ಕಾಶಿ ವಿಶ್ವನಾಥ ದೇವಾಲಯದ ಧಾಮ ನಿರ್ಮಾಣದ ವಿಚಾರವಾಗಿ ಗ್ಯಾನ್ವಾಪಿ ಮಸೀದಿಯ ಪಕ್ಕದ ಸುಮಾರು 1700 ಚದರ ಅಡಿಗಳ ಜಾಗವನ್ನು ಬಿಟ್ಟು ಕೊಡಲು ಮುಸ್ಲಿಂ ಸಮುದಾಯ ತನ್ನ ಒಪ್ಪಿಗೆಯನ್ನು ನೀಡಿದೆ ಎನ್ನಲಾಗಿದೆ. ಮುಸ್ಲಿಂ ಸಮುದಾಯ ಮಾಡಿರುವ ಈ ನಿರ್ಧಾರಕ್ಕೆ ಪ್ರತಿಯಾಗಿ ಕಾಶಿ ವಿಶ್ವನಾಥ ಮಂದಿರದ ಆಡಳಿತ ಮಂಡಳಿಯು ಸಹಾ ಮುಸ್ಲಿಂ ಸಮುದಾಯಕ್ಕೆ ಬೇರೊಂದು ಕಡೆ 1000 ಚದರ ಅಡಿಗಳ ಭೂಮಿಯನ್ನು ನೀಡುವ ಭರವಸೆಯನ್ನು ಸಹಾ ನೀಡಿದೆ ಎನ್ನಲಾಗಿದೆ. ಇದೀಗ ಮುಸ್ಲಿಂ ಸಮುದಾಯದ ನಿರ್ಧಾರದೊಂದಿಗೆ ದೇಗುಲದ ಕಾರಿಡಾರ್ ನಿರ್ಮಾಣದ ವಿಚಾರದಲ್ಲಿ ಎದ್ದಿದ್ದ ಎಲ್ಲಾ ಅಡೆ ತಡೆಗಳ ನಿವಾರಣೆ ಆದಂತಾಗಿದೆ.
ಈ ಯೋಜನೆಯು ಪೂರ್ಣವಾದ ಮೇಲೆ ಕಾಶಿ ವಿಶ್ವನಾಥ ಕ್ಷೇತ್ರವು ದೇಶದ ಒಂದು ಪ್ರಮುಖವಾದ ಪ್ರವಾಸಿ ತಾಣ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಳ್ಳಲಿದೆಯೆಂದು ಹೇಳಲಾಗಿದೆ. ಈ ಯೋಜನೆಯ ಪೂರ್ತಿಯೊಂದಿಗೆ ಕಾಶಿಯ ದೇವಾಲಯದಿಂದ ಮಣಿ ಕರ್ಣಿಕಾ, ಜಲಸೇನ್ ಮತ್ತು ಲಲಿತಾ ಘಾಟ್ ಗಳಿಗೆ ನೇರ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಮತ್ತೊಂದು ವಿಶೇಷವೆಂದರೆ ಆಗ ಕಾಶಿ ವಿಶ್ವನಾಥನ ದೇವಾಲಯದಿಂದಲೇ ನೇರವಾಗಿ ಗಂಗಾ ಆರತಿಯನ್ನು ಸಹಾ ವೀಕ್ಷಣೆ ಮಾಡುವ ಅವಕಾಶ ಲಭ್ಯವಾಗಲಿದೆ.
ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ ನಿರ್ಮಾಣ ಕಾರ್ಯಕ್ಕೆ ದೇಗುಲದ ಸುತ್ತ ಮುತ್ತಲಿರುವ ಅನೇಕ ಕಟ್ಟಡಗಳು ಅಡೆ ತಡೆಯಾಗಿದ್ದವು. ಕಾರಿಡಾರ್ ನಿರ್ಮಾಣ ಯೋಜನೆಗೆ ತೆರವು ಗೊಳಿಸಲೇಬೇಕಾದ ಸುಮಾರು 166 ಕಟ್ಟಡಗಳನ್ನು ಗುರುತಿಸಲಾಗಿತ್ತು ಎನ್ನಲಾಗಿದ್ದು, ಇದರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಮೀನು ಸಹಾ ಸೇರಿತ್ತು. ಈ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿಯು ಮುಸ್ಲಿಂ ಸಮುದಾಯದ ಜೊತೆಗೆ ಮಾತುಕತೆಯನ್ನು ನಡೆಸಿ ಸಮಸ್ಯೆಗೊಂದು ಪರಿಹಾರವನ್ನು ಕಂಡುಕೊಂಡಿದ್ದು, ಜುಲೈ ಒಂಬತ್ತರಂದು ಜಮೀನು ಸ್ವಾಧೀನ ಪಡಿಸಿ ಕೊಳ್ಳುವ ಒಪ್ಪಂದ ಅಂತಿಮವಾಗಿದೆ.