ತೆಲುಗು ಸಿನಿಮಾ ರಂಗದಲ್ಲಿ ಹಿರಿಯ ನಟಿ ಸಾವಿತ್ರಿ ಅವರ ಜೀವನದ ಕಥೆಯನ್ನು ಆಧರಿಸಿ ತೆರೆಗೆ ಬಂದ ಸಿನಿಮಾ ಮಹಾನಟಿ, ಈ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ನಟನೆಯನ್ನು ನೋಡಿ ಇಡೀ ಚಿತ್ರರಂಗವೇ ಅಚ್ಚರಿ ಪಟ್ಟಿತ್ತು. ನಟಿ ಸಾವಿತ್ರಿಯಂತೆ ಕಂಡಿದ್ದ ಕೀರ್ತಿ ಸುರೇಶ್ ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ನಟಿಯಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾದರು. ಈ ಸಿನಿಮಾ ನಟಿಯ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲಾಯಿತು. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾವನ್ನು ತೆಲುಗಿನ ಪ್ರಖ್ಯಾತ ನಿರ್ಮಾಪಕ ಅಶ್ವಿನಿ ದತ್ ಅವರು ನಿರ್ಮಾಣ ಮಾಡಿದ್ದಾರೆ. ಮಹಾನಟಿ ತೆಲುಗು ಚಿತ್ರರಂಗದಲ್ಲಿ ಒಂದು ಅದ್ಭುತ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಸಹಾ ಪಡೆದುಕೊಂಡು ಅತ್ಯುತ್ತಮ ಸಿನಿಮಾಗಳ ಸಾಲಿಗೆ ಸೇರಿದೆ.
ಆದರೆ ಈ ಸಿನಿಮಾದ ನಿರ್ಮಾಪಕ ಅಶ್ವಿನಿ ದತ್ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ , ಸಿನಿಮಾದ ಕುರಿತಾಗಿ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವಿಚಾರಗಳು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ. ಅಶ್ವಿನಿ ದತ್ ಅವರು ಹೇಳುವಂತೆ, ಮಹಾನಟಿ ಸಿನಿಮಾದ ನಾಯಕಿಯಾಗಿ ಮೊದಲು ಕೀರ್ತಿ ಸುರೇಶ್ ಅವರ ಆಯ್ಕೆ ಆಗಿರಲಿಲ್ಲವಂತೆ. ಬದಲಿಗೆ ದಕ್ಷಿಣ ಸಿನಿಮಾ ರಂಗದ ಮತ್ತೋರ್ವ ಜನಪ್ರಿಯ ನಟಿ, ಮಲೆಯಾಳಂ ನಲ್ಲಿ ವಿಶೇಷ ಸ್ಥಾನ ಪಡೆದಿರುವ ನಟಿ ಸಾವಿತ್ರಿ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದರಂತೆ.
ಅದರಂತೆ ನಿರ್ದೇಶಕ ಆ ನಟಿಯನ್ನು ಭೇಟಿಯಾಗಿ ಸಿನಿಮಾ ವಿಚಾರವಾಗಿ ಹೇಳಿದಾಗ, ಆ ನಟಿ ಸಿನಿಮಾದ ಕೊನೆಯ ಭಾಗದ ಕಥೆಯಲ್ಲಿ, ಸಾವಿತ್ರಿ ಪಾತ್ರವು ಮದ್ಯ ಸೇವನೆ ಮಾಡುವ ದೃಶ್ಯಗಳು ಇದೆಯಾ? ಹಾಗೇನಾದರೂ ಅಂತಹ ದೃಶ್ಯಗಳು ಇದ್ದರೆ ತಾನು ನಟಿಸುವುದಿಲ್ಲ ಎಂದರಂತೆ. ಆಗ ಅಶ್ವಿನಿ ದತ್ ಅವರು ಸ್ಕ್ರಿಪ್ಟ್ ವಿಚಾರವಾಗಿ ಕೈಯ್ಯಾಡಿಸಲು ಆಕೆ ಯಾರು ? ಅದಕ್ಕೆ ನಾನು ಆಕೆಯನ್ನು ಸಿನಿಮಾದಿಂದ ಕೈ ಬಿಡಲು ಹೇಳಿದೆ. ಆ ನಟಿ ಸಾವಿತ್ರಿ ಪಾತ್ರವನ್ನು ನಿರ್ವಹಣೆ ಮಾಡಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ನಾನು ಭಾವಿಸಿದ್ದೆ, ಆದರೆ ಕೀರ್ತಿ ಸುರೇಶ್ ಒಂದು ಅದ್ಭುತವನ್ನೇ ಮಾಡಿದರು ಎಂದಿದ್ದಾರೆ.
ಹಾಗಾದರೆ ಮಹಾನಟಿ ಸಿನಿಮಾವನ್ನು ರಿಜೆಕ್ಟ್ ಮಾಡಿದ ಆ ನಟಿಯಾದರೂ ಯಾರು? ತಿಳಿಯೋಣ ಬನ್ನಿ. ಒಂದಷ್ಟು ಸುದ್ದಿಗಳ ಪ್ರಕಾರ ಸಾವಿತ್ರಿ ಪಾತ್ರಕ್ಕೆ ಮೊದಲು ನಿರ್ಮಾಪಕರ ಆಯ್ಕೆ ಆಗಿದ್ದು ನಟಿ ನಿತ್ಯ ಮೆನೆನ್ ಎನ್ನಲಾಗಿದೆ. ಆದರೆ ಮದ್ಯ ಸೇವನೆಯ ದೃಶ್ಯಗಳನ್ನು ನಾನು ಮಾಡುವುದಿಲ್ಲವೆಂದು ನಟಿ ಹೇಳಿದ್ದರಿಂದ ಕೊನೆಗೆ ಆ ಪಾತ್ರಕ್ಕೆ ನಟಿ ಕೀರ್ತಿ ಸುರೇಶ್ ಅವರ ಎಂಟ್ರಿಯಾಯಿತು ಎನ್ನಲಾಗಿದೆ. ಅಲ್ಲದೇ ಸಿನಿಮಾ ಘೋಷಣೆ ಆದಾಗ ಸಾವಿತ್ರಿ ರೀತಿಯಲ್ಲಿ ಮೇಕಪ್ ಮಾಡಿಕೊಂಡಿದ್ದ ನಿತ್ಯ ಮೆನನ್ ಅವರ ಒಂದಷ್ಟು ಫೋಟೋ ಗಳು ಸಹಾ ಹರಿದಾಡಿದ್ದವು. ಆ ನಟಿ ಆ ಪಾತ್ರ ಮಾಡಿದ್ದರೆ ಖಂಡಿತ ಒಳ್ಳೆ ಹೆಸರು ಬರುತ್ತಿತ್ತು ಎನ್ನುವುದು ಅಶ್ವಿನಿ ದತ್ ಅವರ ಮಾತಾಗಿದೆ.