ಬನಾರಸ್ ಸಿನಿಮಾ ಮೂಲಕ ಕನ್ನಡ ಸಿನಿ ರಂಗಕ್ಕೆ ಎಂಟ್ರಿ ನೀಡಿರುವ ಯುವ ನಟ ಝೈದ್ ಖಾನ್ ತಮ್ಮ ಮೊದಲ ಸಿನಿಮಾ ಮೂಲಕವೇ ಸಿನಿ ಪ್ರಿಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಇದೀಗ ಭರವಸೆಯ ನಟನಾಗಿ ಸದ್ದು ಮಾಡುತ್ತಿರುವ ಝೈದ್ ಖಾನ್ ಅವರಿಗೆ ಬನಾರಸ್ ಸಿನಿಮಾದ ಬೆನ್ನಲ್ಲೇ ಮತ್ತೊಂದು ಭರ್ಜರಿ ಅವಕಾಶ ಅರಸಿ ಬಂದಿದೆ ಎನ್ನುವ ಸುದ್ದಿಯೊಂದು ಈಗ ಹರಿದಾಡಿದ್ದು, ಸಖತ್ ಸದ್ದು ಮಾಡಿದ್ದು, ನಟನ ಅಭಿಮಾನಿಗಳು ಈ ವಿಚಾರವನ್ನು ತಿಳಿದು ಖುಷಿ ಪಡುತ್ತಿದ್ದಾರೆ. ಹೌದು, ಬನಾರಸ್ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ನಟ ಝೈದ್ ಖಾನ್ ಅವರು ತಮ್ಮ ಮುಂದಿನ ಸಿನಿಮಾಕ್ಕಾಗಿ ಯಾರ ಜೊತೆ ಕೈ ಜೋಡಿಸಲಿದ್ದಾರೆ ಎನ್ನುವುದು ಇದೀಗ ಎಲ್ಲರ ಗಮನವನ್ನು ಸೆಳೆದಿದೆ.
ಝೈದ್ ಅವರ ಮೊದಲ ಸಿನಿಮಾ ಬನಾರಸ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಸೋನಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಕಾಂತಾರ, ಮತ್ತೊಂದು ಕಡೆ ಗಂಧದ ಗುಡಿ ಸಿನಿಮಾಗಳ ಅಬ್ಬರದ ನಡುವೆ ಬನಾರಸ್ ತೆರೆಗೆ ಬಂದು, ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅದೇ ವೇಳೆ ಚೊಚ್ಚಲ ಸಿನಿಮಾದ ಮೂಲಕ ಝೈದ್ ಅವರು ಅನೇಕರ ಮೆಚ್ಚುಗೆಯನ್ನು ಗಳಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಬನಾರಸ್ ಸಿನಿಮಾದಲ್ಲಿನ ಅವರ ನಟನೆಗೆ ಚಿತ್ರ ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆಗಳು ಸಿಕ್ಕಿವೆ.
ಈಗ ಬನಾರಸ್ ನ ನಂತರ ಝೈದ್ ಅವರು ಕನ್ನಡದ ಸ್ಟಾರ್ ನಿರ್ದೇಶಕ ಎ. ಹರ್ಷ ಅವರ ಜೊತೆಗೆ ಹೊಸ ಸಿನಿಮಾಕ್ಕಾಗಿ ಕೈ ಜೋಡಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಿನಿಮಾಗಳನ್ನು ನಿರ್ದೇಶನ ಮಾಡಿ ಹೆಸರು ಮಾಡಿರುವ ಹರ್ಷ ಅವರು ಇದೀಗ ತಮ್ಮ ಹೊಸ ಸಿನಿಮಾ ವೇದಾ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ. ವೇದ ಸಿನಿಮಾದಲ್ಲೂ ಸಹಾ ಶಿವರಾಜ್ ಕುಮಾರ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಬಿಡುಗಡೆಯ ನಂತರ ಝೈದ್ ಖಾನ್ ಜೊತೆಗೆ ಹೊಸ ಸಿನಿಮಾ ಅಧಿಕೃತ ಘೋಷಣೆ ಆಗಲಿದೆ ಎನ್ನಲಾಗಿದೆ.