ಬಿಗ್ ಬಾಸ್ ಶೋ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಶೋ ಆಗಿದೆ. ಕನ್ನಡದಲ್ಲಿ ಸಹಾ ಈ ಶೋ ಭರ್ಜರಿ ಒಂಬತ್ತನೇ ಸೀಸನ್ ಪ್ರಸಾರವಾಗುತ್ತಿದ್ದು ಜನರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಅಲ್ಲಿಂದ ಹೊರಗೆ ಬಂದ ಮೇಲೆ ಸಿಕ್ಕಾಪಟ್ಟೆ ಪ್ರಚಾರವನ್ನು ಪಡೆಯುತ್ತಾರೆ. ಮಾದ್ಯಮಗಳು ಅವರನ್ನು ಸಂದರ್ಶನ ಮಾಡುವುದು ಸಹಾ ಸಾಮಾನ್ಯ. ಗೆಲ್ಲುವ ಸ್ಪರ್ಧಿ ಮಾತ್ರವೇ ಅಲ್ಲ, ಎಲಿಮಿನೇಷನ್ ಎದುರಿಸಿ ಹೊರ ಬಂದವರ ಸಂದರ್ಶನಗಳು ಕೂಡಾ ವಿವಿಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಕಂಡು, ವೀಡಿಯೋ ತುಣುಕುಗಳು ವೈರಲ್ ಆಗುತ್ತವೆ.
ಈ ಬಾರಿ ಬಿಗ್ ಬಾಸ್ ಮನೆಯಿಂದ ಆರು ಜನ ಅಂದರೆ ಐಶ್ವರ್ಯ ಪಿಸ್ಸೆ, ನವಾಜ್, ದರ್ಶ್ ಚಂದ್ರಪ್ಪ, ಮಯೂರಿ ಕ್ಯಾತರಿ, ನವ್ಯಾ ಮತ್ತು ಸಾನ್ಯಾ ಅಯ್ಯರ್ ಎಲಿಮಿನೇಟ್ ಆಗಿ ಈಗಾಗಲೇ ಹೊರ ಬಂದಾಗಿದೆ. ಏಳನೇ ವಾರದಲ್ಲಿ ಯಾವುದೇ ಎಲಿಮಿನೇಷನ್ ಇಲ್ಲದ ಕಾರಣ ಮನೆಯಲ್ಲಿರುವವರು ಸೇಫ್ ಆಗಿದ್ದರು. ಆರು ವಾರಗಳಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದವರಲ್ಲಿ ಎಲ್ಲರೂ ಬೇರೆ ಬೇರೆ ಸುದ್ದಿ ಮಾದ್ಯಮಗಳ ಮುಂದೆ ಕಾಣಿಸಿಕೊಂಡು ತಮ್ಮ ಬಿಗ್ ಬಾಸ್ ಜರ್ನಿಯ ಏರಿಳಿತಗಳನ್ನು, ಸಿಹಿ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಮನೆಯ ಅನ್ಯ ಸದಸ್ಯರ ಕುರಿತಂತೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದ್ದರು.
ಆದರೆ ಆರನೇ ವಾರಾಂತ್ಯದಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ಸಾನ್ಯ ಅಯ್ಯರ್ ಮಾತ್ರ ಇದುವರೆಗೂ ಯಾವುದೇ ಸುದ್ದಿ ಮಾದ್ಯಮದ ಮುಂದೆ ಬಂದಿಲ್ಲ. ಅವರ ಸಂದರ್ಶನಗಳ ಯಾವುದೇ ಸಣ್ಣ ಸುಳಿವು ಸಹಾ ಇಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಾನ್ಯಾ ಅಯ್ಯರ್ ಮಾದ್ಯಮಗಳ ಕೈಗೆ ಸಿಗುತ್ತಿಲ್ಲವೇ? ಅವರು ಸಂದರ್ಶನ ನೀಡುವುದಕ್ಕೆ ಯಾವುದೇ ಆಸಕ್ತಿ ತೋರುತ್ತಿಲ್ಲವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಬಿಗ್ ಬಾಸ್ ನ ಪ್ರೇಕ್ಷಕರು ಮತ್ತು ಸಾನ್ಯಾ ಅಯ್ಯರ್ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಅಲ್ಲದೇ ಇದೇ ವಿಚಾರವಾಗಿ ಒಂದಷ್ಟು ಹೊಸ ಸುದ್ದಿಗಳು ಹರಿದಾಡಿದೆ.
ಸಾನ್ಯಾ ಅಯ್ಯರ್ ಅವರನ್ನು ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ರೀ ಎಂಟ್ರಿ ನೀಡುವ ಸಲುವಾಗಿ ಬಿಗ್ ಬಾಸ್ ಸಾನ್ಯಾರನ್ನು ಸೀಕ್ರೆಟ್ ಸ್ಥಳದಲ್ಲಿ ಇರಿಸಿದ್ದಾರೆ ಎನ್ನಲಾಗಿದೆ. ಪ್ರತಿ ಬಾರಿ ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಸದಸ್ಯರು ಮನೆಯೊಳಗೆ ಎಂಟ್ರಿ ನೀಡುತ್ತಾರೆ. ಈ ಬಾರಿ ಆ ಇಬ್ಬರಲ್ಲಿ ಒಬ್ಬರು ಸಾನ್ಯಾ ಅಯ್ಯರ್ ಆಗಿರಲಿದ್ದಾರೆ ಎನ್ನಲಾಗಿದ್ದು, ಅದೇ ಕಾರಣದಿಂದಲೇ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದ ಮೇಲೂ ಕೂಡಾ ಮಾದ್ಯಮಗಳ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಇದು ಎಷ್ಟು ಸತ್ಯ ಅನ್ನೋದಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ವರೆಗೆ ಕಾಯುವುದು ಅನಿವಾರ್ಯವಾಗಿದೆ.