ಬಿಹಾರದಲ್ಲಿ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯಲ್ಲಿ ಕೋಟಿ ಕೋಟಿಗಳಷ್ಟು ಹಣವು ಜಮೆಯಾಗಿದ್ದ ಮರುದಿನವೇ ಇದೇ ರಾಜ್ಯದಲ್ಲಿನ ಮತ್ತೊಬ್ಬ ರೈತನ ಬ್ಯಾಂಕ್ ಖಾತೆಗೆ ಬರೋಬ್ಬರಿ 52 ಕೋಟಿ ರೂಪಾಯಿಗಳು ಜಮೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಮುಜಾಫರ್ ಜಿಲ್ಲೆಯ ಸಿಂಗಾರಿ ಗ್ರಾಮದ ರೈತ ನಾಗಿರುವ ರಾಮ್ ಬಹದ್ದೂರ್ ಶಾ ಎನ್ನುವವರ ಬ್ಯಾಂಕ್ ಖಾತೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಜಮೆಯಾಗಿದೆ. ತನ್ನ ಖಾತೆಯಲ್ಲಿ ಹೀಗೆ ಅನಿರೀಕ್ಷಿತವಾಗಿ ಬರೋಬ್ಬರಿ 52 ಕೋಟಿ ರೂಪಾಯಿಗಳು ಜಮೆ ಆಗಿರುವುದನ್ನು ಕಂಡು ಸ್ವತಃ ರಾಮ್ ಬಹಾದ್ದೂರ್ ಅವರೇ ಶಾ ಕ್ ಆಗಿದ್ದಾರೆ.
ಕಾತ್ರಾ ಗ್ರಾಮದಲ್ಲಿ ರಾಮ್ ಬಹದ್ದೂರ್ ಅವರ ಬ್ಯಾಂಕ್ ಖಾತೆ ಇದೆ. ಅವರು ಹಿರಿಯ ನಾಗರಿಕರಿಗೆ ಸರ್ಕಾರ ನೀಡುವ ಪಿಂಚಣಿ ಹಣದ ಕುರಿತಾಗಿ ಮಾಹಿತಿಯನ್ನು ಪಡೆಯಲು, ಹಣ ಜಮೆ ಆಗಿದೆಯೋ ಇಲ್ಲವೋ ಎಂದು ಖಾತ್ರಿ ಪಡಿಸಿಕೊಳ್ಳಲು ಬ್ಯಾಂಕಿಗೆ ತೆರಳಿದ್ದಾರೆ. ಈ ವೇಳೆ ಅವರ ಖಾತೆಯನ್ನು ಪರಿಶೀಲಿಸಿದ ಬ್ಯಾಂಕ್ ಅಧಿಕಾರಿ ಶಾ ಅವರ ಖಾತೆಯಲ್ಲಿ ಒಟ್ಟು 52 ಕೋಟಿ ರೂಪಾಯಿಗಳ ಜಮೆಯಾಗಿದೆ ಎನ್ನುವ ವಿಷಯ ತಿಳಿಸಿದಾಗ ಅವರು ಅಚ್ಚರಿಗೊಂಡಿದ್ದಾರೆ.
ನಾನೊಬ್ಬ ಬಡ ರೈತನಾಗಿದ್ದು, ಇಷ್ಟೊಂದು ಹಣ ನನ್ನ ಖಾತೆಗೆ ಹೇಗೆ ಬಂದಿತು ಎನ್ನುವ ವಿಚಾರ ನನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇದೆ. ಬಿಹಾರದ ಕತಿಹರ್ ಜಿಲ್ಲೆಯ ಪಸ್ತಿಯಾ ಎನ್ನುವ ಗ್ರಾಮದಲ್ಲಿ ಗುರು-ಚಂದ್ರ ವಿಶ್ವಾಸ ಮತ್ತು ಆಶಿಶ್ ಕುಮಾರ್ ಎನ್ನುವ ಶಾಲಾ ಬಾಲಕರ ಬ್ಯಾಂಕ್ ಖಾತೆಗೆ ಸುಮಾರು ಕೋಟಿಗಳಷ್ಟು ಹಣ ಜಮೆಯಾಗಿತ್ತು. ಅದು ಕೂಡಾ ಬಹಳ ದೊಡ್ಡ ಸುದ್ದಿಯಾಗಿತ್ತು.
ಶಾಲಾ ಸಮವಸ್ತ್ರ ಖರೀದಿಗಾಗಿ ಸರ್ಕಾರದ ಕಡೆಯಿಂದ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ವಿದ್ಯಾರ್ಥಿಗಳು ಬ್ಯಾಂಕ್ ಖಾತೆಯಲ್ಲಿರುವ ಹಣದ ಕುರಿತಾಗಿ ಮಾಹಿತಿ ಪಡೆಯಲು ಹೋಗಿದ್ದರು. ಈ ವೇಳೆ 6ನೇ ತರಗತಿ ವಿದ್ಯಾರ್ಥಿ ಆಶಿಶ್ ಕುಮಾರ್ ಖಾತೆಯಲ್ಲಿ 6,20,11,100 ರೂಪಾಯಿ ಇದ್ದರೆ, ವಿಶ್ವಾಸ್ ಬ್ಯಾಂಕ್ ಖಾತೆಯಲ್ಲಿ 90,52,21,223 ರೂಪಾಯಿ ಹಣ ಇರುವುದು ಗೊತ್ತಾಗಿದೆ. ಇದರಿಂದ ಬಾಲಕರು ಶಾ ಕ್ ಗೊ ಳಗಾಗಿದ್ದರು.
ಈ ವಿಷಯ ಸುತ್ತಮುತ್ತಲ ಗ್ರಾಮಗಳಲ್ಲಿ ತಿಳಿದಾಗ ಅನೇಕ ಜನರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಎಷ್ಟು ಹಣ ಇದೆ ಎಂಬುದನ್ನು ಪರೀಕ್ಷಿಸಲು ಬ್ಯಾಂಕುಗಳ ಕಡೆಗೆ ತೆರಳಿದ್ದರು. ಏಕೆಂದರೆ ಅದೃಷ್ಟ ಚೆನ್ನಾಗಿದ್ದರೆ ತಮ್ಮ ಖಾತೆಯಲ್ಲಿ ಸಹ ಹೀಗೆ ಹಣ ಬಂದಿರಬಹುದು ಎನ್ನುವ ಆಲೋಚನೆ ಅವರದಾಗಿತ್ತು. ಇನ್ನು ಬ್ಯಾಂಕ್ ಅಧಿಕಾರಿಗಳು ರಾಜ್ಯದಲ್ಲಿ ತಾಂತ್ರಿಕ ದೋಷದಿಂದಾಗಿ ಇಂತಹ ಸಮಸ್ಯೆಗಳು ಆಗಾಗ ಸಂಭವಿಸುತ್ತಲೇ ಇದೆ ಎನ್ನುವ ವಿಷಯವನ್ನು ತಿಳಿಸಿದ್ದಾರೆ