ಬಾಲಿವುಡ್ ನಲ್ಲಿ ಸಿನಿಮಾಗಳು ಗೆದ್ದರೂ, ಸೋತರೂ ಯಾವುದೇ ವ್ಯತ್ಯಾಸ ಇಲ್ಲ ಎನ್ನುವಂತೆ ಬೇರೆಲ್ಲಾ ಸ್ಟಾರ್ ಗಳಿಗಿಂತ ಹೆಚ್ಚು ಸಿನಿಮಾಗಳನ್ನು ಮಾಡುತ್ತಾ, ಸದಾ ಬ್ಯುಸಿಯಾಗಿರುವ ಸ್ಟಾರ್ ನಟ ಯಾರು ಎನ್ನುವುದಾದರೆ ಅವರು ನಟ ಅಕ್ಷಯ್ ಕುಮಾರ್. ಅದರಲ್ಲೂ ಈ ವರ್ಷ ನಟ ಅಕ್ಷಯ್ ಕುಮಾರ್ ಅವರ ಯಾವ ಸಿನಿಮಾಗಳು ಸಹಾ ನಿರೀಕ್ಷಿತ ಮಟ್ಟದಲ್ಲಿ ಗೆಲುವನ್ನು ಪಡೆದಿಲ್ಲ ಎನ್ನುವುದು ವಾಸ್ತವ. ಹೊಸ ಹೊಸ ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿರುವ ನಟ ಇದೇ ಮೊದಲ ಬಾರಿಗೆ ಮರಾಠಿ ಸಿನಿಮಾವೊಂದರಲ್ಲಿ ನಟಿಸುವ ಮೂಲಕ, ಮರಾಠಿ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ನೀಡಿದ್ದಾರೆ.
ಅಕ್ಷಯ್ ಕುಮಾರ್ ನಟಿಸುತ್ತಿರುವ ಮರಾಠಿ ಸಿನಿಮಾಕ್ಕೆ ವೇಡಾತ್ ಮರಾಠೆ ವೀರ್ ದೌಡಲೇ ಸಾಥ್ ಎನ್ನುವ ಟೈಟಲ್ ನೀಡಲಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಛತ್ರಪತಿ ಶಿವಾಜಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಅಭಿಮಾನಿಗಳ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದ್ದಾರೆ. ಬಾಲಿವುಡ್ ನಲ್ಲಿ ನಟನಾಗಿ ಸಾಕಷ್ಟು ಹೆಸರನ್ನು ಮಾಡಿರುವ ಮಹೇಶ್ ಮಾಂಜ್ರೇಕರ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ವೈವಿದ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ ಕುಮಾರ್ ಅವರಿಗೆ ಈ ಪಾತ್ರ ಬಹಳ ವಿಶೇಷ ಎನಿಸಿದೆ.
ಸಿನಿಮಾದ ಚಿತ್ರೀಕರಣ ಕಾರ್ಯಗಳು ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸಿನಿಮಾದ ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಅಕ್ಷಯ್ ಕುಮಾರ್ ಅವರನ್ನು ಶಿವಾಜಿ ಗೆಟಪ್ ನಲ್ಲಿ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನಟನ ಫೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ. ಛತ್ರಪತಿ ಶಿವಾಜಿ ಪಾತ್ರವನ್ನು ಪೋಷಿಸುತ್ತಿರುವುದಕ್ಕೆ ನಟ ಸಹಾ ಬಹಳ ಖುಷಿ ಪಡುತ್ತಿದ್ದಾರೆ.
ಅಕ್ಷಯ್ ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ, “ನನಗೆ ಈ ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ ಮತ್ತು ಸೌಭಾಗ್ಯ. ಮಹಾರಾಜ ಶಿವಾಜಿ ಅವರ ಜೀವನದಿಂದ ನಾನು ಸ್ಪೂರ್ತಿಯನ್ನು ಪಡೆದಿದ್ದೇನೆ. ನಿಮ್ಮ ಶುಭ ಹಾರೈಕೆ ಇರಲಿ” ಎಂದು ಬರೆದುಕೊಂಡಿದ್ದಾರೆ. ನಟನ ಪೋಸ್ಟ್ ಗೆ ಅಭಿಮಾನಿಗಳ ಕಡೆಯಿಂದ ಅಪಾರ ಮೆಚ್ಚುಗೆಗಳು ಹರಿದು ಬರುತ್ತಿವೆ. ಅಭಿಮಾನಿಗಳು ನಟನ ಹೊಸ ಸಿನಿಮಾಕ್ಕೆ ಶುಭ ಹಾರೈಸುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.