ನಾವು ಯಾವುದಾದರೂ ದೊಡ್ಡ ಸಮಸ್ಯೆಗೆ ಸಿಲುಕಿದಾ್ ಸಹಾಯವನ್ನು ನಿರೀಕ್ಷಣೆಯನ್ನು ಮಾಡುತ್ತೇವೆ. ಸಹಾಯ ಗುಣವುಳ್ಳವರು, ಹೃದಯಬಂತರು ಆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಮಗೆ ತಮ್ಮಿಂದಾಗುವ ಸಹಾಯವನ್ನು ನೀಡಲು ಮುಂದಾಗುತ್ತಾರೆ. ಇನ್ನು ಮಧ್ಯರಾತ್ರಿಯ ವೇಳೆ ನಿರ್ಜನವಾಗಿರುವ ರಸ್ತೆಯಲ್ಲಿ ಸಮಸ್ಯೆ ಎದುರಾದರೆ ಸಹಜವಾಗಿಯೇ ಸಹಾಯಕ್ಕಾಗಿ ನಾವು ಅತ್ತ ಇತ್ತ ನೋಡುತ್ತೇವೆ. ಯಾರಾದರೂ ಸಹಾಯಕ್ಕೆ ಬಂದರೆ ಸಾಕೆಂದು ನಮ್ಮ ಮನಸ್ಸು ಕೂಡಾ ಹೇಳುತ್ತದೆ. ಇಂತಹ ಸಂದರ್ಭದಲ್ಲಿ ಯಾರಾದರೂ ನೆರವನ್ನು ನೀಡಲು ಬಂದರೆ ಅವರನ್ನು ನಾವು ಜೀವನದಲ್ಲಿ ಎಂದೂ ಮರೆಯುವುದಿಲ್ಲ.
ಈಗ ನಾವು ಹೇಳಲು ಹೊರಟಿರುವ ಮುಂಬೈ ಮಹಾನಗರದ ಮಹಿಳೆಯೊಬ್ಬರ ಕಥೆಯನ್ನು ಕೇಳಿದರೆ ಮಾನವೀಯತೆಯ ಬಗ್ಗೆ ಮತ್ತೊಮ್ಮೆ ನಿಮ್ಮ ಮನಸ್ಸಿನಲ್ಲಿ ಗೌರವ ಭಾವನೆ ಜಾಗೃತವಾಗುತ್ತದೆ. ಸಮಾಜದಲ್ಲಿ ಇನ್ನೂ ಮಾನವೀಯತೆ ಇದೆ ಎನ್ನುವುದು ಖುಷಿಯನ್ನು ನೀಡುತ್ತದೆ. ಅಕ್ಷಿತಾ ಚೆಂಗಮ್ ಎನ್ನುವ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ, ರಸ್ತೆಯಲ್ಲಿ ಎದುರಾದ ಸಮಸ್ಯೆ ಹಾಗೂ ಆ ಸಂದರ್ಭದಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ರೋಶನ್ ದಲ್ವಿ ನೀಡಿದಂತಹ ಸಹಾಯವನ್ನು ಸ್ಮರಿಸಿದ್ದಾರೆ. ಆ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ಅಕ್ಷಿತಾ ತಮ್ಮ ಪೋಸ್ಟ್ ನಲ್ಲಿ, ಆಗ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಗಡಿಯಾರದಲ್ಲಿ ಸಮಯ ರಾತ್ರಿ 12 ಗಂಟೆ 15 ನಿಮಿಷಗಳಾಗಿದ್ದವು. ಪೆಟ್ರೋಲ್ ಮುಗಿದು ಹೋದ ಕಾರಣ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತು ಹೋಯಿತು. ನಿರ್ಜನವಾದ ಆ ರಸ್ತೆಯಲ್ಲಿ, ರಾತ್ರಿ ವೇಳೆಯಲ್ಲಿ ಅಲ್ಲಿ ನಾನು ಮತ್ತು ನನ್ನ ಸಹೋದರ ಮಾತ್ರವೇ ಇದ್ದೆವು ಯಾರಾದರೂ ದಾರಿಹೋಕರು ಬಂದರೆ ಸಹಾಯ ಕೇಳಬೇಕೆಂದು ನಾವು ನಿರೀಕ್ಷೆಯಲ್ಲಿದ್ದೆವು. ಆದರೆ ರಸ್ತೆಯಲ್ಲಿ ಯಾರು ಬರುವುದು, ಹೋಗುವುದು ಕಾಣಲೇ ಇಲ್ಲ.
