ನಟ ಅಜಯ್ ರಾವ್ ಮತ್ತು ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಲವ್ ಯು ರಚ್ಚು ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಟಿ ರಚಿತಾ ರಾಮ್ ಅವರು ಪರಭಾಷಾ ಸಿನಿಮಾಗಳಿಂದ ಕನ್ನಡ ಸಿನಿಮಾಗಳು ಇಂದು ಎದುರಿಸುತ್ತಿರುವ ಥಿಯೇಟರ್ ಸಮಸ್ಯೆ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪರೋಕ್ಷವಾಗಿ ಅವರು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ರಶ್ಮಿಕಾ ಅಂಡ್ ಟೀಂ ಪುಷ್ಪ ಸಿನಿಮಾ ಪ್ರಮೋಷನ್ ಗೆ ಬಂದಿದ್ದು ಎಲ್ಲರಿಗೂ ತಿಳಿದಿದೆ.
ರಚಿತರಾಮ್ ಮಾತನಾಡುತ್ತಾ, ನಮ್ಮ ಕನ್ನಡ ಸಿನಿಮಾ ರಿಲೀಸ್ ಆಗ್ತಿದೆ, ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗ್ತಿದೆ ಎಂದಾಗ ಅದಕ್ಕೆ ಸಪೋರ್ಟ್ ಮಾಡಿ ಎಂದಿದ್ದಾರೆ. ನಮ್ಮ ಭಾಷೆ, ನಮ್ಮ ಸಿನಿಮಾ, ನಮ್ಮ ಖುಷಿ. ಬೇರೆ ಸ್ಟೇಟ್ ನಲ್ಲಿ ಅವರ ಭಾಷೆಯ ಮೇಲೆ ಅವರಿಗೆ ಎಷ್ಟು ಅಭಿಮಾನ ಇರುತ್ತದೆಯೋ, ಅಷ್ಟೇ ಅಭಿಮಾನ ನಮಗೆ ನಮ್ಮ ಕನ್ನಡ ಭಾಷೆಯ ಮೇಲಿದೆ. ನಾವು ಕನ್ನಡದವರು ತುಂಬಾ ವಿಶಾಲ ಹೃದಯದವರು. ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತೇವೆ.
ಆ ಪ್ರೀತಿ ಯಾವಾಗಲೂ ಹಾಗೆಯೇ ಇರಲಿ. ಆದರೆ ಎಂಡ್ ಆಫ್ ದ ಡೇ ಕನ್ನಡ ಅಂತ ಬಂದರೆ ನಮ್ಮ ಕನ್ನಡ, ನಮ್ಮ ಹೆಮ್ಮೆಯ ಕನ್ನಡ ಯಾವುದೇ ಕಾರಣಕ್ಕೂ ಅದನ್ನು ಬಿಟ್ಟುಕೊಡಬಾರದು ಎಂದಿದ್ದಾರೆ. ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲಿ ಬೆಲೆ ಇಲ್ಲದ ಹಾಗೆ ಆಗಿದೆ. ಹೆಸರಿಗೆ ಮಾತ್ರವೇ ಡಬ್ಬಿಂಗ್ ಸಿನಿಮಾ ಎಂದು ಹೇಳಿಕೊಂಡು ನೂರಾರು ಥಿಯೇಟರ್ ಗಳಲ್ಲಿ ಹಲವಾರು ಭಾಷೆಯ ಸಿನಿಮಾಗಳು ಬಿಡುಗಡೆಯಾಗುತ್ತದೆ. ಆದರೆ ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲಿ ಥಿಯೇಟರ್ ಹುಡುಕುವುದಕ್ಕೆ ಭೂತಕನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ಎದುರಾಗಿದೆ ಎಂದು ರಚಿತಾ ರಾಮ್ ಅಸಮಾಧಾನ ಹೊರಹಾಕಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಪುಷ್ಪ ಸಿನಿಮಾದ ಕನ್ನಡ ಡಬ್ಬಿಂಗ್ ನ ಪ್ರಮೋಷನ್ ಗಾಗಿ ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಬಂದು ಹೋಗಿದ್ದಾರೆ. ರಶ್ಮಿಕಾ ಜನರನ್ನು ಸಿನಿಮಾ ನೋಡಿ ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ರಚಿತಾ ರಾಮ್ ಪರಭಾಷೆ ಸಿನಿಮಾಗಳ ಬಗ್ಗೆ ಗುಡುಗಿರುವುದು ರಶ್ಮಿಕಾ ಅಂಡ್ ಟೀಂ ಗೆ ಪರೋಕ್ಷವಾಗಿ ಉತ್ತರವನ್ನು ರವಾನಿಸಿದ್ದಾರೇನೋ ಎನಿಸುವಂತಿದೆ.