ಬಾಲಿವುಡ್ ಅಂಗಳದಲ್ಲಿ ಸದ್ಯಕ್ಕಂತೂ ಯಾವುದೇ ಬಾಲಿವುಡ್ ಸಿನಿಮಾದ ಸುದ್ದಿಗಿಂತ ಹೆಚ್ಚು ಸದ್ದು ಮಾಡುತ್ತಿರುವುದು ಬಾಲಿವುಡ್ ನ ಸ್ಟಾರ್ ಜೋಡಿಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಸುದ್ದಿ. ಹೌದು ಅದ್ದೂರಿಯಾಗಿ ನಡೆದ ಕಪೂರ್ ಹಾಗೂ ಭಟ್ ಕುಟುಂಬದ ಕುಡಿಗಳ ಮದುವೆಯ ಸಂಭ್ರಮದ ಕುರಿತಾದ ನೂರು ಸುದ್ದಿಗಳು ಅಭಿಮಾನಿಗಳನ್ನು ರಂಜಿಸುತ್ತಿದೆ. ಇನ್ನು ಏಪ್ರಿಲ್ 14 ಕ್ಕೆ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಜೋಡಿಯು ತಾವು ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸವನ್ನು ಮುಗಿಸಲು, ಕೆಲಸಕ್ಕೆ ಹಿಂತಿರುಗಿದ್ದಾರೆ.
ಈ ಸ್ಟಾರ್ ಜೋಡಿಯ ಮದುವೆಯ ಬೆನ್ನಲ್ಲೇ ಒಂದು ವಿಷಯ ಬಾಲಿವುಡ್ ಅಂಗಳದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಹೌದು, ಆಲಿಯಾ ಮತ್ತು ರಣಬೀರ್ ಮದುವೆಯ ರಿಸಪ್ಷನ್ ಗೆ ಬಾಲಿವುಡ್ ನ ಬಹುತೇಕ ಎಲ್ಲಾ ಸ್ಟಾರ್ ಕುಟುಂಬಗಳಿಗೆ ಆಹ್ವಾನವನ್ನು ನೀಡಲಾಗಿತ್ತಾದರೂ, ಬಾಲಿವುಡ್ ನ ಸಿನಿ ಕುಟುಂಬಗಳಲ್ಲಿ ಬಹಳ ದೊಡ್ಡ ಸ್ಥಾನ ಮಾನವನ್ನು ಪಡೆದಿರುವಂತಹ ಬಚ್ಚನ್ ಕುಟುಂಬಕ್ಕೆ ಮತ್ತು ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಮಾತ್ರ ಆಹ್ವಾನವನ್ನು ನೀಡಲಾಗಿರಲಿಲ್ಲ. ಹಾಗಾದರೆ ಅವರಿಗೆ ಆಮಂತ್ರಣ ನೀಡದಿರಲು ಕಾರಣವಾದರೂ ಏನು? ಎನ್ನುವುದು ಅನೇಕರ ಪ್ರಶ್ನೆಯಾಗಿದೆ.
ಆಲಿಯಾ ಹಾಗೂ ರಣಬೀರ್ ಮದುವೆ ಸಂಭ್ರಮಕ್ಕೆ ಕೆಲವರಿಗೆ ಮಾತ್ರವೇ ಆಹ್ವಾನ ನೀಡಲಾಗಿತ್ತು. ಅನಂತರ ಏಪ್ರಿಲ್ 16 ರಂದು ಅದ್ದೂರಿಯಾದ ರಿಸಪ್ಷನ್ ನಡೆಸಿ ಬಾಲಿವುಡ್ ಎಲ್ಲಾ ಸ್ಟಾರ್ ಗಳಿಗೆ, ಸೆಲೆಬ್ರಿಟಿ ಗಣ್ಯರಿಗೆ ಆಹ್ವಾನವನ್ನು ನೀಡಲಾಗಿತ್ತು. ಆದರೆ ಬಚ್ಚನ್ ಕುಟುಂಬಕ್ಕೆ ಮಾತ್ರ ಆಹ್ವಾನ ನೀಡಿಲ್ಲ. ಅಮಿತಾಬ್ ಅವರ ಮಗಳು ಶ್ವೇತಾ ಬಚ್ಚನ್ ರಣಬೀರ್ ಗೆ ಸಂಬಂಧಿಯಾದ ಹಿನ್ನೆಲೆಯಲ್ಲಿ ಅವರಿಗೆ ಮಾತ್ರವೇ ಆಹ್ವಾನ ನೀಡಲಾಗಿದ್ದು, ಬಿಗ್ ಬಿ ಕುಟುಂಬದ ಇನ್ನಾರಿಗೂ ಆಮಂತ್ರಣ ನೀಡಿಲ್ಲ.
ಇನ್ನೊಂದೆಡೆ ರಣಬೀರ್ ಕಪೂರ್ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಸಾವರಿಯಾ ಸಿನಿಮಾ ಮೂಲಕವೇ ಸಿನಿ ರಂಗಕ್ಕೆ ಅಡಿಯಿಟ್ಟರು. ಇತ್ತೀಚಿಗಷ್ಟೇ ಆಲಿಯಾ ಭಟ್ ಗೆ ಭರ್ಜರಿ ಗೆಲುವನ್ನು ತಂದುಕೊಟ್ಟ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾವನ್ನು ಸಹಾ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದರು. ಹೀಗೆ ವಧು ವರ ಇಬ್ಬರಿಗೂ ಯಶಸ್ಸು ತಂದು ಕೊಟ್ಟ ನಿರ್ದೇಶಕನಿಗೂ ರಿಸಪ್ಷನ್ ಗೆ ಆಹ್ವಾನ ನೀಡಲಾಗಿಲ್ಲ.
ಬಾಲಿವುಡ್ ನ ಬಹುತೇಕ ಎಲ್ಲಾ ಕಲಾವಿದರಿಗೆ ರಿಸಪ್ಷನ್ ಗೆ ಆಹ್ವಾನ ನೀಡಿದ ಕಪೂರ್ ಕುಟುಂಬದ ಗೆಸ್ಟ್ ಲಿಸ್ಟ್ ನಲ್ಲಿ ಅಮಿತಾಬ್ ಬಚ್ಚನ್ ಕುಟುಂಬ ಹಾಗೂ ಸಂಜಯ್ ಲೀಲಾ ಬನ್ಸಾಲಿ ಹೆಸರು ಇಲ್ಲದಿರುವುದು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದೆ. ಕರೆದು ಗೈರಾದರೆ ಅದೊಂದು ರೀತಿ, ಆದರೆ ಇಲ್ಲಿ ಈ ಇಬ್ಬರು ದಿಗ್ಗಜರಿಗೆ ಆಹ್ವಾನವನ್ನೇ ನೀಡಿಲ್ಲ ಎನ್ನುವುದೇ ಎಲ್ಲರ ಕುತೂಹಲವನ್ನು ಕೆರಳಿಸಿದೆ ಹಾಗೂ ಕಾರಣ ತಿಳಿಯುವ ಕುತೂಹಲವನ್ನು ಮೂಡಿಸಿದೆ.