ಈ ಬಾರಿ ಟಿವಿಯಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಪ್ರಾರಂಭವಾಗುವುದಕ್ಕೂ ಮೊದಲೇ, ಓಟಿಟಿಯಲ್ಲಿ ಬಿಗ್ ಬಾಸ್ ಕನ್ನಡ ತನ್ನ ಮೊದಲ ಸೀಸನ್ ಆರಂಭಿಸಿತ್ತು. ಸೋಶಿಯಲ್ ಮೀಡಿಯಾ ಗಳಲ್ಲಿ ಸಂಚಲನ ಸೃಷ್ಟಿಸಿರುವ ವ್ಯಕ್ತಿಗಳನ್ನು ಸಹಾ ಬಿಗ್ ಬಾಸ್ ಮನೆಯೊಳಗೆ ಕಳುಹಿಸುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ಬೆಳವಣಿಗೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಸೆನ್ಸೇಶನ್ ಆಗಿರುವ ಕಾಫಿನಾಡು ಚಂದು ಬಿಗ್ ಬಾಸ್ ಕನ್ನಡ ಓಟಿಟಿ ಮೂಲಕ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುವರು ಎನ್ನುವ ನಿರೀಕ್ಷೆಗಳು ಇದ್ದವು. ಈ ವಿಚಾರವಾಗಿ ಒಂದಷ್ಟು ಸುದ್ದಿಗಳು ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಕಾಫಿನಾಡು ಚಂದು ಬಿಗ್ ಬಾಸ್ ಮನೆಗೆ ಹೋಗಬೇಕೆಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
ಆದರೆ ಶೋ ಪ್ರಾರಂಭವಾದಾಗ ಕಾದಿತ್ತು ನಿರಾಸೆ, ಏಕೆಂದರೆ ಕಾಫಿನಾಡು ಚಂದು ಅವರಿಗೆ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡುವ ಅವಕಾಶ ದೊರೆತಿರಲಿಲ್ಲ. ಆದರೆ ಕಾಫಿ ನಾಡು ಚಂದು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅವರು ಸ್ವತಃ ಜನರ ಬಳಿಗೆ ಹೋಗಿ ಕಾಫಿನಾಡು ಚಂದು ಅವರನ್ನು ಬಿಗ್ ಬಾಸ್ ಗೆ ಕಳುಹಿಸಬೇಕೆಂದು ಜನರಿಂದ ಹೇಳಿಸಿ, ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದನ್ನೆಲ್ಲಾ ನೋಡಿದಾಗ ಬಹುಶಃ ಕಾಫಿನಾಡು ಚಂದು ಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಬಹುದು ಎಂದು ಕೊಂಡಿದ್ದರು ನೆಟ್ಟಿಗರು. ಆದರೆ ಅದೂ ಸಹಾ ನಿಜವಾಗಲಿಲ್ಲ. ಇನ್ನೂ ಅರವತ್ತು ದಿನಗಳ ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ ಮುಗಿದೇ ಹೋಯ್ತು.
ಇದರ ಬೆನ್ನಲ್ಲೇ ನಿನ್ನೆ ಟಿವಿಯಲ್ಲಿ ಬಿಗ್ ಬಾಸ್ ಕನ್ನಡದ ಒಂಬತ್ತನೇ ಸೀಸನ್ ಅದ್ದೂರಿಯಾಗಿ ಆರಂಭವಾಗಿದೆ.
