ಅಸಾನಿ ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಅಲೆಗಳ ಅಬ್ಬರ ಎದ್ದಿದೆ. ಮಳೆಯ ಮುನ್ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಇಂತಹ ವಾತಾವರಣದಲ್ಲಿ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥದ ಮಾದರಿಯೊಂದು ತೇಲಿ ಬಂದಿದೆ. ಇದನ್ನು ನೋಡುವುದಕ್ಕಾಗಿ ಜನರು ಕರಾವಳಿ ಕಡೆಗೆ ಧಾವಿಸಿ ಬರುತ್ತಿದ್ದಾರೆ. ಹೌದು, ಮಂಗಳವಾರ ಸಂಜೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿಯಲ್ಲಿ ಕರಾವಳಿಯಲ್ಲಿ ಇಂತಹುದೊಂದು ಘಟನೆ ನಡೆದಿದೆ.
ಇಲ್ಲಿನ ಕರಾವಳಿಯಲ್ಲಿ ನಿನ್ನೆ ಸಂಜೆ ಚಿನ್ನದ ಬಣ್ಣದ ರಥದ ಮಾದರಿಯೊಂದು ಸಾಗರದ ಅಲೆಗಳೊಂದಿಗೆ ತೇಲಿ ಬಂದಿದೆ. ಈ ರಥವು ಮಲೆಷ್ಯಾ, ಥೈಲ್ಯಾಂಡ್ ಅಥವಾ ಮ್ಯಾನ್ಮಾರ್ ಗಳಿಂದ ತೇಲಿ ಬಂದಿರಬಹುದು ಎನ್ನಲಾಗಿದೆ. ಹೀಗೆ ಸಮುದ್ರದಲ್ಲಿ ತೇಲಿ ಬಂದ ಈ ರಥದ ಮಾದರಿಯನ್ನು ಗ್ರಾಮಸ್ಥರು ಹಗ್ಗಗಳನ್ನು ಕಟ್ಟಿ ಎಳೆದುಕೊಂಡು, ದಡಕ್ಕೆ ತಂದಿದ್ದಾರೆ. ಇನ್ನು ಈ ರಥವು ಆಗ್ನೇಯ ಏಷ್ಯಾ ದೇಶಗಳ ಮಠದ ಮಾದರಿಯನ್ನು ಹೋಲುತ್ತಿರುವುದು ವಿಶೇಷವಾಗಿದ್ದು, ಚಂಡ ಮಾರುತದ ಪ್ರಭಾವದಿಂದ ಇದು ತೇಲಿ ಬಂದಿದೆ ಎನ್ನಲಾಗಿದೆ.
ಸ್ಥಳೀಯ ನಾವಿಕರು ಹೇಳುವ ಪ್ರಕಾರ, ಚಂಡ ಮಾರುತದ ಪ್ರಭಾವದಿಂದ ಉಂಟಾದ ಅಲೆಗಳ ಅಬ್ಬರದ ಕಾರಣದಿಂದ ಈ ರಥವು ಕೊಚ್ಚಿಕೊಂಡು ಬಂದಿರಬಹುದು ಎನ್ನಲಾಗಿದೆ. ಈ ಚಿನ್ನದ ರಥದ ಮಾದರಿಯು ತೇಲಿ ಬಂದಿರುವ ವಿಚಾರ ತಿಳಿದ ಕೂಡಲೇ ಅಕ್ಕ ಪಕ್ಕದ ಗ್ರಾಮಗಳ ಜನರು ದೊಡ್ಡ ಸಂಖ್ಯೆಯಲ್ಲಿ ಕರಾವಳಿ ತೀರಕ್ಕೆ ಆಗಮಿಸುತ್ತಿದ್ದು, ಎಲ್ಲರೂ ಈ ಚಿನ್ನದ ಮಾದರಿಯ ರಥವನ್ನು ನೋಡಲು ಬಹಳ ಕುತೂಹಲದಿಂದ ಕರಾವಳಿ ಕಡೆಗೆ ಬರುತ್ತಿದ್ದಾರೆ.