ಸೋಶಿಯಲ್ ಮೀಡಿಯಾಗಳಿಂದ ರಾತ್ರೋ ರಾತ್ರಿ ಸ್ಟಾರ್ ಗಳಾದವರಲ್ಲಿ ಒಬ್ಬರು ರಾನು ಮೊಂಡಾಲ್. ರಾಣಾ ಘಾಟ್ ರೈಲ್ವೆ ನಿಲ್ದಾಣದಲ್ಲಿ ಜೀವನ ನಿರ್ವಹಣೆಗಾಗಿ ಹಾಡುಗಳನ್ನು ಹಾಡುತ್ತಿದ್ದ ರಾನು ಹಾಡಿದ್ದ ಹಾಡಿನ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಸಿದ್ದ ಸಂಚಲನ ಅಷ್ಟಿಷ್ಟಲ್ಲ. ಇಡೀ ದೇಶದಲ್ಲಿ ರಾನು ಹಾಡು ವೈರಲ್ ಆಗಿ ಹೋಗಿತ್ತು, ಎಲ್ಲೆಲ್ಲೂ ರಾನು ಹಾಡು ಸದ್ದು ಮಾಡಿತು. ರಾಣಾ ಘಾಟ್ ನಿಂದ ರಾನು ಪಯಣ ಮುಂಬೈ ಕಡೆಗೆ ಆಯಿತು. ಆದರೆ ಎಷ್ಟು ಬೇಗ ರಾನು ದೇಶದಲ್ಲಿ ಸುದ್ದಿಯಾದರೋ ಅಷ್ಟೇ ಬೇಗ ಆಕೆ ಹಿನ್ನೆಲೆಗೆ ಹೋಗಿದ್ದು ವಿಪರ್ಯಾಸ, ಇದಕ್ಕೆ ಕೆಲವರು ರಾನು ವರ್ತನೆಯೇ ಕಾರಣ ಎಂದು ಸಹಾ ಹೇಳುತ್ತಾರೆ. ಹೀಗೆ ದಿಢೀರ್ ಆಗಿ ಸಂಚಲನ ಸೃಷ್ಟಿಸಿ ಮರೆಯಾದ ರಾನು ಜೀವನ ಈಗ ಬಯೋಪಿಕ್ ಆಗಿ ತೆರೆಗೆ ಬರಲು ಸಜ್ಜಾಗಿದೆ.
ರಾನು ಮೊಂಡಾಲ್ ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡಿ ಸದ್ದು ಮಾಡಿದ ನಂತರ, ಬಾಲಿವುಡ್ ಸಿನಿಮಾ ನಿರ್ಮಾಪಕ, ನಿರ್ದೇಶಕ, ನಟ , ಸಂಗೀತ ನಿರ್ದೇಶಕ ಹಾಗೂ ಗಾಯಕ ಸಹಾ ಆಗಿರುವ ಹಿಮೇಶ್ ರೇಷಮಿಯಾ ರಾನು ಗೆ ಹಾಡುವ ಅವಕಾಶವನ್ನು ನೀಡಿದರು. ಅವರು ಹಾಡಿದ ತೇರಿ ಮೇರಿ ಕಹಾನಿ ಹಾಡು ಜನಪ್ರಿಯತೆ ಪಡೆಯಿತು. ಆದರೆ ಇದರಿಂದ ರಾನು ಬದುಕು ಬದಲಾಯಿತಾದರೂ ಅದು ಹೆಚ್ಚು ದಿನ ಉಳಿಯಲಿಲ್ಲ. ಅಲ್ಲದೇ ರಾನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಎದುರಿಸಬೇಕಾಯಿತು. ಈಗ ಇವೆಲ್ಲವುಗಳ ನಡುವೆ ರಾನು ಜೀವನದ ಕಥೆಯನ್ನು ಆಧರಿಸಿ ಸಿನಿಮಾ ಬರುತ್ತಿದೆ.
ಸೀಕ್ರೆಟ್ ಗೇಮ್ಸ್ ಖ್ಯಾತಿಯ ನಟಿ ಇಶಿಕಾ ರಾನು ಮೊಂಡಾಲ್ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾನು ರೈಲ್ವೆ ನಿಲ್ದಾಣದಲ್ಲಿ ಕುಳಿತು ಹಾಡು ಹಾಡುವ ಪರಿಸ್ಥಿತಿಗೆ ಕಾರಣವೇನು, ರೈಲ್ವೆ ನಿಲ್ದಾಣದಲ್ಲಿ ಆಕೆ ಆಶ್ರಯ ಪಡೆದಿದ್ದು ಏಕೆ, ಎನ್ನುವುದರ ಜೊತೆಗೆ, ಹಿಮೇಶ್ ರೇಶಮಿಯಾ ಅವರು ಅವಕಾಶ ನೀಡಿದ ವಿಚಾರಗಳನ್ನು ಸಹಾ ಕಥೆಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ. ಈ ಸಿನಿಮಾಕ್ಕೆ ‘ಏಕ್ ಪ್ಯಾರ್ ಕಾ ನಗ್ಮಾ ಹೇ’ ಎನ್ನುವ ಹೆಸರನ್ನು ಇಡಲಾಗಿದೆ. ನಿರ್ದೇಶಕ ಹೃಷಿಕೇಶ್ ಮೊಂಡಲ್ ಅವರು ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
ತೆರೆಗೆ ಬರಲು ಸಜ್ಜಾಗಿರುವ ರಾನು ಜೀವನ ಚರಿತ್ರೆಯನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈ ಹಿಂದೆ ಸಾಕಷ್ಟು ಟ್ರೋಲ್ ಗಳಿಂದಲೇ ಹೆಚ್ಚು ಸದ್ದು ಮಾಡಿದ ರಾನು ಈಗ ತೆರೆಯ ಮೇಲೆ ಕಥೆಯಾಗಿ ಮೂಡಿ ಬಂದರೆ ಹೇಗಿರುತ್ತದೆ ಎನ್ನುವ ಕುತೂಹಲ ಖಂಡಿತ ಇದ್ದರೂ ಸಹಾ, ಸಿನಿಮಾ ಬಿಡುಗಡೆಯ ನಂತರವಷ್ಟೇ ಪ್ರೇಕ್ಷಕರ ಪ್ರತಿಕ್ರಿಯೆ ಏನು ಎನ್ನುವುದನ್ನು ತಿಳಿಯಬಹುದಾಗಿದೆ. ಒಟ್ಟಾರೆ ಈ ಪ್ರಯತ್ನವಂತೂ ನಡೆದಿದೆ, ಈ ಪ್ರಯತ್ನದ ಫಲ ಏನಾಗಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.