ಆಗ ರಾನು, ಈಗ ಭುವನ್: ಕಚ್ಚಾ ಬಾದಾಮ್ ಸಂಚಲನ ಗಾಯಕ ಮತ್ತೊಬ್ಬ ರಾನು ಆಗದಿರಲಿ

Written by Soma Shekar

Published on:

---Join Our Channel---

ಸಾಮಾಜಿಕ ಜಾಲತಾಣಗಳು ಇಂದು ಎಷ್ಟು ಪರಿಣಾಮಕಾರಿಯಾಗಿದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಯಾವುದೇ ವಿಚಾರವೇ ಆಗಲೀ ಸೆಕೆಂಡುಗಳ ಅವಧಿಯಲ್ಲಿ ಜಗತ್ತಿನ ಮೂಲೆ ಮೂಲೆಯನ್ನು ತಲುಪುವ ಸಾಮರ್ಥ್ಯವನ್ನು ಪಡೆದಿದೆ ಎಂದರೆ ಅದರಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೂ ಸಹಾ ದೊಡ್ಡದಾಗಿದೆ. ಕೆಲವೊಮ್ಮೆ ಸಾಮಾನ್ಯರಂತೆ ಜೀವನ ಮಾಡುತ್ತಿದ್ದವರು ಇರುಳು ಕಳೆದು ಹಗಲಾಗುವ ವೇಳೆಗೆ ಸ್ಟಾರ್ ಗಳಾಗಿ ಬಿಡುತ್ತಾರೆ. ಕೆಲವೇ ದಿನಗಳಲ್ಲಿ ಸೆಲೆಬ್ರಿಟಿಗಳ ಮಟ್ಟಕ್ಕೆ ಸದ್ದು, ಸುದ್ದಿ ಮಾಡುತ್ತಾರೆ.‌ ಜನ ಮನ್ನಣೆ ಪಡೆಯುತ್ತಾರೆ.

ಆದರೆ ಹೀಗೆ ಜನಪ್ರಿಯತೆ ಪಡೆದು, ಇದ್ದಕ್ಕಿದ್ದಂತೆ ಬಿರುಗಾಳಿ ಎಬ್ಬಿಸಿದವರು, ಸದ್ದು ಮಾಡಿದ ವೇಗದಲ್ಲೇ ನಿಶ್ಯಬ್ದದಲ್ಲಿ ಕಳೆದು ಹೋಗುತ್ತಿದ್ದಾರಾ? ಎನ್ನುವ ಬೆಳವಣಿಗೆಗಳು ಸಹಾ ಇದೇ ಸಾಮಾಜಿಕ ಜಾಲತಾಣಗಳ ಮೂಲಕವೇ ಸುದ್ದಿಯಾದಾಗ ಅಚ್ಚರಿಯಾಗುವುದು ಸಹಾ ವಾಸ್ತವ. ಹೌದು, ಕೆಲವೇ ವರ್ಷಗಳ ಹಿಂದೆ ರಾನು ಮಂಡಾಲ್ ಎನ್ನುವ ಮಹಿಳೆ ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತಿದ್ದ ಹಾಡಿನ ವೀಡಿಯೋ ವೈರಲ್ ಆಗಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಇಂತಹ ಗಾಯಕಿ ಮತ್ತೊಬ್ಬರಿಲ್ಲ ಎನ್ನುವ ಹೊಗಳಿಕೆಗಳು ಹರಿದು ಬಂದವು.

ಸಿನಿಮಾ ನಿರ್ಮಾಪಕ, ಗಾಯಕ, ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ರಾನು ಮಂಡಾಲ್ ಗೆ ತಮ್ಮ ಸಿನಿಮಾದಲ್ಲಿ ಹಾಡುವ ಅವಕಾಶವನ್ನು ನೀಡಿದರು. ಆ ಹಾಡು ದೊಡ್ಡ ಯಶಸ್ಸು ಪಡೆಯಿತು. ಇನ್ನು ರಾನು ಮಂಡಾಲ್ ಜೀವನ ಬದಲಾಗಿ ಹೋಯಿತು ಎಂದೇ ಎಲ್ಲರೂ ತಿಳಿದರು. ಆದರೆ ಈ ಜನಪ್ರಿಯತೆ, ಹೆಸರು ಹೆಚ್ಚು ದಿನ ಉಳಿಯಲಿಲ್ಲ, ರಾನು ಮಂಡಾಲ್ ವರ್ತನೆ ಬಗ್ಗೆ ನೆಗೆಟಿವ್ ಕಾಮೆಂಟ್ ಕೇಳಿ ಬಂತು. ರಾನು ಎಲ್ಲೂ ಕಾಣಲಿಲ್ಲ,‌ ಸುದ್ದಿಗಳಿಂದ ಕಳೆದು ಹೋದರು, ಕೆಲವೊಮ್ಮೆ ಟ್ರೋಲ್ ಆದರು.

