ನಮ್ಮ ದೇಶದಲ್ಲಿ ಶ್ರೀರಾಮ ಚಂದ್ರನ ದೇವಾಲಯಗಳು ದೇಶದ ಅನೇಕ ಸ್ಥಳಗಳಲ್ಲಿ ಇವೆ. ಇಂತಹ ದೇಗುಲಗಳಲ್ಲಿ ಶ್ರೀರಾಮಚಂದ್ರನ ಮೂರ್ತಿಯ ಜೊತೆಗೆ ಸೀತಾ, ಲಕ್ಷ್ಮಣ ಹಾಗೂ ಹನುನಂತನ ಮೂರ್ತಿಗಳನ್ನು ಸಹಾ ನೋಡುತ್ತೇವೆ. ಶ್ರೀರಾಮನು ಹೀಗೆ ನೆಲೆಸಿರುವ ಆಲಯಗಳಲ್ಲಿ ಲಕ್ಷ್ಮಣನ ಮೂರ್ತಿ ಇಲ್ಲದೇ ಇರುವುದನ್ನು ನಾವು ನೋಡಲು ಸಾಧ್ಯವಿಲ್ಲ. ಆದರೆ ನಮ್ಮ ದೇಶದಲ್ಲಿ ಒಂದು ಕಡೆ ಮಾತ್ರ ಒಂದೇ ಒಂದು ದೇಗುಲದಲ್ಲಿ ಇಂತಹುದೊಂದು ಅಚ್ಚರಿಯನ್ನು ನಾವು ನೋಡಬಹುದಾಗಿದ್ದು, ಇದೊಂದು ರೀತಿಯಲ್ಲಿ ವಿಶಿಷ್ಠವಾದ ಮಂದಿರವೇ ಆಗಿದೆ.
ರಾಮನಿಗೆ ಪ್ರತಿ ಹೆಜ್ಜೆಯಲ್ಲೂ ಜೊತೆಯಲ್ಲಿದ್ದವನು ಆತನ ಸಹೋದರ ಲಕ್ಷ್ಮಣ. ಆದ್ದರಿಂದಲೇ ಮಂದಿರಗಳಲ್ಲಿ ರಾಮ ಸೀತೆಯ ಜೊತೆಗೆ ಲಕ್ಷ್ಮಣನ ಪೂಜೆ ಸಹಾ ನಡೆಯುತ್ತದೆ. ಆದರೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಇಂದಲ್ವಾಯಿ ಗ್ರಾಮದಲ್ಲಿ ಶ್ರೀ ರಾಮ ಮಂದಿರವೊಂದಿದ್ದು, ಇಲ್ಲಿ ಶ್ರೀ ಸೀತಾ ರಾಮನ ಜೊತೆಗೆ ಲಕ್ಷ್ಮಣನಿಲ್ಲದೇ ಆರಾಧನೆಯನ್ನು ಮಾಡಲಾಗುತ್ತದೆ ಎಂದರೆ ಸುಳ್ಳಲ್ಲ. ಈ ಮಂದಿರವು ಬೇರೆಲ್ಲಾ ಮಂದಿರಗಳಿಗಿಂತ ವಿಭಿನ್ನವಾದ ಹಾಗೂ ಏಕೈಕ ಮಂದಿರವಾಗಿದೆ. ಈ ಮಂದಿರವು ರೆಡ್ಡಿಗಳ ಆಡಳಿತಾವಧಿಯಲ್ಲಿ ಶ್ರೀಮತಿ ಶೀಲಂ ಜಾನಕಿ ಬಾಯಿ ಅವರು ವಂಶಸ್ಥರು ನಿರ್ಮಾಣ ಮಾಡಿದರು ಎನ್ನಲಾಗಿದೆ.
ಅಲ್ಲದೇ ಕಾಶಿ ಚರಿತ್ರೆ ಎನ್ನುವ ಪುಸ್ತಕದಲ್ಲಿ ಸಹಾ ಈ ದೇಗುಲದ ನಿರ್ಮಾಣದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಐತಿಹಾಸಿನ ಹಿನ್ನೆಲೆಯನ್ನು ನೋಡಿದಾಗ ಈ ಆಲಯದ ಸುತ್ತಲೂ ಸುಮಾರು 30 ಜನ ಬ್ರಾಹ್ಮಣರ ಅಗ್ರಹಾರ ಇತ್ತೆಂದು ತಿಳಿದು ಬರುತ್ತದೆ. ಈ ದೇವಾಲಯದಲ್ಲಿ ಸ್ಥಾಪಿತಿವಾಗಿರುವ ಮೂಲ ವಿಗ್ರಹವು ಏಳು ಅಡಿ ಎತ್ತರವಾಗಿದೆ. ಶ್ರೀರಾಮನ ಈ ಏಕ ಶಿಲಾ ವಿಗ್ರಹ ಭಕ್ತರ ಭಕ್ತಿಯನ್ನು ಪಡೆದುಕೊಳ್ಳುತ್ತಿದೆ. ಇಲ್ಲಿ ಶ್ರೀರಾಮ, ಸೀತೆ ಹಾಗೂ ಹನುಮನು ನೆಲೆಸಿದ್ದು, ಲಕ್ಷ್ಮಣ ಇಲ್ಲದ ಮಂದಿರವಾಗಿಯೇ ಜನಪ್ರಿಯತೆ ಪಡೆದುಕೊಂಡಿದೆ.
ಸಾವಿರಾರು ರಾಮ ಮಂದಿರಗಳು ಇರುವ ನಮ್ಮ ದೇಶದಲ್ಲಿ ಲಕ್ಷ್ಮಣನು ಇಲ್ಲದ ಏಕೈಕ ರಾಮ ಮಂದಿರ ಇದು ಎಂದು ಹಿಂದೂ ಪ್ರಮುಖ ವ್ಯಕ್ತಿಗಳು ಹೇಳಿದ್ದಾರೆ. ಈ ಮಂದಿರಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ಆದರೆ ಈ ಮಂದಿರಲ್ಲಿ ಲಕ್ಷ್ಮಣನ ಮೂರ್ತಿ ಏಕೆ ಇಲ್ಲ ಎನ್ನುವುದಕ್ಕೆ ಮಾತ್ರ ಸ್ಥಳೀಯರು ಅನೇಕ ಕಥೆಗಳನ್ನು ಹೇಳುತ್ತಾರೆ. ಒಟ್ಟಾರೆ ಲಕ್ಷ್ಮಣನಿಲ್ಲದೇ ಸೀತಾ ರಾಮನು ನೆಲೆಸಿರುವ ಈ ವಿಶೇಷ ಮಂದಿರಕ್ಕೆ ತನ್ನದೇ ಆದ ವಿಶೇಷತೆ ಖಂಡಿತ ಇದ್ದು ಭಕ್ತರು ಈ ಮಂದಿರಕ್ಕೆ ಬಂದು ರಾಮ, ಸೀತೆ ಮತ್ತು ಹನುಮನ ದರ್ಶನ ಮಾಡುವರು.