ಲೈಗರ್ ಸಿನಿಮಾ ಸೋಲಿನ ಕಹಿಯಿಂದ ಈ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಇನ್ನೂ ಹೊರ ಬಂದಿಲ್ಲ. ಅಲ್ಲದೇ ಇದೇ ಕಾಂಬಿನೇಷನ್ ನಲ್ಲಿ ಮೂಡಿ ಬರಬೇಕಾಗಿದ್ದ ಜನಗಣಮನ ಸಿನಿಮಾ ಚಿತ್ರೀಕರಣ ಕೂಡಾ ನಿಂತು ಹೋಗಿದೆ. ಚಾರ್ಮಿ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದರೆ, ಪೂರಿ ಜಗನ್ನಾಥ್ ಮುಂಬೈನಿಂದ ಮನೆ ಖಾಲಿ ಮಾಡಿಕೊಂಡು ಮತ್ತು ಹೈದರಾಬಾದ್ ಗೆ ಮರಳಿದ್ದಾರೆ. ಆದರೆ ಸಮಸ್ಯೆ ಇಷ್ಟಕ್ಕೇ ಮುಗಿದಿಲ್ಲ. ಈಗ ಇವರಿಬ್ಬರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಸಿನಿಮಾ ಸೋಲಿನ ಬೆನ್ನಲ್ಲೇ ಇಬ್ಬರೂ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.
ಹೌದು, ಲೈಗರ್ ಸಿನಿಮಾ ನಿರ್ಮಾಣಕ್ಕೆ ಪೂರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಕೌರ್ ಹಣವನ್ನು ಎಲ್ಲಿಂದ ತಂದರು ಎನ್ನುವುದು ಅನುಮಾನಗಳಿಗೆ ಕಾರಣವಾಗಿದೆ. ಲೈಗರ್ ಸಿನಿಮಾ ನಿರ್ಮಾಣದಲ್ಲಿ ಹೂಡಿಕೆ ಮಾಡಲಾಗಿದೆ ಎನ್ನಲಾಗಿದ್ದ ವಿದೇಶಿ ಹೂಡಿಕೆ ಮತ್ತು ಇತರೆ ಹೂಡಿಕೆಗಳ ಕುರಿತಾಗಿ ಇಡಿ ತನಿಖೆಯನ್ನು ನಡೆಸಿದೆ. ಈ ಸಿನಿಮಾವನ್ನು ಪೂರಿ ಕನೆಕ್ಟ್ ಬ್ಯಾನರ್ ನಲ್ಲಿ ಪೂರಿ ಜಗನ್ನಾಥ್ ಅವರು ನಿರ್ಮಾಣ ಮಾಡಿದ್ದರು. ಇದರಲ್ಲಿ ನಟಿ ಚಾರ್ಮಿ ಮತ್ತು ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕೂಡ ಹೂಡಿಕೆಯನ್ನು ಮಾಡಿತ್ತು.
ಈ ಸಿನಿಮಾದಲ್ಲಿ ರಾಜಕಾರಣಿಗಳು ಸಹಾ ಹಣವನ್ನು ಹೂಡಿಕೆ ಮಾಡಿದ್ದಾರೆ ಎನ್ನುವ ಅನುಮಾನದಿಂದ ಇಡಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಗೆ ನೋಟೀಸ್ ಗಳನ್ನು ಜಾರಿ ಮಾಡಿತ್ತು. ನೋಟೀಸ್ ಜಾರಿಯಾದ ನಂತರ ನಿನ್ನೆ ನಟಿ ಚಾರ್ಮಿ ಕೌರ್ ಮತ್ತು ಪೂರಿ ಜಗನ್ನಾಥ್ ಇಬ್ಭರೂ ಸಹಾ ಇಡಿ ವಿಚಾರಣೆಗೆ ಹಾಜರಾಗಿದ್ದರು. ಇಬ್ಬರಿಗೂ ಸಹಾ ಹದಿನೈದು ದಿನಗಳ ಹಿಂದೆಯೇ ನೋಟೀಸ್ ಜಾರಿ ಮಾಡಿ, ವಿಚಾರಣೆಯ ದಿನಾಂಕವನ್ನು ತಿಳಿಸಲಾಗಿತ್ತು ಎನ್ನಲಾಗಿದೆ. ಇಬ್ಬರನ್ನೂ ಸಹಾ ಇಡಿ ಅಧಿಕಾರಿಗಳು ಸುಮಾರು 13 ಗಂಟೆಗಳ ಕಾಲ ವಿಚಾರಣೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಇಡಿ ಡ್ರ ಗ್ಸ್ ಪ್ರಕರಣವೊಂದರ ಹಿನ್ನೆಲೆಯಲ್ಲಿ ಸಹಾ ಪೂರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಕೌರ್ ಇಬ್ಬರನ್ನೂ ವಿಚಾರಣೆ ಮಾಡಿದ ವಿಷಯ ಸಹಾ ದೊಡ್ಡ ಸುದ್ದಿಯಾಗಿತ್ತು. ಆದರೆ ಆ ಕೇಸ್ ನ ವಿಚಾರಣೆ ಮುಗಿದ ಮೇಲೆ ಈ ಇಬ್ಬರೂ ಸೇರಿದಂತೆ ಇನ್ನಿತರ ಸಿನಿಮಾ ಸೆಲೆಬ್ರಿಟಿಗಳಿಗೂ ಸಹಾ ಕ್ಲೀನ್ ಚಿಟ್ ನೀಡಲಾಗಿತ್ತು. ಇನ್ನು ಈಗ ನಡೆದಿರುವ ಸುದೀರ್ಘ ಅವಧಿಯ ವಿಚಾರಣೆಯಲ್ಲಿ ಇವರನ್ನು ಏನೆಲ್ಲಾ ಪ್ರಶ್ನೆ ಮಾಡಲಾಯಿತು, ಅದಕ್ಕೆ ಇವರು ಕೊಟ್ಟ ಉತ್ತರ ಏನು? ಎಂದು ತಿಳಿಯಲು ನೆಟ್ಟಿಗರು ಕಾತರರಾಗಿದ್ದಾರೆ. ಒಟ್ಟಾರೆ ಮಾದ್ಯಮಗಳ ಮುಂದೆ ದೊಡ್ಡ ಸುದ್ದಿಯಾಗದ ಹಾಗೆ ಚಾರ್ಮಿ ಮತ್ತು ಪೂರಿ ಜಗನ್ನಾಥ್ ವಿಚಾರಣೆಗೆ ಹಾಜರಾದರೂ ಅನಂತರ ಅದು ಹೊರ ಬಂದಿದೆ.