ಆ ವೇಳೆಯಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಮಾಡುವ ಬಾಯ್ ಒಬ್ಬರು ವಿಳಾಸ ಹುಡುಕುತ್ತಿರುವುದನ್ನು ನೋಡಿದ ನನ್ನ ಸಹೋದರ, ಅವರನ್ನು ಸಂಪರ್ಕಿಸಿ ನಮಗೆ ಸಹಾಯ ಮಾಡುವಂತೆ ಕೇಳಿದನು. ಆದರೆ ಆ ಹುಡುಗ ತಾನು ರಸ್ತೆಯ ಇನ್ನೊಂದು ದಿಕ್ಕಿನಲ್ಲಿ ಹೋಗಬೇಕಾಗಿರುವುದರಿಂದ ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳಿದ. ಆದರೆ ಅನಂತರ ಆತ ಒಂದು ವಾಟರ್ ಬಾಟಲ್ ಇದ್ದರೆ ಕೊಡಿ ಎಂದು ಕೇಳಿದ. ಆದರೆ ದುರದೃಷ್ಟವಶಾತ್ ನಮ್ಮ ಬಳಿ ಯಾವುದೇ ಬಾಟಲಿ ಇರಲಿಲ್ಲ.
ನಂತರ ಆ ಹುಡುಗ ತನ್ನ ಬ್ಯಾಗ್ ನಿಂದ ತಾನು ನೀರು ಕುಡಿಯಲು ಇಟ್ಟುಕೊಂಡಿದ್ದ ಬಾಟಲಿನಲ್ಲಿ ಇದ್ದ ನೀರನ್ನು ಹೊರಗೆ ಚೆಲ್ಲಿದ. ಆನಂತರ ಮೊಣಕಾಲೂರಿ ಕುಳಿತು ತನ್ನ ಬೈಕ್ ನಿಂದ ಪೆಟ್ರೋಲ್ ತೆಗೆಯುವ ಕೆಲಸ ಪ್ರಾರಂಭಿಸಿದ. ಆತ ಮಾಡುತ್ತಿರುವ ಕೆಲಸ ನೋಡಿ ನನಗೆ ಆಶ್ಚರ್ಯವಾಯಿತು. ಆ ಹುಡುಗ ನಮಗೆ ಪೆಟ್ರೋಲ್ ಬಂಕ್ ವರೆಗೆ ಹೋಗುವುದಕ್ಕೆ ಅಗತ್ಯವಿರುವಷ್ಟು ಪೆಟ್ರೋಲ್ ತೆಗೆದು, ಬಾಟಲನ್ನು ಮಾತನ್ನು ನಮ್ಮ ಕೈಗೆ ಇಟ್ಟು ಅಲ್ಲಿಂದ ಹೊರಟುಹೋದ.
ನಿಗಧಿತ ಸಮಯದಲ್ಲಿ ಫುಡ್ ಆರ್ಡರ್ ಮಾಡಿದವರಿಗೆ ಅದನ್ನು ತಲುಪಿಸಿ ಅವರ ಮೊಗದಲ್ಲಿ ಒಂದು ನಗುವನ್ನು ತರಿಸುವ ಕೆಲಸವನ್ನು ಫುಡ್ ಡಿಲೆವರಿ ಬಾಯ್ ಗಳು ಮಾಡುತ್ತಾರೆ ಎನ್ನುವುದನ್ನು ನಾನು ಕೇಳಿದ್ದೆ. ಇಂದು ಅಂಥವರೇ ನನ್ನ ಹಾಗೂ ನನ್ನ ಸಹೋದರನ ಸಹಾಯಕ್ಕೆ ನಿಂತಿದ್ದು ನೋಡಿದಾಗ ಅವರ ಬಗ್ಗೆ ಗೌರವ ಇನ್ನೂ ಹೆಚ್ಚಾಗಿದೆ. ಆ ತಡರಾತ್ರಿಯಲ್ಲಿ ಆತ ಒಬ್ಬ ದೇವದೂತನಂತೆ ನಮ್ಮ ಸಹಾಯಕ್ಕೆ ಬಂದಿದ್ದ. ಆತನ ಸಹಾಯಕ್ಕೆ ನಾನು ಸದಾ ಕೃತಜ್ಞಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಕ್ಷಿತಾ ಅವರು ತಮಗೆ ಹೇಗೆ ಫುಡ್ ಡಿಲೆವರಿ ಬಾಯ್ ತಡ ರಾತ್ರಿಯಲ್ಲಿ ಸಹಾರ ಮಾಡಿ ಹೊರಟ ಎನ್ನುವುದನ್ನು ಪೋಸ್ಟ್ ಮಾಡಿದ ನಂತರ, ಈ ಪೋಸ್ಟ್ ನೋಡಿ ಬಹಳಷ್ಟು ಜನ ನೆಟ್ಟಿಗರು ಡಿಲೆವರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಮಾನವೀಯತೆ ಮಿಡಿದ ಆ ಹುಡುಗನ ಬಗ್ಗೆ ಹೊಗಳಿದ್ದಾರೆ. ಇಂತಹ ಘಟನೆಗಳು ಮನಸ್ಸಿಗೆ ಖುಷಿ ನೀಡುತ್ತವೆ ಎಂದಿದ್ದಾರೆ.