ಆಚಾರ್ಯ ಸಿನಿಮಾ ಸೋಲಿನಿಂದ‌ ಕಂಗೆಟ್ಟ ಡಿಸ್ಟ್ರಿಬ್ಯೂಟರ್: ಪರಿಹಾರ ನೀಡಿ ಎಂದು ಮೆಗಾಸ್ಟಾರ್ ಗೆ ಪತ್ರ

Written by Soma Shekar

Published on:

---Join Our Channel---

ಟಾಲಿವುಡ್ ನ ಸ್ಟಾರ್ ನಟರಾದ ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ಮತ್ತೊಬ್ಬ ಸ್ಟಾರ್ ನಟ ರಾಮ್ ಚರಣ್ ನಟಿಸಿರುವ, ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಆಚಾರ್ಯ ಸಿನಿಮಾ ಬಾಕ್ಸಾಫೀಸಿನಲ್ಲಿ ಸೋತಿದೆ. ಆಚಾರ್ಯ ಸಿನಿಮಾ ಬಿಡುಗಡೆಗೆ ಮುನ್ನ, ಸಿನಿಮಾ ಟೀಸರ್, ಟ್ರೈಲರ್ ಮೂಲಕ ದೊಡ್ಡ ಕ್ರೇಜ್ ಸೃಷ್ಟಿ ಮಾಡಿತ್ತು, ನೂರಾರು ನಿರೀಕ್ಷೆಗಳನ್ನು ಇಟ್ಟು ಕೊಂಡು ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಮೆಗಾ ಫ್ಯಾಮಿಲಿಯ ಅಪ್ಪ, ಮಗನನ್ನು ಒಂದೇ ತೆರೆಯ ಮೇಲೆ ನೋಡಲು ಕಾತರರಾಗಿದ್ದರು. ಆದರೆ ಸಿನಿಮಾ ಬಿಡುಗಡೆ ನಂತರ ಎಲ್ಲರ ನಿರೀಕ್ಷೆಗಳು ಉಲ್ಟಾ ಹೊಡೆದವು.

ಆಚಾರ್ಯ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆದಿದೆ. ಹೀನಾಯ ಸೋಲನ್ನು ಕಂಡ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಹಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕಲೆಕ್ಷನ್ ವಿಚಾರದಲ್ಲಿ ನೂರು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದವರಿಗೆ ಸಿನಿಮಾ ದೊಡ್ಡ ನಷ್ಟವನ್ನು ತಂದೊಡ್ದಿದೆ. ಈಗ ಇದೇ ವಿಚಾರವಾಗಿ ಒಂದು ಸುದ್ದಿಯಾಗಿದ್ದು, ಸಿನಿಮಾ ಡಿಸ್ಟ್ರಿಬ್ಯೂಟರ್ ಒಬ್ಬರು ತನಗಾದ ನಷ್ಟವನ್ನು ಹಿಂತಿರುಗಿಸುವ ಹಾಗೆ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ.

ಹೌದು, ರಾಜ್ ಗೋಪಾಲ್ ಬಜಾಜ್ ಎನ್ನುವ ವಿತರಕರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಪತ್ರ ಬರೆದು, ನಷ್ಟ ಪರಿಹಾರವನ್ನು ನೀಡುವಂತೆ ಮನವಿಯೊಂದನ್ನು ಮಾಡಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಸಿನಿಮಾವನ್ನು ರಾಜ್ ಗೋಪಾಲ್ ಬಜಾಜ್ ಅವರು ಒಂದು ಪ್ರಮುಖ ಏರಿಯಾದಲ್ಲಿ ಈ ಸಿನಿಮಾ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದರು. ಆದರೆ ಈಗ ಅವರು ತಾನು ಹೂಡಿಕೆ ಮಾಡಿದ ಹಣದಿಂದ 75% ನಷ್ಟವಾಗಿದೆ ಎಂದು ಹೇಳಿದ್ದು, ದಯವಿಟ್ಟು ತನ್ನ ನಷ್ಟವನ್ನು ತುಂಬಿ ಕೊಡಿ ಎಂದು ಮನವಿ ಮಾಡಿದ್ದಾರೆ.

ಚಿರು ಮತ್ತು ರಾಮ್ ಚರಣ್ ಜೊತೆಯಾಗಿರುವ ಸಿನಿಮಾ ಬಿಡುಗಡೆಗೂ ಮುನ್ನ ಎಬ್ಬಿಸಿದ್ದ ನಿರೀಕ್ಷೆಗಳನ್ನು ಕಂಡು ರಾಜ್ ಗೋಪಾಲ್ ಬಜಾಜ್ ಅವರು ಕರ್ನಾಟಕದ ರಾಯಚೂರು ಜಿಲ್ಲೆಯ ವಿತರಣಾ ಹಕ್ಕುಗಳನ್ನು ಪಡೆದುಕೊಳ್ಳಲು, ಪ್ರಸಿದ್ಧ ವಿತರಕ ವಾರಂಗಲ್ ಶ್ರೀನು ಎನ್ನುವವರಿಗೆ ಪ್ರೀಮಿಯಂ ಪಾವತಿ ಮಾಡಿದ್ದರು. ಆದರೆ ಈಗ ಅದರಿಂದ ನಷ್ಟದ ಸುಳಿಯಲ್ಲಿ ಸಿಲುಕಿದ ರಾಜ್ ಗೋಪಾಲ್ ಬಜಾಜ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಪತ್ರವನ್ನು ಬರೆದಿದ್ದಾರೆ.

ರಾಜ್ ಗೋಪಾಲ್ ಬಜಾಜ್ ತಮ್ಮ ಪತ್ರದಲ್ಲಿ, ತಾನು ನಷ್ಟದಿಂದ ಸಾಲದಲ್ಲಿ ಆಳವಾಗಿ ಮುಳುಗಿ ಹೋಗಿದ್ದೇನೆ, ನನಗೆ ನೆರವನ್ನು ನೀಡಿ ಎಂದು ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಪತ್ರದಲ್ಲಿನ ಸಂಪೂರ್ಣ ವಿಷಯ ಒಟ್ಟಾರೆ ಪರಿಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲವಾದರೂ, ಆಚಾರ್ಯ ವಿತರಕರು ಬಹುತೇಕ ಎಲ್ಲೆಡೆ 60% ರಷ್ಟು ನಷ್ಟವನ್ನು ಅನುಭವಿಸಿರುವುದು ವಾಸ್ತವ ಎನ್ನಲಾಗಿದೆ.

ನಷ್ಟ ಹೊಂದಿರುವ ವಿತರಕರು ಮೆಗಾಸ್ಟಾರ್ ಅವರ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಸಿಗಬಹುದು ಎನ್ನುವ ನಂಬಿಕೆಯಲ್ಲಿ ಇದ್ದಾರೆ. ಈ ಸಮಸ್ಯೆಗೊಂದು ಸಮರ್ಪಕವಾದ ಉತ್ತರ ಸಿಕ್ಕಿ, ಸಮಸ್ಯೆ ಸುಖಾಂತ್ಯವನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಆಚಾರ್ಯ ಸಿನಿಮಾ ಮಾತ್ರ ನಿರೀಕ್ಷಿತ ಮಟ್ಟದ ಗೆಲುವನ್ನು ಪಡೆಯದೇ ಇರುವುದು ಅಭಿಮಾನಿಗಳಿಗೆ ದೊಡ್ಡ ನಿರಾಸೆಯನ್ನು ಉಂಟು ಮಾಡಿದೆ.

Leave a Comment