ಕರ್ನಾಟಕ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ಚರ್ಚೆಗಳಿಗೆ ಕಾರಣ ಆಗಿರುವ ವಿಷಯ ಕಾಲೇಜುಗಳಲ್ಲಿ ಹಿಜಬ್ ಧರಿಸಿ ಬರುವುದು. ಈ ವಿಷಯ ಒಂದು ಸಂ ಘ ರ್ಷದ ಮಟ್ಟಕ್ಕೆ ತಲುಪಿ ಕೇಸರಿ ಮತ್ತು ಹಿಜಬ್ ಧರಿಸಿ ಬಂದ ವಿದ್ಯಾರ್ಥಿಗಳಿಂದ ಉಂಟಾದ ಒಂದು ಅ ಸಮಾಧಾನಕರ ಸನ್ನಿವೇಶ ಹಾಗೂ ಪರಿಸ್ಥಿತಿಯಿಂದ ಶಾಲಾ-ಕಾಲೇಜುಗಳಿಗೆ ಈಗಾಗಲೆ ರಜೆಯನ್ನು ನೀಡಲಾಗಿದೆ. ಹಿಜಬ್ ವಿಷಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಅಲ್ಲದೇ ಈ ವಿಚಾರವಾಗಿ ಕೋರ್ಟ್ ನಲ್ಲಿ ಕೂಡಾ ವಿಚಾರಣೆ ನಡೆಯುತ್ತಿದೆ.
ಹೈಕೋರ್ಟ್ ತೀರ್ಮಾನ ಏನಾಗಲಿದೆ ಎನ್ನುವುದರ ಕಡೆಗೆ ಎಲ್ಲರ ಗಮನ ಇದೆ. ಈ ನಡುವೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಹೋಗಲು ಅನುಮತಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಅವರ ತ್ರಿಸದಸ್ಯ ಪೀಠದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದು, ಕಾಲೇಜುಗಳಿಗೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರಗಳನ್ನು ಧರಿಸಿ ಹೋಗುವಂತಿಲ್ಲ ಎಂದು ಆದೇಶ ನೀಡಿದೆ.
ಮುಂದಿನ ಆದೇಶ ಬರುವವರೆಗೆ ಯಾರು ಕೂಡಾ ಹಿಜಬ್ ಆಗಲೀ ಅಥವಾ ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗುವಂತಿಲ್ಲ. ಕಾಲೇಜುಗಳು ನಡೆಯಲೇ ಬೇಕಾಗಿದೆ. ಆದ್ದರಿಂದಲೇ ಮಧ್ಯಂತರ ಆದೇಶವನ್ನು ಹೊರಡಿಸಲಾಗಿದೆ ಎಂದು ಹೈಕೋರ್ಟ್ ಸ್ಪಷ್ಟನೆಯನ್ನು ನೀಡಿದೆ. ಸಂವಿಧಾನಾತ್ಮಕ ಪ್ರಶ್ನೆಗಳು ಎದ್ದಿರುವ ಕಾರಣ ವಿಚಾರಣೆಯನ್ನು ಬಹಳ ಗಂಭೀರವಾಗಿ ನಡೆಸಲಾಗುವುದು ಎಂದು ಹೇಳಿರುವ ತ್ರಿಸದಸ್ಯ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.