ಶ್ರಮ ಹಾಗೂ ನಿಷ್ಠೆಯಿಂದ ಮಾಡುವ ಪ್ರಯತ್ನಕ್ಕೆ ಖಂಡಿತ ಸೋಲು ಎದುರಾಗದು. ದೃಢ ನಿಶ್ಚಯದಿಂದ ಮುಂದೆ ಸಾಗುವವರಿಗೆ ಜಯ ಖಂಡಿತ ಸಿಕ್ಕೇ ಸಿಗುತ್ತದೆ. ಹೀಗೆ ಕಷ್ಟ ಪಟ್ಟು ಮುಂದೆ ಬರಲು ಬಯಸುವವರಿಗೆ ಜಾತಿ, ಧರ್ಮ, ಬಡತನಗಳಂತಹ ನೂರು ಸಮಸ್ಯೆಗಳು ಎದುರಾದರೂ ಅವರು ಎಲ್ಲವನ್ನೂ ದಾಟಿ ಮುಂದೆ ಸಾಗಿ, ತಾವು ಸೇರಬೇಕಾದ ಗಮ್ಯವನ್ನು ಖಂಡಿತ ಸೇರುತ್ತಾರೆ. ಆಗಾಗ ಇಂತಹ ಸಾಧಕರ ಸಾಧನೆಯ ವಿಚಾರಗಳು ಸುದ್ದಿಯಾದಾಗ ಇದು ಅನೇಕರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯನ್ನು ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈಗ ಬಿಹಾರದ ದಿನಗೂಲಿ ಕಾರ್ಮಿಕರೊಬ್ಬರ ಮಗ ಇಂತಹುದೊಂದು ಸಾಧನೆ ಮೆರೆದು ಸುದ್ದಿಯಾಗಿದ್ದಾನೆ. ಹೌದು ಬಿಹಾರದ ಪಾಟ್ನಾ ಬಳಿಯ ಪುಲ್ವಾರಿ ಶರೀಫ್ ನ ಗೋನ್ಪುರ ಗ್ರಾಮದ ಕಿರಣ್ ಕುಮಾರ್ ಶೋಷಿತ ಸಮಾಧಾನ ಕೇಂದ್ರದಲ್ಲಿ 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಇವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. ಈಗ ಕಿರಣ್ ಕುಮಾರ್ ಗೆ ಸುಮಾರು 2.5 ಕೋಟಿ ರೂಪಾಯಿಗಳ ವಿದ್ಯಾರ್ಥಿ ವೇತನ ದೊರೆತಿದ್ದು ಆತ ಇಂಜಿನಿಯರಿಂಗ್ ಪದವಿ ಶಿಕ್ಷಣ ಪಡೆಯಲು ಪೆನ್ಸಿಲ್ವೇನಿಯಾದ ಪ್ರತಿಷ್ಠಿತ ಕಾಲೇಜೊಂದಕ್ಕೆ ಹೋಗುತ್ತಿದ್ದಾನೆ.
ಕಿರಣ್ ಕುಮಾರ್ ಗೆ ರೂ. 2.5 ಕೋಟಿ ಸ್ಕಾಲರ್ಶಿಪ್ ಅನ್ನು ಯು ಎಸ್ ನಲ್ಲಿ 1826 ರಲ್ಲಿ ಸ್ಥಾಪನೆಯಾಗಿ, ಇಂದಿಗೂ ಒಂದು ಪ್ರಮುಖ ಇಂಜಿನಿಯರಿಂಗ್ ಶಾಲೆಯಾದ ಲಫಯೆಟ್ಟೆ ಕಾಲೇಜ್ ನೀಡುತ್ತಿದೆ. ಜಗತ್ತಿನ ವಿವಿಧ ದೇಶಗಳ ಕೇವಲ ಆರು ಜನ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಪ್ರತಿಷ್ಠಿತ ಡೈಯರ್ ಫೆಲೋಶಿಪ್ ಹೆಸರಿನ ಈ ವಿದ್ಯಾರ್ಥಿ ವೇತನ ದೊರೆತಿದ್ದು, ಅದರಲ್ಲಿ ಕಿರಣ್ ಕುಮಾರ್ ಒಬ್ಬನಾಗಿದ್ದಾನೆ. ಇನ್ನು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಲು ಕೆಲವು ಕಾರಣಗಳಿವೆ.
ವಿಶ್ವವಿದ್ಯಾನಿಲಯದ ಅಧಿಕಾರಿಗಳ ಪ್ರಕಾರ, “ತಮ್ಮ ಪ್ರಪಂಚದ ಮೇಲೆ ಪ್ರಭಾವ ಬೀರಲು ಶ್ರಮಿಸುವ ಮತ್ತು ಆಂತರಿಕ ಪ್ರೇರಣೆಯನ್ನು ಪ್ರದರ್ಶಿಸುವ ಅಸಾಧಾರಣ ವಿದ್ಯಾರ್ಥಿಗಳಿಗೆ ಡೈಯರ್ ಫೆಲೋಶಿಪ್ ನೀಡಲಾಗುತ್ತದೆ, ಜೊತೆಗೆ ಸಮಸ್ಯೆ-ಪರಿಹರಿಸುವಲ್ಲಿ ಪಟ್ಟುಬಿಡದ ಅವರ ಗಮನವನ್ನು ಪರಿಗಣಿಸಲಾಗುವುದು ಎನ್ನಲಾಗಿದೆ. ಕಿರಣ್ ಕುಮಾರ್ ತನ್ನ ಈ ಸಾಧನೆಗೆ ತನ್ನ ತಂದೆ ಹಾಗೂ ಕುಟುಂಬದ ನೆರವು ಮುಖ್ಯ ಕಾರಣ ಎನ್ನುವ ಮಾತನ್ನು ಹೇಳಿದ್ದಾನೆ.