ಪ್ರತಿವರ್ಷ ದೀಪಾವಳಿ ಬರುವ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಜನ ಪಟಾಕಿ ಬೇಡವೆನ್ನುವ ಅಭಿಯಾನವನ್ನು ಪ್ರಾರಂಭಿಸುತ್ತಾರೆ. ಪರಿಸರ ಕಾಳಜಿಯನ್ನು ಮೆರೆಯುತ್ತಾರೆ. ಈ ಬಾರಿಯೂ ಕೂಡಾ ಪಟಾಕಿ ಬ್ಯಾನ್ ಮಾಡಿ ಎಂದು ಆಗ್ರಹ ಮಾಡುತ್ತಿರುವವರ ಕುರಿತಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಚಾರವೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಸದ್ಗುರು ಅವರು ಪಟಾಕಿಯ ಕುರಿತಾಗಿ ಹೇಳಿರುವ ವಿಡಿಯೋವನ್ನು ಶೇರ್ ಮಾಡಿಕೊಂಡು ಕಂಗನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸದ್ಗುರು ಅವರ ವಿಡಿಯೋ ಶೇರ್ ಮಾಡಿಕೊಂಡ ಕಂಗನಾ, ದೀಪಾವಳಿ ಹೋರಾಟಗಾರರಿಗೆ ಇದು ಸರಿಯಾದ ಉತ್ತರ. ಪಟಾಕಿ ಬ್ಯಾನ್ ಮಾಡಿ ಎನ್ನುವಂತಹವರು ಮೂರು ದಿನ ಆಫೀಸಿಗೆ ಕಾರನ್ನು ತೆಗೆದುಕೊಂಡು ಹೋಗದೆ, ನಡೆದುಕೊಂಡು ಹೋಗಿ ಎಂದಿದ್ದಾರೆ. ಅಲ್ಲದೇ ಸದ್ಗುರು ಅವರ ಬಗ್ಗೆ ಹೇಳುತ್ತಾ, ಮಿಲಿಯನ್ ಗಟ್ಟಲೆ ಮರಗಳನ್ನು ವಿಶ್ವದಾದ್ಯಂತ ನೆಡುವ ಮೂಲಕ ದಾಖಲೆ ಮಾಡಿರುವ ವ್ಯಕ್ತಿ ಇವರು ಎಂದು ಕಂಗನಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಪಟಾಕಿ ಬ್ಯಾನ್ ಮಾಡಿ ಎಂದು ಆಗ್ರಹ ಮಾಡುವವರ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸದ್ಗುರು ಅವರು ತಮ್ಮ ವಿಡಿಯೋ ಒಂದರಲ್ಲಿ ತಾವು ಬಹಳ ಹಿಂದೆ ಪಟಾಕಿ ಹೊಡೆಯುತ್ತಿದ್ದ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಇದ್ದಕ್ಕಿದ್ದಂತೆ ಪರಿಸರದ ಕಾಳಜಿಯನ್ನು ಮಾಡುತ್ತಾರೆ, ಮಕ್ಕಳು ಪಟಾಕಿಯನ್ನು ಹೊಡೆಯಬಾರದು ಎಂದು ಹೇಳುತ್ತಾರೆ. ಅದು ಸರಿಯಲ್ಲ. ಗಾಳಿ ಹಾಗೂ ಪರಿಸರದ ಬಗ್ಗೆ ಅಷ್ಟೊಂದು ಕಾಳಜಿ ಇರುವವರು ಮೂರು ದಿನ ಆಫೀಸಿಗೆ ಕಾರಿನಲ್ಲಿ ಹೋಗುವುದು ಬೇಡ. ಈ ತ್ಯಾಗ ಮಾಡುವುದರಿಂದ ಮಕ್ಕಳು ಪಟಾಕಿ ಹೊಡೆದು ಎಂಜಾಯ್ ಮಾಡಲಿ ಎಂದು ಹೇಳಿದ್ದಾರೆ.