ಪ್ರೇಮ ಎನ್ನುವುದು ಒಂದು ಮಾಯೆ ಎನ್ನುವ ಮಾತನ್ನು ನಾವೆಲ್ಲರೂ ಕೂಡ ಬಹಳಷ್ಟು ಬಾರಿ ಕೇಳಿದ್ದೇವೆ. ಈ ಮಾಯೆಯಲ್ಲಿ ಸಿಲುಕಿದವರು ಯಾರ ಅರಿವಿಲ್ಲದೇ ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮದೇ ಆದ ಲೋಕದಲ್ಲಿ ಆನಂದವಾಗಿ ವಿಹರಿಸುತ್ತಿರುತ್ತಾರೆ. ಅಲ್ಲದೇ ಪ್ರೇಮಿಗಳಿಗೆ ಅವರ ಮನೆಯಲ್ಲಿ ಪ್ರೇಮಕ್ಕೆ ವಿ ರೋ ಧ ವ್ಯಕ್ತವಾದರೆ ಸಾಕು, ಎಲ್ಲವನ್ನೂ, ಎಲ್ಲರನ್ನೂ ದಿಕ್ಕರಿಸಿ ಓಡಿಹೋಗಿ ಮದುವೆಯಾಗುವ ಜೋಡಿಗಳಿಗೆ ಕಡಿಮೆಯೇನಿಲ್ಲ. ಒಟ್ಟಾರೆ ಪ್ರೇಮಪಾಶದಲ್ಲಿ ಸಿಲುಕಿದವರು ಯಾವುದೇ ರೀತಿಯ ಸವಾಲನ್ನು ಕೂಡಾ ಎದುರಿಸಲು ಹಿಂದೆಮುಂದೆ ನೋಡುವುದಿಲ್ಲ.
ಪ್ರಸ್ತುತ ಅಂತಹುದೇ ಘಟನೆಯೊಂದು ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಸದ್ದನ್ನು ಮಾಡುತ್ತಿದೆ. ನೆರೆಯ ಬಾಂಗ್ಲಾದೇಶದ 22 ವರ್ಷದ ಯುವತಿಯೊಬ್ಬಳು ಪ್ರಿಯಕರನಿಗಾಗಿ ಮಾಡಿದ ಸಾಹಸ ದೇಶವ್ಯಾಪಿಯಾಗಿ ದೊಡ್ಡ ಸುದ್ದಿಯಾಗಿದೆ. ಹೌದು, ಬಾಂಗ್ಲಾದೇಶದ ಯುವತಿ ಕೃಷ್ಣ ಮಂಡಲ್ ಫೇಸ್ ಬುಕ್ ಮೂಲಕ ಪಶ್ಚಿಮ ಬಂಗಾಳದ ಅಭಿಕ್ ಮಂಡಲ್ ಎನ್ನುವ ಯುವಕನ ಜೊತೆ ಪರಿಚಯವನ್ನು ಮಾಡಿಕೊಂಡಿದ್ದಾಳೆ. ಈ ಪರಿಚಯ ಸ್ನೇಹವಾಗಿ ಅನಂತರ ಪ್ರೇಮವಾಗಿ ಚಿಗುರಿದೆ.
ಈ ಜೋಡಿ ಮದುವೆ ಆಗಲು ನಿರ್ಧಾರವನ್ನು ಮಾಡಿದ್ದಾರೆ. ಕೃಷ್ಣ ಮಂಡಲ್ ಅಭಿಕ್ ನನ್ನು ಮದುವೆಯಾಗಲು ಭಾರತಕ್ಕೆ ಬರುವುದು ಅನಿವಾರ್ಯವಾಗಿತ್ತು. ಆದರೆ ಆಕೆಯ ಬಳಿ ಅಧಿಕೃತವಾಗಿ ಪಾಸ್ ಪೋರ್ಟ್ ಇರಲಿಲ್ಲ. ಆದ್ದರಿಂದ ಅನಧಿಕೃತವಾಗಿ ಭಾರತದ ಗಡಿಯನ್ನು ಪ್ರವೇಶಿಸುವ ಯೋಚನೆಯನ್ನು ಮಾಡಿ ಒಂದು ದೃಢನಿರ್ಧಾರವನ್ನು ಮಾಡಿದ್ದಾಳೆ. ಬಾಂಗ್ಲಾದೇಶದ ಗಡಿಗೆ ಹೊಂದಿ ಕೊಂಡಿರುವ ಹುಲಿಗಳ ತಾಣವಾದ ಸುಂದರ್ ಬನ್ ಅರಣ್ಯವನ್ನು ಪ್ರವೇಶಿಸಿದ್ದಾಳೆ.
ಕೃಷ್ಣ ಮಂಡಲ್ ಹುಲಿಗಳ ಆ ಜಾಗದಲ್ಲಿ ಬಹಳ ಎಚ್ಚರಿಕೆಯಿಂದ ಅವುಗಳ ಕಣ್ಣಿಗೆ ಬೀಳದಂತೆ ಅರಣ್ಯವನ್ನು ದಾಟಿ, ಸುಮಾರು ಒಂದು ಗಂಟೆ ಕಾಲ ನದಿಯನ್ನು ಈಜಿ ಭಾರತ ಗಡಿಯನ್ನು ಪ್ರವೇಶ ಮಾಡಿದ್ದಾಳೆ. 4 ದಿನಗಳ ಹಿಂದೆ ಪ್ರಿಯಕರ ಅಭಿಕ್ ನನ್ನು ಭೇಟಿ ಮಾಡಿ ಕೊಲ್ಕೊತ್ತಾದ ದೇವಾಲಯವೊಂದರಲ್ಲಿ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. ಆದರೆ ಅನಧಿಕೃತವಾಗಿ ಭಾರತದ ಗಡಿಯನ್ನು ಪ್ರವೇಶಿಸಿದ ಕಾರಣ ಪೊಲೀಸರು ಪ್ರಸ್ತುತ ಆಕೆಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.