ಟಿವಿಯಲ್ಲಿ ಹೊಸ ಬಿಗ್ ಬಾಸ್ ಸೀಸನ್ ಆರಂಭವಾಗುವ ಒಂದೆರಡು ದಿನಗಳ ಹಿಂದೆ, ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಮಾದ್ಯಮಗಳ ಸುದ್ದಿಗಳಲ್ಲಿ ಹರಿದಾಡಿದ್ದವು. ಅದರಲ್ಲಿ ಕಾಫಿನಾಡು ಚಂದು ಟಿವಿ ಬಿಗ್ ಬಾಸ್ ಗೆ ಪ್ರವೇಶ ಮಾಡುವುದು ಪಕ್ಕಾ ಎಂದು ಹೇಳಲಾಗಿತ್ತು. ಇದೇ ವೇಳೆ ನೆಟ್ಟಿಗರೂ ಕಾಫಿನಾಡು ಚಂದು ಟಿವಿ ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಪ್ರವೇಶಿಸಬಹುದು ಎಂದು ಕಾದು ಕುಳಿತಿದ್ದರು. ಆದರೆ ಎರಡನೇ ಬಾರಿಯೂ ಎಲ್ಲರ ನಿರೀಕ್ಷೆಗಳು ಸುಳ್ಳಾಯ್ತು. ಕಾಫಿನಾಡು ಚಂದು ಅವರಿಗೆ ಟಿವಿ ಬಿಗ್ ಬಾಸ್ ನಲ್ಲಿಯೂ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶಿಸುವ ಅವಕಾಶ ಸಿಕ್ಕಿಲ್ಲ ಎನ್ನುವುದು ನಿನ್ನೆ ಶೋ ನೋಡಿದವರಿಗೆಲ್ಲಾ ತಿಳಿದಿದೆ.
ಚಂದು ಬಿಗ್ ಬಾಸ್ ಮನೆಗೆ ಬರದೇ ಇರುವುದು ಅನೇಕರಿಗೆ ಅಸಮಾಧಾನದ ಜೊತೆಗೆ ಬೇಸರಕ್ಕೂ ಸಹಾ ಕಾರಣವಾಗಿದೆ. ಕಾಫಿನಾಡು ಚಂದು ಸೋಶಿಯಲ್ ಮೀಡಿಯಾ ಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಅವರಿಗೆ ಸೆಲೆಬ್ರಿಟಿಗಳಿಗಿಂತ ಹೆಚ್ಚು ಫಾಲೋಯರ್ಸ್ ಇದ್ದಾರೆ. ಆದರೂ ಏಕೆ ಬಿಗ್ ಬಾಸ್ ಮನೆಗೆ ಪ್ರವೇಶ ನೀಡಲಿಲ್ಲ ಎನ್ನುವುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ವಿಚಾರವಾಗಿ ಈಗ ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮದೇ ಆದ ಅಭಿಪ್ರಾಯವನ್ನು ಹಂಚಿ ಕೊಳ್ಳಲು ಮುಂದಾಗಿದ್ದಾರೆ. ತರಹೇವಾರಿ ಕಾರಣಗಳನ್ನು ಸಹಾ ನೀಡುತ್ತಿದ್ದಾರೆ.
ಅದರಲ್ಲಿ ಒಂದು ಕಾರಣ ಎನ್ನುವಂತೆ ನೆಟ್ಟಿಗರು ಬಹುಶಃ ಕಾಫಿನಾಡು ಚಂದು ಕೆಲವೇ ದಿನಗಳ ಹಿಂದೆಯಷ್ಟೇ ಝೀ ಕನ್ನಡ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಕಿರುತೆರೆಯ ಶೋ ಗೆ ಆಗಮಿಸಿದ್ದ ಚಂದು ಅವರ ಸುದ್ದಿಗಳು, ವೀಡಿಯೋಗಳು ವೈರಲ್ ಆಗಿದ್ದವು. ಬಹುಶಃ ಈ ಒಂದು ಕಾರಣದಿಂದಾಗಿಯೇ ಕಲರ್ಸ್ ಕನ್ನಡ ವಾಹಿನಿ ಕಾಫಿನಾಡು ಚಂದು ಅವರನ್ನು ಕೈ ಬಿಟ್ಟಿರಬಹುದು ಎಂದು ಹೇಳುತ್ತಿದ್ದಾರೆ. ಇದೇ ವೇಳೆ ಕೆಲವರು ಬಹುಶಃ ಟಿವಿ ಬಿಗ್ ಬಾಸ್ ಗೆ ಕಾಫಿನಾಡು ಚಂದು ವೈಲ್ಡ್ ಕಾರ್ಡ್ ಎಂಟ್ರಿ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಈ ನಿರೀಕ್ಷೆಗಳು ನಿಜವಾಗುತ್ತಾ? ಕಾದು ನೋಡಬೇಕಾಗಿದೆ.