ಕನ್ನಡ ಬಿಗ್ ಬಾಸ್ ಸೀಸನ್ 8 ಗೆದ್ದ ನಂತರ ಮಂಜು ಪಾವಗಡ ಅವರ ಜನಪ್ರಿಯತೆ ಇಡೀ ರಾಜ್ಯಾದ್ಯಂತ ಹರಡಿದೆ. ಅವರ ಈ ಗೆಲುವಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಿಂಬಾಲಕರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಅಸಂಖ್ಯಾತ ಜನರು ಅವರು ಅಭಿಮಾನಿಸುತ್ತಿದ್ದಾರೆ. ಇಂತಹುದೊಂದು ಜನಪ್ರಿಯತೆಯ ಹಿನ್ನೆಲೆಯಲ್ಲಿ ಇದೀಗ ಮಂಜು ಪಾವಗಡ ಒಂದು ಸಾಮಾಜಿಕ ಕಳಕಳಿಯ ಮಾನವೀಯ ಕಾರ್ಯವನ್ನು ಮಾಡುವುದಕ್ಕಾಗಿ ಮುಂದಾಗಿದ್ದಾರೆ. ಬಹಳ ಅಪರೂಪವೆನ್ನಲಾದ ಖಾಯಿಲೆಯಿಂದ ಬಳಲುತ್ತಿರುವ ಮಗುವೊಂದರ ಚಿಕಿತ್ಸೆಗೆ ಆರ್ಥಿಕ ನೆರವಿಗಾಗಿ ಅವರು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಮಂಜು ಪಾವಗಡ ಅವರು ಈ ವಿಚಾರವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಎಲ್ಲಾ ವಿಷಯಗಳನ್ನು ಹಂಚಿಕೊಂಡು ಜನರ ನೆರವನ್ನು ಕೋರಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನವೀನ್ ಮತ್ತು ಜ್ಯೋತಿ ಎನ್ನುವ ದಂಪತಿಯ ಮಗುವಿಗೆ ಅಪರೂಪದ ಖಾಯಿಲೆಯೊಂದು ಬಂದಿದೆ. ಆದರೆ ಅದನ್ನು ಗುಣಪಡಿಸಲು ನಮ್ಮ ದೇಶದಲ್ಲಿ ಲಸಿಕೆ ಲಭ್ಯವಿಲ್ಲ.
ಮಗುವಿನ ಚಿಕಿತ್ಸೆಗಾಗಿ ಅಗತ್ಯವಿರುವ ಲಸಿಕೆಯನ್ನು ವಿದೇಶದಿಂದ ತರಿಸಬೇಕಾಗಿದೆ. ಆದರೆ ಇಂಜೆಕ್ಷನ್ ಬೆಲೆ 16 ಕೋಟಿ ರೂ.ಗಳಾಗಿದೆ. ಈಗಾಗಲೇ ಅದಕ್ಕಾಗಿ ಒಟ್ಟು ಎಂಟು ಕೋಟಿ ಹಣ ಸಂಗ್ರಹವಾಗಿದೆ. ಅದಕ್ಕಾಗಿ ಧನ್ಯವಾದ ತಿಳಿಸಿರುವ ಮಂಜು ಅವರು ಇನ್ನೂ ಎಂಟು ಕೋಟಿ ಅಗತ್ಯವಿದೆ ಎನ್ನುವ ಮಾಹಿತಿಗಳನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ.
ಇನ್ನು ಮೂರು ತಿಂಗಳ ಒಳಗೆ ಉಳಿದ ಎಂಟು ಕೋಟಿ ರೂಪಾಯಿಗಳ ಹಣವನ್ನು ಸಂಗ್ರಹಿಸಬೇಕಾಗಿದೆ. ಆದಷ್ಟು ಬೇಗ ನಿಮ್ಮ ಕೈಲಾದ ಸಹಾಯವನ್ನು ಮಾಡಿ, ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ಮಗುವನ್ನು ಉಳಿಸಿಕೊಳ್ಳೋಣ. ನಮ್ಮ ಕೈಲಾದ ಸಹಾಯವನ್ನು ಮಾಡೋಣ. ಈ ದಂಪತಿ ತುಂಬಾ ಕಷ್ಟದಲ್ಲಿ ಇದ್ದಾರೆ. ಮಗುವಿನ ಪರಿಸ್ಥಿತಿ ನೋಡಲಾಗುತ್ತಿಲ್ಲ. ಎಲ್ಲರೂ ಪ್ರಾರ್ಥನೆ ಮಾಡಿ, ಮಗುವನ್ನು ಉಳಿಸಿ ಎಂದಿದ್ದಾರೆ.
ಅಲ್ಲದೇ ಆ ಮಗುವಿನ ಮುಖದಲ್ಲಿ ನಗು ತರಿಸಿ, 8 ಲಕ್ಷ ಜನರು ತಲಾ 100 ರೂ. ನೀಡಿದರೆ 8 ಕೋಟಿ ಆಗುತ್ತದೆ’ ಎಂದು ಮಂಜು ಅವರು ಮನವಿಯನ್ನು ಮಾಡಿದ್ದಾರೆ. ಮಂಜು ಅವರು ಶೇರ್ ಮಾಡಿರುವ ಈ ವಿಡಿಯೋ ವೈರಲ್ ಆಗುತ್ತಾ ಸಾಗಿದೆ. ಬಹಳಷ್ಟು ಜನರು ಕಾಮೆಂಟ್ ಮಾಡಿ ಮಂಜು ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಅಲ್ಲದೇ ಅಲ್ಲಿನ ನೀಡಿದ ವಿವರಗಳಿಗೆ ಅನೇಕರು ಸ್ಪಂದಿಸುತ್ತಿದ್ದಾರೆ.