ರಾನು ಯಾವ ವೇಗದಲ್ಲಿ ಸದ್ದು ಮಾಡಿದರೋ, ಅದೇ ವೇಗದಲ್ಲಿ ಮರೆಯಾದರು. ಈಗ ಆಕೆಯ ಬಗ್ಗೆ ಯಾರಿಗೂ ಆಸಕ್ತಿಯೇ ಇಲ್ಲವೇನೋ ಎನ್ನುವಂತೆ ಇದೆ ಪರಿಸ್ಥಿತಿ. ಈಗ ರಾನು ಮಂಡಾಲ್ ನಂತರ ಮತ್ತೊಬ್ಬ ಗಾಯಕ ಸಾಮಾಜಿಕ ಜಾಲತಾಣಗಳ ಮೂಲಕ ಇದ್ದಕ್ಕಿದ್ದಂತೆ ದೊಡ್ಡ ಸದ್ದು ಮಾಡುತ್ತಿದ್ದಾರೆ. ಹೌದು, ಕಚ್ಚಾ ಬಾದಾಮ್ ಎನ್ನುವ ಒಂದು ಹಾಡಿನಿಂದ ದೇಶದಾದ್ಯಂತ ಸಂಚಲನ ಹುಟ್ಟಿಸಿದ್ದಾರೆ ಭುವನ್ ಬಡ್ಯಾಕರ್. ಎಲ್ಲೆಲ್ಲೂ ಇವರ ಹಾಡೇ ಕೇಳುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಭುವನ್ ಹಾಡಿರುವ ಕಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿ ವೀಡಿಯೋ ಶೇರ್ ಮಾಡಿದ್ದಾರೆ. ಭುವನ್ ಹಾಡಿದ ಹಾಡನ್ನು ರೀಮಿಕ್ಸ್ ಮಾಡಿ, ಯೂಟ್ಯೂಬ್ ನಲ್ಲೂ ರಿಲೀಸ್ ಮಾಡಿ ದೊಡ್ಡ ಬಿರುಗಾಳಿ ಎಬ್ಬಿಸಿತು. ಭುವನ್ ಅವರಿಗೆ ಸನ್ಮಾನಗಳು‌ ನಡೆಯುತ್ತಿವೆ. ಅಪ್ಪಟ ಪ್ರತಿಭೆ ಎಂದು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಅಲ್ಲದೇ ಭುವನ್ ಜೊತೆಗೆ ಕೆಲವು ಸೆಲೆಬ್ರಿಟಿಗಳು ಅವರ ಹಾಡಿಗೆ ಹೆಜ್ಜೆಗೆ ಹಾಕಿದ್ದಾರೆ.

ಇನ್ನು ಭುವನ್ ಅವರು ಇತ್ತೀಚಿಗೆ ಈಗ ತಾನು ಸೆಲೆಬ್ರಿಟಿ ಆದ ಕಾರಣ ಮೊದಲಿನಂತೆ ಶೇಂಗಾ ವ್ಯಾಪಾರ ಮಾಡುವುದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಸೆಕೆಂಡ್ ಹ್ಯಾಂಡ್ ಕಾರು ಕೊಂಡಿದ್ದ ಅವರು ಅದನ್ನು ಚಾಲನೆ ಮಾಡುವುದು ಕಲಿಯಲು ಹೋದಾಗ ಅ ಪ ಘಾ ತಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೆಲವು ಹೊಸ ವಿಚಾರಗಳು ಕೇಳಿ ಬರುತ್ತಿವೆ.

ಹೌದು, ನೆಟ್ಟಿಗರು ರಾನು ಮಂಡಾಲ್ ನಂತೆ ಭುವನ್ ಕೂಡಾ ಕೆಲವೇ ದಿನಗಳ ಸೆಲೆಬ್ರಿಟಿ ಅಗದಿದ್ದರೆ ಸಾಕು ಎನ್ನುತ್ತಿದ್ದಾರೆ. ಅಲ್ಲದೇ ಅವರನ್ನು ಕೆಲವು ಸೆಲೆಬ್ರಿಟಿಗಳು ಕೂಡಾ ತಮ್ಮ‌ ಜೊತೆ ಹೆಜ್ಜೆ ಹಾಕಲು ಕರೆಯಿಸಿಕೊಂಡು ಕುಣಿಯುವುದನ್ನು ನೋಡಿದ ನೆಟ್ಟಿಗರು ಒಬ್ಬ ಮುಗ್ಧ ವ್ಯಕ್ತಿಯನ್ನು ಸೆಲೆಬ್ರಿಟಿ ಜೀವನದ ಕಡೆ ಸೆಳೆದು ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಸಾಮಾನ್ಯರಾಗಿರುವ ಪ್ರತಿಭಾವಂತರಿಗೆ ಹೀಗೆ ಇದ್ದಕ್ಕಿದ್ದಂತೆ ಜೀವನದಲ್ಲಿ ಅಗತ್ಯಕ್ಕಿಂತ ಹೆಚ್ಚು ಜನಪ್ರಿಯತೆ ಅವರ ಮನಸ್ಸನ್ನು ಹಾಳು ಮಾಡುತ್ತಿದೆ ಎಂದಿದ್ದಾರೆ.

ಒಟ್ಟಾರೆ ಭುವನ್ ಅವರ ಬಗ್ಗೆ ಸುದ್ದಿಗಳಾದಾಗ ಅನೇಕರು ಇದನ್ನು ರಾನು ಮಂಡಾಲ್ ಗೆ ಹೋಲಿಕೆ ಮಾಡುತ್ತಿರುವುದು ಸಹಜವಾಗಿದೆ. ಅಲ್ಲದೇ ಬಹಳಷ್ಟು ಜನರು ಭುವನ್ ಅವರ ಪ್ರತಿಭೆ ರಾನು ಮಂಡಾಲ್ ನಂತೆ ಆಗದಿರಲಿ ಎಂದು ಸಹಾ ಹಾರೈಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಯಾವಾಗ, ಯಾರನ್ನು ಸ್ಟಾರ್ ಮಾಡಿ ಬಿಡುತ್ತವೋ ನಿಜಕ್ಕೂ ಯಾರಿಂದಲೂ ಸಹಾ ಊಹೆ ಮಾಡುವುದು ಸಾಧ್ಯವಿಲ್ಲ.

Leave a Comment