ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದುಕೊಂಡಿದೆ. ಅಲ್ಲದೇ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಗಳಿಸಿದ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡ ಸಿನಿಮಾ ಹೊಸ ದಾಖಲೆಯನ್ನು ಮಾಡಿದೆ. ಸಿನಿಮಾ ಡಬ್ಬಿಂಗ್ ಮೂಲಕ ಅನ್ಯ ಭಾಷೆಗಳಲ್ಲಿ ಸಹಾ ಯಶಸ್ಸು ಪಡೆದು ಮುನ್ನುಗ್ಗಿದೆ. ಇನ್ನು ಕಾಂತಾರ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಈ ಸಿನಿಮಾದ ವರಾಹ ರೂಪಂ ಹಾಡಿನ ಸಂಗೀತದ ವಿಚಾರದಲ್ಲಿ ಆ ರೋ ಪವೊಂದು ಕೇಳಿ ಬಂದಿತ್ತು. ಇದೀಗ ಈ ಆರೋಪ ಮತ್ತೊಂದು ಹೊಸ ರೂಪವನ್ನು ಪಡೆದುಕೊಂಡು, ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ.
ಕಾಂತಾರ ಸಿನಿಮಾದಲ್ಲಿನ ಪ್ರಮುಖ ಆಕರ್ಷಣೆ ಎನಿಸಿರುವುದು ಪಂಜುರ್ಲಿ ದೈವವನ್ನು ಹೊಗಳುವ ವರಾಹ ರೂಪಂ ಹಾಡು ಮತ್ತು ಅದರ ಸಂಗೀತ. ಈ ಹಾಡಿನ ವೇಳೆ ಪ್ರೇಕ್ಷಕರು ಮೈ ರೋಮಾಂಚನಗೊಳ್ಳುತ್ತಿದ್ದಾರೆ. ಈ ಹಾಡು ಜನಪ್ರಿಯ ಪಡೆದಂತೆ ಅದರ ಬೆನ್ನಲ್ಲೇ ಈ ಹಾಡಿನ ಸಂಗೀತವು ಮಲೆಯಾಳಂನ ನವರಸಂ ಸಂಗೀತದ ಕಾಪಿ ಮಾಡಿದೆ ಎನ್ನುವ ಆ ರೋ ಪವೊಂದು ಕೇಳಿ ಬಂದಿದೆ. ಆಗ ಈ ವಿಚಾರಕ್ಕೆ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಅವರು ಎರಡು ಹಾಡುಗಳ ಸಂಗೀತ ವಿಭಿನ್ನ ಎಂದು ಹೇಳಿ, ಎರಡರ ನಡುವೆ ಯಾವುದೇ ರೀತಿಯ ಸಾಮ್ಯತೆ ಇಲ್ಲ ಎಂದಿದ್ದರು.
ಆದರೆ ಈಗ ನವರಸಂ ಹಾಡಿನ ಸಂಗೀತ ನೀಡಿದ್ದ ತೈಕ್ಕುಡಂ ಬ್ರಿಡ್ಜ್ ತಂಡವು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಒಂದಷ್ಟು ವಿಚಾರಗಳನ್ನು ಅವರು ಉಲ್ಲೇಖ ಮಾಡಿದ್ದಾರೆ.ನಾವು ನಮ್ಮ ಕೇಳುಗರಿಗೆ ತಿಳಿಸುವುದು ಏನೆಂದರೆ, ತೈಕ್ಕುಡಂ ಬ್ರಿಡ್ಜ್ ತಂಡವು ‘ಕಾಂತಾರ’ ಸಿನಿಮಾದ ಜೊತೆಗೆ ಯಾವುದೇ ರೀತಿಯ ಸಹಯೋಗವನ್ನು ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಆದ್ದರಿಂದ ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಾಡಿನ ಹಕ್ಕುಗಳನ್ನು ಕುರಿತಂತೆ ಕಾಂತಾರ ಸಿನಿಮಾ ತಂಡದವರು ನಮಗೆ ಯಾವುದೇ ರೀತಿಯಲ್ಲಿ ಕ್ರೆಡಿಟ್ ನೀಡಿಲ್ಲ. ಅಲ್ಲದೇ ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎನ್ನುವಂತೆ ಪ್ರಚಾರವನ್ನು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ನಮಗೆ ಬೆಂಬಲವನ್ನು ನೀಡಬೇಕು ಎಂದು ನಮ್ಮ ಕೇಳುಗರಲ್ಲಿ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇವೆ. ಮ್ಯೂಸಿಕ್ ಕಾಪಿ ರೈಟ್ ಉಳಿಸುವ ಬಗ್ಗೆ ಎಲ್ಲ ಸಂಗೀತ ಕಲಾವಿದರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು ಎಂಬುದಾಗಿ ಮನವಿಯನ್ನು ಮಾಡಿಕೊಳ್ಳುತ್ತೇವೆ ಎಂದು ನವರಸಂ ಹಾಡನ್ನು ರಚಿಸಿದ ‘ತೈಕ್ಕುಡಂ ಬ್ರಿಡ್ಜ್’ ತಂಡವು ಪೋಸ್ಟ್ ಮಾಡಿದೆ.