ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದ ಕರ್ನಾಟಕ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂಪತ್ತನ್ನು ಅನಾವರಣ ಮಾಡುವಂತಹ ವೈಲ್ಡ್ ಲೈಫ್ ಡಾಕ್ಯುಮೆಂಟರಿ “ಗಂಧದಗುಡಿ” ಟೀಸರ್ ಇಂದು ಬಿಡುಗಡೆಯಾಗಿದೆ. ಪುನೀತ್ ರಾಜಕುಮಾರ್ ಅವರ ತಾಯಿ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನವಾದ ಇಂದು ಗಂಧದಗುಡಿ ಟೀಸರ್ ಅನ್ನು ಪುನೀತ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಆಡಿಯೋದಲ್ಲಿ ಬಿಡುಗಡೆ ಮಾಡಿದ್ದಾರೆ.
ಗಂಧದಗುಡಿ ಸಾಕ್ಷ್ಯ ಚಿತ್ರದ ಟೀಸರ್ ಬಿಡುಗಡೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅದರ ಫೋಟೋಗಳನ್ನು ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ. ಈ ವೇಳೆ ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಎಂದೇ ಹೆಸರನ್ನು ಪಡೆದುಕೊಂಡಿರುವ ಮತ್ತೋರ್ವ ಸ್ಟಾರ್ ನಟ ಯಶ್ ಅವರು ಗಂಧದಗುಡಿ ಸಾಕ್ಷ್ಯ ಚಿತ್ರದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡು, ಅಪ್ಪು ಅವರ ಈ ಪ್ರಾಜೆಕ್ಟ್ ಹಾಗೂ ಅಪ್ಪು ಅವರ ಕುರಿತಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಯಶ್ ಅವರು ಟೀಸರನ್ನು ಶೇರ್ ಮಾಡಿಕೊಂಡು “ನೀವು ಈ ಪ್ರಾಜೆಕ್ಟ್ ಕುರಿತಾಗಿ ಮಾತನಾಡಿದಾಗಲೆಲ್ಲ ನಿಮ್ಮ ಕಣ್ಣಲ್ಲಿ ಮೂಡುತ್ತಿದ್ದ ಆ ಮಿಂಚು ಇನ್ನೂ ನನಗೆ ನೆನಪಿದೆ. ಈ ಚಿತ್ರದ ಬಗ್ಗೆ ನೀವು ಹೊಂದಿದ್ದ ಉತ್ಸಾಹವು ಅದು ನಿಮ್ಮ ಹೃದಯಕ್ಕೆ ಎಷ್ಟು ಹತ್ತಿರವಾಗಿತ್ತು ಎಂಬುದನ್ನು ತೋರಿಸುತ್ತಿತ್ತು. ನಮ್ಮ ಗಂಧದಗುಡಿಯನ್ನು ನಿಮ್ಮ ಕಣ್ಣಿನಿಂದ ತೋರಿಸಿದ್ದಕ್ಕೆ ಧನ್ಯವಾದಗಳು ಅಪ್ಪು ಸರ್. ಇದು ನಿಜವಾಗಿಯೂ ಸ್ವರ್ಗದಂತೆ ಇದೆ” ಎಂದು ಬರೆದುಕೊಂಡು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.