ಈ ಪ್ರಾಣಿಗಳನ್ನು ಸಾಕಿದರೆ ಅದೃಷ್ಟ ಒಲಿದು ಬಂದು, ಸಮೃದ್ಧಿ ನೆಲೆಸುತ್ತದೆ ಎನ್ನುತ್ತದೆ ವಾಸ್ತು

Written by Soma Shekar

Published on:

---Join Our Channel---

ನಾವು ಸಾಮಾನ್ಯವಾಗಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಜನರು ಹಸು, ಎಮ್ಮೆ,ಕುರಿ, ಮೇಲೆ ಮತ್ತು ಕೋಳಿಗಳನ್ನು ಸಾಕುವುದನ್ನು ನೋಡಿದ್ದೇವೆ. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ನಾಯಿ, ಬೆಕ್ಕು ಮತ್ತು ಮೊಲಗಳನ್ನು ಬಹಳ ಪ್ರೀತಿಯಿಂದ, ಅವು ಸಹಾ ತಮ್ಮ ಮನೆಯ ಸದಸ್ಯರೇನೋ ಎನ್ನುವಂತೆ ಸಾಕಿರುತ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿಗಳು ಇರುವುದನ್ನು ದುರದೃಷ್ಟಕರ ಎಂದು ಪರಿಗಣಿಸಿದರೆ,‌ ಇನ್ನೂ ಕೆಲವು ಪ್ರಾಣಿಗಳ ಆಗಮನವು ಮನೆಗೆ ಬಹಳ ಶುಭಪ್ರದ ಹಾಗೂ ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಅಲ್ಲದೇ ಅವುಗಳ ಆಗಮನವು ಮನೆಯಲ್ಲಿ ಸಂತೋಷವನ್ನು ತರುತ್ತದೆ ಎಂದು ಹೇಳಲಾಗಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಗ್ರಹ ಹಾಗೂ ನಕ್ಷತ್ರ ಕ್ಕೆ ಅನುಸಾರವಾಗಿ ಪ್ರಾಣಿಯನ್ನು ಸಾಕಬೇಕು ಎನ್ನಲಾಗಿದ್ದು, ಹಾಗೆ ಮಾಡಿದರೆ ಅದರಿಂದ ಅಂತಹ ವ್ಯಕ್ತಿಗೆ ಆತನ ಜೀವನದಲ್ಲಿ ಆ ಪ್ರಾಣಿಯು ಅದೃಷ್ಟವೆಂಬುದಾಗಿ ಸಾಬೀತಾಗುತ್ತದೆ. ಅಲ್ಲದೇ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಉದ್ಭವಿಸುವುದಿಲ್ಲ. ಜೊತೆಗೆ ಭವಿಷ್ಯದಲ್ಲಿ ಎದುರಾಗುವ ಸಂಕಟಗಳು ಕೂಡಾ ಈ ಪ್ರಾಣಿಗಳ ದೆಸೆಯಿಂದ ದೂರಾಗುತ್ತವೆ ಎನ್ನಲಾಗಿದೆ. ಹಾಗಾದರೆ ಅದೃಷ್ಟ ಹಾಗೂ ಸಂತೋಷವನ್ನು ಹೊತ್ತು ತರುವ ಆ ಪ್ರಾಣಿಗಳು ಯಾವುವು ಎನ್ನುವುದನ್ನು ನಾವೀಗ ತಿಳಿಯೋಣ.

ಹಿಂದೂ ಧರ್ಮದ ಪ್ರಕಾರ ಶ್ವಾನ ಅಥವಾ ನಾಯಿಯನ್ನು ಭೈರವನ ಸೇವಕನೆಂದು ನಂಬಲಾಗಿದೆ. ಆದ್ದರಿಂದಲೇ ಮನೆಯಲ್ಲಿ ನಾಯಿಯನ್ನು ಸಾಕಿದರೆ ಭೈರವನ ಕೃಪಾಕಟಾಕ್ಷವೂ ಸದಾ ನಮ್ಮ ಮೇಲೆ ಇರುತ್ತದೆ ಎನ್ನಲಾಗಿದೆ‌. ಅದರ ಜೊತೆಗೆ ದೇವಿ ಲಕ್ಷ್ಮಿಯ ಕಟಾಕ್ಷವು ಕೂಡಾ ಒಲಿದು ಬರುತ್ತದೆ, ಕುಟುಂಬದಲ್ಲಿ ಧನಾಗಮನ ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ನಾಯಿಯನ್ನು ಸಾಕುವುದರಿಂದ ವ್ಯಕ್ತಿಯೊಬ್ಬನ ಅಶುಭ ಗ್ರಹವು ಶುಭ ಗ್ರಹವಾಗಿ ಪರಿವರ್ತನೆಯಾಗುವುದು ಎನ್ನಲಾಗಿದೆ.

