ಸ್ಟೈಲಿಶ್ ಸ್ಟಾರ್ ನಿಂದ ಐಕಾನ್ ಸ್ಟಾರ್ ಆಗಿ ಬದಲಾಗಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಪ್ರಸ್ತುತ ತಮ್ಮ ಪುಷ್ಪ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಪುಷ್ಪ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಾ ಮುನ್ನಗುತ್ತಲಿದ್ದು, ಭಾರೀ ಯಶಸ್ಸನ್ನು ಪಡೆದುಕೊಂಡಿದ್ದು, ಕರ್ನಾಟಕದಲ್ಲೂ ಸಿನಿಮಾ ಉತ್ತಮ ಗಳಿಕೆಯನ್ನು ದಾಖಲಿಸಿದೆ. ಸಿನಿಮಾ ಸಾಧಿಸಿದ ಈ ವಿಜಯವನ್ನು ಸಂಭ್ರಮಿಸಲು ಮಂಗಳವಾರ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಸಕ್ಸಸ್ ಮೀಟ್ ನಲ್ಲಿ ವೇದಿಕೆಯ ಮೇಲೆ ಮಾತನಾಡುತ್ತಿದ್ದ ಅಲ್ಲು ಅರ್ಜುನ್ ಅವರು ನನ್ನನ್ನು ಸ್ಟಾರ್ ಮಾಡಿದ ನಿರ್ದೇಶಕ ಸುಕುಮಾರ್, ಆಗ ಸ್ಟೈಲಿಶ್ ಸ್ಟಾರ್ ಮಾಡಿದ ಅದೇ ನಿರ್ದೇಶಕ ಇಂದು ನನ್ನನ್ನು ಐಕಾನ್ ಸ್ಟಾರ್ ಮಾಡಿ ಇಡೀ ದೇಶ ನನ್ನ ಕಡೆ ನೋಡುವಂತೆ ಮಾಡಿದ್ದಾರೆ. ಅದಕ್ಕೆ ನಾನು ಸುಕುಮಾರ್ ಅವರಿಗೆ ಜೀವನ ಪರ್ಯಂತ ಋಣಿಯಾಗಿರುತ್ತೇನೆ ಎನ್ನುವ ಮಾತನ್ನು ಅಲ್ಲು ಅರ್ಜುನ್ ಹೇಳಿದ್ದಾರೆ. ನೀನು ಇಲ್ಲದೇ ಹೋಗಿದ್ದರೆ ನಾನಿಲ್ಲ ಎನ್ನುತ್ತಾ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ.
ನನ್ನ ಜೀವನದಲ್ಲಿ ಸುಕುಮಾರ್ ಕೊಡುಗೆ ಏನು ಎನ್ನುವುದನ್ನು ಪದಗಳಲ್ಲಿ ಹೇಳುವುದು ಸಾಧ್ಯವಿಲ್ಲ. ಪರುಗು ಸಿನಿಮಾ ಸಮಯದಲ್ಲಿ ನಾನು ಒಂದು ಕಾರನ್ನು ಕೊಂಡುಕೊಂಡೆ. ಅದರ ಬೆಲೆ 85 ಲಕ್ಷ ರೂ. ಆ ಕಾರಿನ ಸ್ಟೀರಿಂಗ್ ಹಿಡಿದು ಕೂತಾಗ ನಾನು ಈ ಹಂತಕ್ಕೆ ಬೆಳೆಯಲು ಯಾರು ಕಾರಣ ಎಂದು ನೆನಪಿಸಿಕೊಂಡಾಗ ಮನಸ್ಸಿನಲ್ಲಿ ಬಂದ ಮೊದಲ ಹೆಸರು ಸುಕುಮಾರ್ ಎಂದು ಭಾವುಕರಾಗಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್ ಇಡೀ ಕಾರ್ಯಕ್ರಮವನ್ನು ಎಮೋಷನಲ್ ಮಾಡಿದರು.
ಪ್ರತಿ ಸಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾವುಕನಾಗಬಾರದು ಅಂತ ಅಂದ್ಕೊಂಡಿರುತ್ತೇನೆ ಆದರೆ ಇಂದು ಯಾಕೋ ಗೊತ್ತಿಲ್ಲದೇ ಭಾವುಕನಾಗಿಬಿಟ್ಟೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಅಲ್ಲು ಅರ್ಜುನ್ ತನ್ನ ಬಗ್ಗೆ ಅಷ್ಟೊಂದು ಭಾವುಕರಾಗಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದನ್ನು ಕಂಡು ನಿರ್ದೇಶಕ ಸುಕುಮಾರ್ ಅವರು ಸಹಾ ಭಾವುಕರಾದರು. ಒಟ್ಟಾರೆ ಸಕ್ಸಸ್ ಮೀಟ್ ನಲ್ಲಿ ಅಲ್ಲು ಅರ್ಜುನ್ ತಮ್ಮ ಸಕ್ಸಸ್ ಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿ ಗೌರವಿಸಿದ್ದಾರೆ.