ಮಗನಿಗಾಗಿ ಸ್ಕ್ರಾಪ್ ಬಳಸಿ ಜೀಪ್ ಸಿದ್ಧ ಮಾಡಿದ ಅಪ್ಪನಿಗೆ ಆನಂದ್ ಮಹೀಂದ್ರಾ ಕೊಟ್ರು ದೊಡ್ಡ ಆಫರ್

0 4

ಮಹೀಂದ್ರ ಕಂಪನಿಯ ಮುಖ್ಯಸ್ಥರಾಗಿರುವಂತಹ ಆನಂದ್ ಮಹೀಂದ್ರ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಆಗಾಗ ವಿಶೇಷ ವೀಡಿಯೋ, ಫೋಟೋಗಳನ್ನು ಶೇರ್ ಮಾಡುವ ಅವರು, ಹಲವು ಬಾರಿ ಮಾಡುವ ಟ್ವೀಟ್ ಗಳು ಹಾಗೂ ಆ ಮೂಲಕ ನೀಡುವ ನೆರವು ಬಹಳ ಜನಮೆಚ್ಚುಗೆಯನ್ನು ಪಡೆಯುವುದು ಮಾತ್ರವೇ ಅಲ್ಲದೇ ಮಾಧ್ಯಮಗಳ ಸುದ್ದಿಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಈಗ ಮತ್ತೊಮ್ಮೆ ಅಂತಹದ್ದೇ ಒಂದು ನೆರವನ್ನು ನೀಡುವ ವಿಚಾರವಾಗಿ ಆನಂದ್ ಮಹಿಂದ್ರಾ ಅವರು ಸುದ್ದಿಯಾಗಿದ್ದಾರೆ ಹಾಗೂ ಜನರಿಂದ ಅಪಾರವಾದ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಅಸಲಿಗೆ ವಿಷಯ ಏನು ಎನ್ನುವುದಾದರೆ, ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸ್ಕ್ರಾಪ್ ಮೆಟಲ್ ಬಳಸಿ ಒಂದು ಜೀಪ್ ಅನ್ನು ಸಿದ್ಧಪಡಿಸಿದ್ದಾರೆ. ಈ ವ್ಯಕ್ತಿಯ ಹೆಸರು ದತ್ತಾತ್ರೇಯ ಲೋಹಾರ್ ಎನ್ನಲಾಗಿದ್ದು, ಅವರು ತಮ್ಮ ಮಗನ ಕನಸನ್ನು ನನಸು ಮಾಡಲು ಹೀಗೆ ವ್ಯರ್ಥ ವಸ್ತುಗಳನ್ನು ಬಳಸಿಕೊಂಡು, ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಒಂದು ಸುಂದರವಾದ ಜೀಪನ್ನು ಸಿದ್ಧಪಡಿಸಿದ್ದಾರೆ. ಆ ಜೀಪಿನ ವಿಡಿಯೋ ಆನಂದ್ ಮಹೀಂದ್ರ ಅವರು ಕಣ್ಣಿಗೂ ಬಿದ್ದಿದ್ದು, ಅವರು ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಸ್ಕ್ರಾಪ್ ಬಳಸಿ ಜೀಪನ್ನು ತಯಾರು ಮಾಡಿದ ವ್ಯಕ್ತಿಗೆ ತಮ್ಮ ಕಡೆಯಿಂದ ಮಹೀಂದ್ರ ಕಂಪನಿಯ ಬೊಲೆರೋವನ್ನು ನೀಡುವುದಾಗಿ ಆಫರ್ ಕೊಟ್ಟಿದ್ದಾರೆ. ಅಲ್ಲದೇ ಅವರು ತಮ್ಮ ಟ್ವೀಟ್ ನಲ್ಲಿ, “ಸ್ಪಷ್ಟ ರೂಪದಲ್ಲಿ ಈ ಜೀಪ್ ಯಾವುದೇ ನಿಯಮಗಳಿಗೆ ಅನುಸಾರವಾಗಿ ರೂಪಿತಗೊಂಡಿಲ್ಲ. ಆದ್ದರಿಂದ ಸ್ಥಳೀಯ ಅಧಿಕಾರಿಗಳು ಅವರಿಗೆ ಈ ವಾಹನ ಚಾಲನೆ ಮಾಡಲು ಬಿಡುವುದಿಲ್ಲ, ಆದ್ದರಿಂದ ನಾನು ಅವರಿಗೆ ಜೀಪ್ ನ ಬದಲಿಗೆ ಬೊಲೇರೋ ಆಫರ್ ನೀಡುತ್ತಿದ್ದೇನೆ” ಎಂದಿದ್ದಾರೆ.

ಅವರು ಸಿದ್ಧಪಡಿಸಿರುವ ಈ ಜೀಪನ್ನು ಮಹಿಂದ್ರ ರಿಸರ್ಚ್ ವ್ಯಾಲಿಯಲ್ಲಿ ಬೇರಯವರಿಗೆ ಸ್ಪೂರ್ತಿ ನೀಡುವುದಕ್ಕಾಗಿ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಜೀಪನ್ನು ವಿನ್ಯಾಸಗೊಳಿಸಿದ ಆ ವ್ಯಕ್ತಿಯ ಶ್ರಮಕ್ಕೆ ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ ಹಾಗೂ ಅವರ ಶ್ರಮಕ್ಕೆ ತಕ್ಕ ಉಡುಗೊರೆಯನ್ನು ಸಹ ನೀಡುವ ಒಂದು ಉತ್ತಮವಾದ ಅವಕಾಶವನ್ನು ನೀಡಿದ್ದು, ಆನಂದ್ ಮಹಿಂದ್ರಾ ಅವರ ಆಫರ್ ಅನ್ನು ನೋಡಿ ನೆಟ್ಟಿಗರ ಕಡೆಯಿಂದ ಮೆಚ್ಚುಗೆಗಳು ಹರಿದುಬರುತ್ತಿವೆ.

Leave A Reply

Your email address will not be published.