ಸಾಮಾನ್ಯವಾಗಿ ಸಿನಿಮಾಗಳ ನಾಯಕ ನಟರಿಗೆ ಅದರಲ್ಲೂ ವಿಶೇಷವಾಗಿ ಸ್ಟಾರ್ ಗಳಾದ ನಾಯಕ ನಟರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಬಳಗವೇ ಇರುತ್ತದೆ. ಈ ವಿಚಾರದಲ್ಲಿ ನಿರ್ದೇಶಕರಿಗೆ ಇಂತಹ ಸ್ಟಾರ್ ಡಂ ಇರುವುದು ತೀರಾ ಅಪರೂಪ. ಇಂತಹುದೊಂದು ಅಪರೂಪವನ್ನು ಕೂಡಾ ವಾಸ್ತವ ಮಾಡಿಕೊಂಡಿರುವ ನಿರ್ದೇಶಕ ಎಂದರೆ ಅದು ಬಾಹುಬಲಿ ಸಿನಿಮಾ ಖ್ಯಾತಿಯ ರಾಜಮೌಳಿ. ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ ನಟಿಸುವುದು ಅನೇಕ ನಟರ ಕನಸಾಗಿದೆ ಎಂದರೆ ಅದು ಸುಳ್ಳಲ್ಲ.
ಇಂತಹ ನಿರ್ದೇಶಕನ ಹೊಸ ಸಿನಿಮಾ ಬರುತ್ತದೆ ಎಂದರೆ ನಿರೀಕ್ಷೆಗಳು ಸಹಾ ನೂರ್ಮಡಿ ಹೆಚ್ಚುತ್ತದೆ. ರಾಜಮೌಳಿ ಸಿನಿಮಾ ಎಂದರೆ ಅದು ಪಕ್ಕಾ ಸೂಪರ್ ಹಿಟ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದಲೇ ಸ್ಟಾರ್ ನಟರು ಸಹಾ ರಾಜಮೌಳಿ ಸಿನಿಮಾದಲ್ಲಿ ನಟಿಸಲು ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಾರೆ. ದಕ್ಷಿಣದ ಸಿನಿಮಾ ರಂಗದಲ್ಲಿ ರಾಜಮೌಳಿ ಎನ್ನುವ ಹೆಸರು ಒಬ್ಬ ಸ್ಟಾರ್ ಡೈರೆಕ್ಟರ್ ಹೆಸರು ಎನ್ನುವಷ್ಟರ ಮಟ್ಟಿಗೆ ಅವರು ಜನಪ್ರಿಯತೆ ಪಡೆದಿದ್ದಾರೆ.
ಈಗ ರಾಜಮೌಳಿ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರಾ?? ಎನ್ನುವ ಅನುಮಾನವೊಂದು ಟಾಲಿವುಡ್ ಅಂಗಳದಲ್ಲಿ ಮೂಡಿದೆ. ಈ ಅನುಮಾನ ಏಕೆ ಬಂತು ಅನ್ನೋದಾದ್ರೆ ಅದಕ್ಕೆ ಖಂಡಿತ ಒಂದು ಕಾರಣ ಇದೆ. ಹೌದು, ರಾಜಮೌಳಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಸುದ್ದಿಯು ರಾಜಮೌಳಿ ಅವರ ಅಭಿಮಾನಿಗಳಿಗೆ ಕುತೂಹಲವನ್ನು ಮೂಡಿಸಿದೆ.
ನಿರ್ದೇಶಕ ರಾಜಮೌಳಿ ಅವರು ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಬಂಗಲೆ ಗ್ಯಾಲಕ್ಸಿ ಗೆ ಭೇಟಿ ನೀಡಿ ನಟನನ್ನು ಭೇಟಿಯಾಗಿದ್ದಾರೆ. ಇನ್ನು ಸಲ್ಮಾನ್ ಭಾಯಿ ಈ ಹಿಂದೆಯೇ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರ ಜೊತೆಗೆ ಕೆಲಸವನ್ನು ಮಾಡಿದ್ದಾರೆ. ಸಲ್ಮಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯಿಜಾನ್ ಗೆ ರಾಜಮೌಳಿ ಅವರ ತಂದೆಯೇ ಕಥೆಯನ್ನು ಬರೆದಿದ್ದರು.
ಆ ಸಿನಿಮಾದ ಸಂದರ್ಭದಲ್ಲಿಯೇ ಈ ಇಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎನ್ನಲಾಗಿತ್ತು. ಆದರೆ ಆಗ ರಾಜಮೌಳಿ ಬಹಳ ಬ್ಯುಸಿಯಿದ್ದುದ್ದರಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ರಾಜಮೌಳಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದು, ಹೊಸ ಕಥೆಯ ಆರಂಭಿಕ ಮಾತುಕತೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಈ ವಿಷಯ ನಿಜವೇ ಆದರೆ ಈ ಇಬ್ಬರ ಕಾಂಬಿನೇಷನ್ ನಲ್ಲಿ ಬರುವ ಸಿನಿಮಾ ದೊಡ್ಡ ಗೆಲುವು ಸಾಧಿಸಲಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
.