ಟಾರ್ ಗಿರಿಯನ್ನು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಮಾತ್ರ ಬಾಹುಬಲಿ ಸರಣಿ ಸಿನಿಮಾಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಿನಿಮಾದಲ್ಲಿ ರಾಣಾ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದ್ದರೂ, ಅದಕ್ಕೆ ಸಿಕ್ಕ ಜನಪ್ರಿಯತೆ ಆ ಸಿನಿಮಾದ ನಾಯಕನ ಪಾತ್ರಕ್ಕೆ ಸಿಕ್ಕ ಜನಪ್ರಿಯತೆಗೆ ಸರಿ ಸಮಾನವಾಗಿತ್ತು. ಅಲ್ಲದೇ ತನ್ನ ಪಾತ್ರಕ್ಕಾಗಿ ರಾಣಾ ಪ್ರಶಸ್ತಿಗಳನ್ನು ಸಹಾ ಪಡೆದುಕೊಂಡರು. ರಾಣಾ ವೃತ್ತಿ ಜೀವನದಲ್ಲಿ ಬೇರೆಲ್ಲಾ ಸಿನಿಮಾಗಳು ಒಂದು ಕಡೆಯಾದರೆ, ಬಾಹುಬಲಿ ಮತ್ತೊಂದು ಕಡೆ ವಿಶೇಷ ಎನ್ನುವಂತೆ ಕಂಡಿತು.
ಹೀಗೆ ಸಿನಿಮಾ ನಟ, ನಟಿಯರು ಜನಪ್ರಿಯತೆ ಪಡೆದುಕೊಂಡ ಮೇಲೆ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತದೆ. ವಾಸ್ತವ ಏನೆಂದರೆ ನಟ, ನಟಿಯರ ಯಶಸ್ಸಿಗೆ ಒಂದರ್ಥದಲ್ಲಿ ಅವರ ಅಭಿಮಾನಿಗಳೇ ಕಾರಣ ಎನ್ನುವುದನ್ನು ಎಲ್ಲರೂ ಸಹಾ ಒಪ್ಪಲೇಬೇಕಾಗಿದೆ. ಅಭಿಮಾನಿಗಳು ಇಲ್ಲದೇ ಸ್ಟಾರ್ ಗಳು ಇರುವುದು ಅಸಾಧ್ಯ. ಇನ್ನು ತಮ್ಮ ನೆಚ್ಚಿನ ನಟ, ನಟಿಯರು ಎಲ್ಲಾದರೂ ಕಂಡಾಗ ಸಹಜವಾಗಿಯೇ ಅವರೊಡನೆ ಒಂದು ಫೋಟೋ, ಒಂದು ಸೆಲ್ಫಿ ಗಾಗಿ ಹಾತೊರೆಯುವುದು ನಡೆಯುತ್ತದೆ. ಅಭಿಮಾನ ನಟರನ್ನು ಕಂಡಾಗ ಸಹಜವಾಗಿಯೇ ಅಭಿಮಾನಿಗಳಲ್ಲಿ ಒಂದು ಉತ್ಸುಕತೆ ಮೂಡುತ್ತದೆ.
ನಟ ರಾಣಾ ದಗ್ಗುಬಾಟಿ ಅವರು ಇತ್ತೀಚಿಗೆ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ನಟನ ಜೊತೆಗೆ ಅವರ ಕುಟುಂಬದ ಸದಸ್ಯರು ಸಹಾ ತಿರುಮಲಕ್ಕೆ ಆಗಮಿಸಿದ್ದರು. ನಟ ದೇವಸ್ಥಾನದ ಅಧಿಕಾರಗಳ ಜೊತೆಗೆ ನಡೆದು ಬರುತ್ತಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳದ ಹಾಗೆ ಅವರು ಕೋರುತ್ತಿದ್ದರು. ಆದರೆ ಅಭಿಮಾನಿಯೋರ್ವ ಮಾತ್ರ ಹೇಗಾದರೂ ಫೋಟೋ ಪಡೆಯಬೇಕೆಂಬ ಹುಚ್ಚಿಗೆ ಬಿದ್ದು, ಸೆಲ್ಫಿ ತೆಗೆದುಕೊಳ್ಳಲು ಮುಂದೆ ಬಂದಿದ್ದಾನೆ. ಈ ವೇಳೆ ನಟ ರಾಣಾ ದಗ್ಗುಬಾಟಿ ಅವರು ಆ ವ್ಯಕ್ತಿಯ ಮೊಬೈಲ್ ಅನ್ನು ಕಿತ್ತುಕೊಂಡಿದ್ದಾರೆ.
ರಾಣಾ ಅವರ ಆ ರಿಯಾಕ್ಷನ್ ಕಂಡು ಒಂದು ಕ್ಷಣ ಅಭಿಮಾನಿ ಕಕ್ಕಾಬಿಕ್ಕಿಯಾಗಿದ್ದಾನೆ. ಆದರೆ ಅನಂತರ ನಟ ರಾಣಾ ಅಭಿಮಾನಿಗೆ ಆತನ ಮೊಬೈಲ್ ಅನ್ನು ವಾಪಸ್ಸು ನೀಡಿದ್ದು, ದೇವಸ್ಥಾನದಲ್ಲಿ ಸೆಲ್ಫಿ ತೆಗೆಯಬಾರದು ಎನ್ನುವ ಮಾತನ್ನು ಹೇಳಿದ್ದಾರೆ ಮತ್ತು ಅಭಿಮಾನಿಯ ಕಡೆಗೆ ನೋಡಿ ಮುಗುಳ್ನಗೆ ನೀಡಿದ್ದಾರೆ. ನಟನ ನಗು ಕಂಡು ಅಭಿಮಾನಿ ನಿರಾಳನಾಗಿದ್ದಾನೆ. ವೃತ್ತಿ ವಿಷಯಕ್ಕೆ ಬಂದರೆ ಇತ್ತೀಚಿಗೆ ನಟನ ವಿರಾಟಪರ್ವಂ ಸಿನಿಮಾ ಬಿಡುಗಡೆ ಆಗಿತ್ತಾದರೂ ಅದು ನಿರೀಕ್ಷಿತ ಮಟ್ಟದ ಗೆಲುವನ್ನು ಪಡೆಯಲು ವಿಫಲವಾಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.