ಆದರೆ ಎಲ್ಲರ ಮನೆಗಳಲ್ಲಿಯೂ ನಾಯಿಗಳನ್ನು ಸಾಕುವುದಕ್ಕೆ ಅನುಕೂಲಕರವಾದಂತಹ ಪರಿಸ್ಥಿತಿ ಇರುವುದಿಲ್ಲ. ಆದ್ದರಿಂದಲೇ ನಾಯಿಯನ್ನು ಸಾಕಲು ಆಗದವರು, ತಮ್ಮ ಆರ್ಥಿಕ ಸಮಸ್ಯೆಗಳಿಗೆ ಒಂದು ಪರಿಹಾರ ಬಯಸುವವರು, ಪ್ರತಿನಿತ್ಯ ನಾಯಿಗಳಿಗೆ ಆಹಾರವನ್ನು ನೀಡುವ ಕಾರ್ಯವನ್ನು ಮಾಡಬಹುದಾಗಿದೆ. ಈ ಮೂಲಕವೂ ಅವರು ತಮ್ಮ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಫೆಂಗ್ ಶೂಯಿ ಯಲ್ಲಿ ಮೀನನ್ನು ಬಹಳ ಶುಭದಾಯಕ ಪ್ರಾಣಿ ಎಂದು ಪರಿಗಣಿಸಲಾಗಿದೆ. ಶ್ರೀ ಮಹಾವಿಷ್ಣು ವಿನ ಮತ್ಸ್ಯಾವತಾರದ ಕಾರಣದಿಂದಾಗಿ ಮೀನಿಗೆ ಧಾರ್ಮಿಕ ಮಹತ್ವ ಸಹಾ ಇದೆ, ಅದಕ್ಕೂ ಒಂದು ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಮೀನುಗಳನ್ನು ಮನೆಯಲ್ಲಿ ಸಾಕುವುದರಿಂದ ಸಮಸ್ಯೆಗಳು ದೂರಾಗುವ ಜೊತೆಗೆ, ಮನೆಯಲ್ಲಿ ಸುಖ, ಶಾಂತಿ ನೆಲೆಸಿದ, ಸಮೃದ್ಧಿಯು ಮೂಡುತ್ತದೆ ಎಂದು ಹೇಳಲಾಗಿದೆ.

ಮೊಲ ನೋಡಲು ಬಹಳ ಮುದ್ದಾದ ಪ್ರಾಣಿಯಾಗಿರುತ್ತದೆ. ಇದನ್ನು ಮನೆಯಲ್ಲಿ ಸಾಕುವುದರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳಲಾಗಿದೆ. ಮನೆಗಳಲ್ಲಿ ಮೊಲಗಳನ್ನು ಸಾಕುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸಕಾರಾತ್ಮಕ ಶಕ್ತಿಗಳು ಹೆಚ್ಚು ಸಂಚಾರವಾಗುತ್ತದೆ ಎನ್ನಲಾಗಿದೆ. ವಾಸ್ತುಶಾಸ್ತ್ರದಲ್ಲಿ ಮೊಲವನ್ನು ಸುಖ ಹಾಗೂ ಸಮೃದ್ಧಿಯ ಸಂಕೇತ ಎನ್ನಲಾಗಿದೆ.

ವಾಸ್ತುಶಾಸ್ತ್ರದಲ್ಲಿ ಆಮೆಯನ್ನು ಕೂಡಾ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗಿದೆ. ಆಮೆಯನ್ನು ಸಾಕುವುದು ಅದೃಷ್ಟ ಎನ್ನಲಾಗಿದೆ. ಆದರೆ ಆ ಅವಕಾಶ ಬಹಳ ವಿರಳವಾದ ಕಾರಣ, ಮನೆಯಲ್ಲಿ ಚಿನ್ನದ ಅಥವಾ ಬೆಳ್ಳಿಯ ಆಮೆಯ ಮೂರ್ತಿಯನ್ನು ಮಾಡಿಸಿ ಇಟ್ಟರೂ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳಲಾಗಿದೆ. ಆಮೆಯ ಆಗಮನವು ವೈಭವ ಹಾಗೂ ಐಶ್ವರ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

Leave a Comment