ಭಾರತ ಸಿನಿರಂಗದ ಬಹುನಿರೀಕ್ಷಿತ ಸಿನಿಮಾ ಎನ್ನುವ ಹಣೆ ಪಟ್ಟಿಯೊಂದಿಗೆ ದೊಡ್ಡ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್. ಸಿನಿಮಾ ಬಿಡುಗಡೆ ಸಮಯ ಹತ್ತಿರವಾದಂತೆ ಸಿನಿಮಾ ತಂಡ ಪ್ರಚಾರ ಕಾರ್ಯವನ್ನು ಬಹಳ ಜೋರಾಗಿ ನಡೆಸಿದೆ. ಅದಕ್ಕಾಗಿ ದೇಶದ ವಿವಿಧೆಡೆ ವಿಶೇಷವಾಗಿ ಪ್ರಮುಖ ನಗರಗಳಲ್ಲಿ ಪ್ರಚಾರದ ಕಾರ್ಯ ಬಹಳ ಜೋರಾಗಿ, ಅದ್ದೂರಿಯಿಂದ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ನಿನ್ನೆ ಸಿನಿಮಾ ಪ್ರಚಾರ ಕಾರ್ಯ ಮುಂಬೈನಲ್ಲಿ ನಡೆದಿದೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು ಬಾಲಿವುಡ್ ನ ಭಾಯಿ ಜಾನ್ ಸಲ್ಮಾನ್ ಖಾನ್. ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್ ಖಾನ್ ಅವರು ತಮ್ಮ ಮುಂದಿನ ಸಿನಿಮಾದ ಘೋಷಣೆಯನ್ನು ಸಹಾ ಮಾಡಿದ್ದಾರೆ. ಅದು ಕೂಡಾ ನಟ ತಮ್ಮ ಈ ಹಿಂದಿನ ಸೂಪರ್ ಹಿಟ್ ಸಿನಿಮಾದ ಮುಂದುವರೆದ ಭಾಗವಮ್ನು ತಮ್ಮ ಮುಂದಿನ ಸಿನಿಮಾ ಎಂದು ಘೋಷಣೆಯನ್ನು ಮಾಡಿರುವುದು ಎಲ್ಲರ ಗಮನವನ್ನು ಸೆಳೆದಿದೆ.
ಬಾಹುಬಲಿ ಸಿನಿಮಾ ಕಥೆಯನ್ನು ಬರೆದಿದ್ದ ದಕ್ಷಿಣದ ಸಿನಿ ಕಥಾ ಸಾಹಿತಿ, ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಬರೆದಿದ್ದ ಕಥೆ, 2015 ರಲ್ಲಿ ಬಿಡುಗಡೆಯಾಗಿದ್ದ ಭಜರಂಗಿ ಭಾಯಿಜಾನ್ ಸಿನಿಮಾ ಆಗಿ ದೊಡ್ಡ ಯಶಸ್ಸನ್ನು ಕಂಡಿತ್ತು. ಸಿನಿಮಾದ ನಿರ್ಮಾಪಕರಲ್ಲಿ ರಾಕಲೈನ್ ವೆಂಕಟೇಶ್ ಅವರೂ ಒಬ್ಬರಾಗಿದ್ದರು ಎನ್ನುವುದು ವಿಶೇಷ. ಈಗ ಇದೇ ಸಿನಿಮಾದ ಮುಂದಿನ ಭಾಗ ಭಜರಂಗಿ ಭಾಯಿಜಾನ್ – 2 ಬರಲಿದೆ ಎನ್ನುವ ಮಾತನ್ನು ಹೇಳಿದ್ದಾರೆ ಸಲ್ಮಾನ್ ಖಾನ್.
ಈ ಹಿಂದೆ ತೆಲುಗು ಟಾಕ್ ಶೋ ಒಂದರಲ್ಲಿ ಮಾತನಾಡಿದ್ದ ವಿಜಯೇಂದ್ರ ಪ್ರಸಾದ್ ಅವರು ಭಜರಂಗಿ ಭಾಯಿಜಾನ್ ಗೆ ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಪಸಿವಾಡಿ ಪ್ರಾಣಂ ಸಿನಿಮಾ ಸ್ಪೂರ್ತಿ ಎನ್ನುವ ಮಾತನ್ನು ಹೇಳಿದ್ದರು. ಅಲ್ಲದೇ ಭಜರಂಗಿ ಭಾಯಿಜಾನ್ ಸಿನಿಮಾದ ಮುಂದುವರೆದ ಭಾಗ ಆದರೆ ನಾನೇ ಕಥೆ ಬರೆಯಬೇಕು ಎನ್ನುವ ಮಾತನ್ನು ಸಹಾ ಹೇಳಿದ್ದರು.