ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಬಿಡುಗಡೆಯ ನಂತರ ಭರ್ಜರಿ ಸದ್ದು ಮಾಡುತ್ತಿದೆ. ಎಲ್ಲಾ ಕಡೆಯಿಂದಲೂ ಸಿನಿಮಾ ಕುರಿತಾಗಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದುಬರುತ್ತಿದ್ದು, ಗಳಿಕೆಯ ವಿಚಾರದಲ್ಲಿಯೂ ಕಾಂತಾರ ಸಿನಿಮಾ ಯಶಸ್ಸಿನ ನಾಗಲೋಟ ವನ್ನು ಮಾಡುತ್ತಿದೆ. ಬಿಡುಗಡೆಯಾದ ಎಲ್ಲಾ ಕಡೆ ಗಳಲ್ಲೂ ಸಹಾ ಕಾಂತಾರ ಸಿನಿಮಾಕ್ಕೆ ಸಿನಿಮಾ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆಗಳು ದೊರೆಯುತ್ತಿದೆ. ಕೆಜಿಎಫ್ ನಂತರ ಹೊಂಬಾಳೆ ಫಿಲಂಸ್ ಮತ್ತೊಂದು ಹಿಟ್ ಸಿನಿಮಾವನ್ನು ನೀಡಿದಂತಾಗಿದೆ. ಸಿನಿಮಾದ ಕುರಿತಾಗಿ ಪಾಸಿಟಿವ್ ಪ್ರತಿಕ್ರಿಯೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ದಿನ ಕಳೆದಂತೆ ಸಿನಿಮಾದ ಶೋ ಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈ ವೇಳೆ ರಿಷಬ್ ಶೆಟ್ಟಿ ಅವರ ಹಳೆಯ ಅಂದರೆ ಸುಮಾರು ಆರು ವರ್ಷಗಳ ಹಿಂದಿನ ಪೋಸ್ಟ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
2016 ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ರಿಕ್ಕಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿದ್ದರೆ. ಅಲ್ಲದೇ ಈ ಸಿನಿಮಾಕ್ಕೆ ಅಂದು ಥಿಯೇಟರ್ ಗಳ ಕೊರತೆ ಕಾಡಿತ್ತು. ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸನ್ನು ಸಹಾ ಪಡೆಯಲಿಲ್ಲ. ಆ ಸಂದರ್ಭದಲ್ಲಿ ಮಂಗಳೂರಿನಲ್ಲಿ ಥಿಯೇಟರ್ ನಲ್ಲಿ ಒಂದು ಶೋ ಪಡೆಯಲು ರಿಷಬ್ ಶೆಟ್ಟಿ ಅವರು ತಾವು ಪಟ್ಟಂತಹ ಕಷ್ಟದ ಕುರಿತಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟನ್ನು ಹಂಚಿಕೊಂಡಿದ್ದರು. ಈಗ ಅದೇ ಪೋಸ್ಟ್ ಮತ್ತೊಮ್ಮೆ ವೈರಲ್ ಆಗಿದ್ದು, ಅದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಅಂದು ರಿಷಬ್ ಶೆಟ್ಟಿ ಅವರು ತಮ್ಮ ಪೋಸ್ಟ್ ನಲ್ಲಿ, “ಅಂತೂ ಅವರಿವರ ಕೈ ಕಾಲು ಹಿಡಿದು ಮಂಗಳೂರಿನ ಬಿಗ್ ಸಿನೆಮಾಸ್ ನಲ್ಲಿ ನಾಳೆಯಿಂದ ಸಂಜೆ 7:00 ಶೋ ಸಿಕ್ತು. ನೋಡಲು ಇಚ್ಚಿಸುವವರು ನಾಳೆಗೆ ಟಿಕೆಟ್ ಬುಕ್ ಮಾಡಿ ಥ್ಯಾಂಕ್ಯೂ” ಎಂದು ಬರೆದುಕೊಂಡಿದ್ದರು. ಅಂದು ಅವರು ಒಂದು ಶೋ ಗಾಗಿ ಪಟ್ಟ ಕಷ್ಟ ಅವರು ಬರೆದುಕೊಂಡ ಸಾಲುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದವು. ಆದರೆ ಇಂದು ಇತಿಹಾಸ ಬದಲಾಗಿದೆ. ಕಾಲ ಅದೇ ರೀತಿಯಾಗಿ ಉಳಿದಿಲ್ಲ. ರಿಷಬ್ ಶೆಟ್ಟಿ ಅವರ ನಿರ್ದೇಶನದ ನಾಲ್ಕನೇ ಸಿನಿಮಾ ಕಾಂತಾರ ಬಾಕ್ಸಾಫೀಸಿನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ.
ಯಾವ ಮಲ್ಟಿಫ್ಲೆಕ್ಸ್ ನಲ್ಲಿ ರಿಷಬ್ ಶೆಟ್ಟಿಯವರು ಒಂದು ಶೋ ಗಾಗಿ ಹರಸಾಹಸವನ್ನು ಮಾಡಿದ್ದರೋ, ಇಂದು ಅದೇ ಮಲ್ಟಿಪ್ಲೆಕ್ಸ್ ನಲ್ಲಿ ಕಾಂತಾರ ಸಿನಿಮಾದ ಹದಿನೈದಕ್ಕೂ ಹೆಚ್ಚು ಶೋಗಳು ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಈ ಕಾರಣದಿಂದಲೇ ರಿಷಬ್ ಶೆಟ್ಟಿ ಅವರ ಹಳೆಯ ಪೋಸ್ಟ್ ಈಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಈ ಪೋಸ್ಟ್ ನೋಡಿದ ಮಂದಿ ಕಾಮೆಂಟ್ ಗಳನ್ನು ಮಾಡುವ ಮೂಲಕ ರಿಷಬ್ ಶೆಟ್ಟಿ ಅವರ ಶ್ರಮದ ಫಲ ಇಂದು ಕಾಣುತ್ತಿದೆ. ಸ್ಯಾಂಡಲ್ವುಡ್ ಗೆ ದೊರೆತಿರುವ ಅದ್ಭುತ ಪ್ರತಿಭೆ ಅವರು ಎಂದು ಹಾಡಿ ಹೊಗಳಿದ್ದಾರೆ.