ಇತ್ತೀಚಿಗೆ ತಾಯಿಯೊಬ್ಬರು ತಮ್ಮ ಮಗುವನ್ನು ತನ್ನ ಒಡಲಿನಲ್ಲಿ ಕೂರಿಸಿಕೊಂಡು ಹೈದ್ರಾಬಾದ್ ನ ಮೆಟ್ರೋ ರೈಲಿನಲ್ಲಿ ಸೀಟಿಲ್ಲದೇ ಕೆಳಗೇ ಕುಳಿತು ಪ್ರಯಾಣವನ್ನು ಮಾಡಿದ್ದರು. ಈ ದೃಶ್ಯದ ವೀಡಿಯೋ ಹಾಗೂ ಫೋಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಮಾತ್ರವೇ ಅಲ್ಲದೇ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು. ಮಾನವ ಸಮಾಜದಲ್ಲಿ ಮಾನವೀಯತೆ ಎನ್ನುವುದು ನಾಗರಿಕರೆನಿಸಕೊಂಡವರಿಂದ ದೂರಾಗಿದೆ ಎನ್ನುವುದನ್ನು ಇದು ಬಿಂಬಿಸಿತ್ತು. ವೈರಲ್ ವೀಡಿಯೋ ನೋಡಿದ ಜನರಲ್ಲಿ ಅನೇಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಈ ಫೋಟೋ ಹಾಗೂ ವೀಡಿಯೋ ಬಗ್ಗೆ ಸುಧಾ ಮೂರ್ತಿ ಅವರು ಪೋಸ್ಟ್ ಶೇರ್ ಮಾಡಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಸುಧಾ ಮೂರ್ತಿ ಅವರು ಶೇರ್ ಮಾಡಿದ ಪೋಸ್ಟ್ ನಲ್ಲಿ, ‘ನಾವು ಎಷ್ಟೇ ಮೇಧಾವಿಗಳಾಗಿರಬಹುದು, ಅತಿಯಾದ ವಿದ್ಯಾವಂತರೂ ಆಗಿರಬಹುದು, ಶ್ರೀಮಂತರೂ ಆಗಿರಬಹುದು. ಆದರೆ ಇಷ್ಟೆಲ್ಲ ಇದ್ದೂ ಸಾಮಾನ್ಯಜ್ಞಾನ ಇಲ್ಲವೆಂದಾದರೆ ವಿದ್ಯೆ, ಶ್ರೀಮಂತಿಕೆಗೆ ಯಾವುದೇ ಬೆಲೆ ಇರೋಲ್ಲ.
ನಮ್ಮ ಮನೆ ಹಿರಿಯರು ಅಥವಾ ನಮ್ಮ ಮನೆಯಲ್ಲಿ ಚಿಕ್ಕಮಗು ಇರುವಂತವರು ಪ್ರಯಾಣಿಸುವಾಗ ನಮ್ಮೆದುರು ಬಂದರೆ ಅವರಿಗೆ ನಾವು ಕುಳಿತುಕೊಳ್ಳಲು ಆಸನ ಬಿಟ್ಟು ಕೊಡುತ್ತೇವೆ. ಆದರೆ ಬೇರೆ ಯಾರಾದರೂ ಬಂದರೆ ಅವರು ಹಿರಿಯರೇ ಆಗಿರಲಿ ಅಥವಾ ನಿಲ್ಲಲು ಅಶಕ್ತರೇ ಆಗಿರಲಿ ಅವರಿಗೆ ಆಸನ ನೀಡುವುದಿಲ್ಲ. ನಮ್ಮ ಆಲೋಚನೆ ಬದಲಾಗಲೇಬೇಕು’ ಎಂದು ಈ ವಿಚಾರವಾಗಿ ಪ್ರತಿಕ್ರಿಯೆಯನ್ನು ನೀಡಿದ್ದು, ನಿಜಕ್ಕೂ ಪ್ರತಿಯೊಬ್ಬರನ್ನೂ ಇದು ಚಿಂತಿಸುವಂತೆ ಮಾಡಿದೆ.
ವೈರಲ್ ವೀಡಿಯೋದಲ್ಲಿ ಒಬ್ಬ ಮಹಿಳೆ ತಮ್ಮ ಮಗುವನ್ನು ಮಡಿಲಿನಲ್ಲಿಟ್ಟುಕೊಂಡು, ಸೀಟು ಸಿಗದೇ ಕೆಳಗೆ ಕುಳಿತಿದ್ದರೆ, ಸೀಟುಗಳ ಮೇಲಿದ್ದ ವಿದ್ಯಾವಂತರು, ನಾಗರಿಕ ಸಮಾಜದ ಪ್ರಬುದ್ಧ ಪ್ರಜೆಗಳು ಕೂಡಾ ಮಾನವೀಯತೆಯನ್ನು ಮರೆತು ಕುಳಿತಿರುವುದು ನೋಡಿದಾಗ ಒಮ್ಮೆ ಮಾನವೀಯತೆ ಎನ್ನುವುದೆಲ್ಲಾ ಕೇವಲ ಬರಹಗಳಿಗೆ, ಮಾತುಗಳಿಗೆ ಸೀಮಿತವಾಗಿ ಹೋಗಿದೆಯೇ? ಎನ್ನುವ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ.