ತಮಿಳು ಸಿನಿಮಾ ರಂಗ ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾ ರಂಗದಲ್ಲಿ ಸಹಾ ಸದ್ಯದ ಹಾಟ್ ಟಾಪಿಕ್ ಯಾವುದು ಅನ್ನೋದಾದ್ರೆ, ಅದು ದಕ್ಷಿಣದ ಸ್ಟಾರ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ವಿಚಾರವಾಗಿದೆ. ನಯನತಾರಾ ಮತ್ತು ವಿಘ್ನೇಶ್ ಇಲ್ಲಿಯವರೆಗೂ ತಮ್ಮ ಮದುವೆಯ ವಿಚಾರವಾಗಿ ಎಲ್ಲಿಯೂ ಹೊರಗೆ ಅಂದರೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. ಆದರೆ ಇದೀಗ ಸುದ್ದಿ ಗೋಷ್ಟಿಯಲ್ಲಿ ಅವರು ತಮ್ಮ ಮದುವೆ ಬಗ್ಗೆ ಮಾತನಾಡುತ್ತಾ ತಮ್ಮ ಅಭಿಮಾನಿಗಳಿಗೆ ಖುಷಿಯ ವಿಷಯವನ್ನು ತಿಳಿಸಿದ್ದಾರೆ.
ದಕ್ಷಿಣ ಸಿನಿರಂಗದಲ್ಲಿ ಈಗ ಈ ಜೋಡಿಯ ಮದುವೆಯ ವಿಚಾರವು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಎಷ್ಟೋ ದಿನಗಳಿಂದ ಅಭಿಮಾನಿಗಳು ಈ ದಿನಕ್ಕಾಗಿ ಕಾಯುತ್ತಿದ್ದರು. ನಯನತಾರಾ ಹಾಗೂ ವಿಘ್ನೇಶ್ ಹಸೆ ಮಣೆ ಏರುವುದನ್ನು ನೋಡಲು ಎಲ್ಲರೂ ಬಹಳ ಉತ್ಸುಕರಾಗಿದ್ದರು. ಈಗ ಆ ಸುಂದರ ಕ್ಷಣಗಳಿಗೆ ದಿನಗಣನೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ವಿಘ್ನೇಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅಧಿಕೃತವಾಗಿ ತಮ್ಮ ಮತ್ತು ನಯನತಾರಾ ಮದುವೆಯ ಘೋಷಣೆಯನ್ನು ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.
ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್ ಜೋಡಿ ಎಲ್ಲಾ ಗುರು ಹಿರಿಯರು ಮತ್ತು ತಮ್ಮ ಆಪ್ತರ ಸಮ್ಮುಖದಲ್ಲಿ ಮಹಾಬಲಿಪುರಂ ನಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಮದುವೆಯ ನಂತರ ಚೆನ್ನೈನಲ್ಲಿ ತಮ್ಮ ಸ್ನೇಹಿತರು ಹಾಗೂ ಆಪ್ತರಿಗಾಗಿ ಅದ್ದೂರಿಯಾಗಿ ಆರತಕ್ಷತೆಯನ್ನು ಏರ್ಪಡಿಸಲಿದ್ದಾರೆ ಎನ್ನಲಾಗಿದೆ. ರೌಡಿ ಧಾನ್ ಸಿನಿಮಾದ ಚಿತ್ರೀಕರಣದ ವೇಳೆ ನಯನತಾರಾ ಮತ್ತು ವಿಘ್ನೇಶ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಅವರ ಈ ಭೇಟಿ ನಂತರ ಸ್ನೇಹವಾಗಿ ಬೆಳೆದಿತ್ತು.
ಇಬ್ಬರ ನಡುವೆ ಆರಂಭವಾದ ಸ್ನೇಹ ಪ್ರೇಮಕ್ಕೆ ತಿರುಗಿ ಏಳು ವರ್ಷಗಳ ನಂತರ ಇದೀಗ ಜೋಡಿ ಹಸೆಮಣೆಯನ್ನು ಏರಲು ಸಜ್ಜಾಗಿದೆ. ಈ ವೇಳೆ ವಿಘ್ನೇಶ್ ಅವರು ತಮ್ಮ ಸಿನಿಮಾ ಜೀವನ ಮತ್ತು ಖಾಸಗಿ ಜೀವನವನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಸುದ್ದಿಗೋಷ್ಠಿಯಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ತಾವು ನಟ ಅಜಿತ್ ಅವರ ಹೊಸ ಸಿನಿಮಾ ನಿರ್ದೇಶನ ಮಾಡಲಿರುವ ಸುದ್ದಿಯನ್ನು ಸಹಾ ಅಧಿಕೃತವಾಗಿ ತಿಳಿಸಿದ್ದಾರೆ.