ಕನ್ನಡ ಕಿರುತೆರೆಯ ಬಹು ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಯಲ್ಲಿ ನಾಯಕ ಆರ್ಯವರ್ಧನ್ ಪಾತ್ರವನ್ನು ನಿರ್ವಹಿಸುತ್ತಾ, ದೊಡ್ಡ ಮಟ್ಟದ ಹೆಸರನ್ನು ಪಡೆದಿದ್ದ ನಟ ಅನಿರುದ್ಧ್ ಅವರು ಈ ಸೀರಿಯಲ್ ಹೊರಗೆ ಬಂದಿರುವುದು ಖಚಿತವಾಗಿದೆ. ಅದು ಮಾತ್ರವೇ ಅಲ್ಲದೇ ಕಿರುತೆರೆ ನಿರ್ಮಾಪಕರ ಸಂಘ ನಟನ ವಿಚಾರದಲ್ಲಿ ಬಹಳ ಗಂಭೀರವಾಗಿ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನುವ ವಿಚಾರ ಈಗ ಸಾಕಷ್ಟು ಸುದ್ದಿಯಾಗಿದೆ. ನಿನ್ನೆಯಿಂದ ಮಾದ್ಯಮಗಳಲ್ಲಿ ಈ ಸುದ್ದಿ ಹರಿದಾಡಿದ್ದು, ಇಂದು ಇದು ಖಚಿತ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ. ನಟನಿಗೂ ಮತ್ತು ಸೀರಿಯಲ್ ತಂತ್ರಜ್ಞರ ತಂಡದ ನಡುವೆ ಅಸಮಾಧಾನ ಉಂಟಾಗಿದೆ ಎಂದು ಸುದ್ದಿಯಾಗಿತ್ತು.
ಇದೀಗ ಮಾದ್ಯಮಗಳ ವರದಿಗಳ ಪ್ರಕಾರ ಮತ್ತೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅವರನ್ನು ತೆಗೆದುಕೊಳ್ಳಬಾರದು ಹಾಗೂ ಬೇರೆ ಯಾವುದೇ ಧಾರಾವಾಹಿ ಮತ್ತು ರಿಯಾಲಿಟಿ ಶೋ ಗಳಲ್ಲಿ ಸಹಾ ಅವರನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಕಿರುತೆರೆಯ ನಿರ್ಮಾಪಕರ ಸಂಘವು ನಿರ್ಧಾರವನ್ನು ಮಾಡಿದೆ. ಜೊತೆ ಜೊತೆಯಲಿ ಸೀರಿಯಲ್ ನ ನಿರ್ಮಾಪಕ ಆರೂರು ಜಗದೀಶ್ ಅವರು ನಿರ್ಮಾಪಕರ ಸಂಘಕ್ಕೆ ನೀಡಿದ ದೂರಿನ ಮೇರೆಗೆ ಇಂತಹುದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವಾಗಿ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ಭಾಸ್ಕರ್ ಅವರು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ.
ಅವರು ಮಾದ್ಯಮವೊಂದರ ಜೊತೆಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಅನಿರುದ್ಧ್ ಅವರ ಮೇಲೆ ನಿರ್ಮಾಪಕರು ನೀಡಿದ ದೂರನ್ನು ಪರಿಶೀಲಿಸಿ ,ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದೇವೆ. ಅವರನ್ನು ಬ್ಯಾನ್ ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಮುಂದೆ ಅವರನ್ನು ಯಾರೂ ಧಾರಾವಾಹಿಗಾಗಲೀ, ರಿಯಾಲಿಟಿ ಶೋ ಗಾಗಲೀ ಆಯ್ಕೆ ಮಾಡಿಕೊಳ್ಳಬಾರದು ಎನ್ನುವ ಮಾತನ್ನು ಹೇಳಿದ್ದಾರೆ. ಇದೇ ವೇಳೆ ಅವರು ಕೇವಲ ಅನಿರುದ್ಧ್ ಅವರು ಮಾತ್ರವೇ ಅಲ್ಲ, ಬಹಳಷ್ಟು ಜನ ಕಲಾವಿದರು ನಿರ್ಮಾಪಕರಿಗೆ ತೊಂದರೆಯನ್ನು ಕೊಡುತ್ತಲೇ ಇದ್ದಾರೆ.
ಅವರನ್ನು ಸಹಾ ಸರಿದಾರಿಗೆ ತರಲು ಸೂಕ್ತವಾದ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ನಿರ್ಮಾಪಕರಿಗೆ ತೊಂದರೆಯಾದರೆ ಅದರಿಂದ ಅನೇಕರಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅನಿರುದ್ಧ್ ಅವರ ಘಟನೆಯು ಇತರರಿಗೆ ಪಾಠವಾಗಬೇಕು ಎಂದು ಹೇಳಿದ್ದಾರೆ. ನಿನ್ನೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಅನಿರುದ್ಧ್ ಅವರ ವಿಚಾರ ಚರ್ಚೆಯಾಗಿದ್ದು, ಈ ವಿಚಾರವಾಗಿ ನೆಟ್ಟಿಗರಿಂದ ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ನಟ ಅನಿರುದ್ಧ್ ಅವರು ಈ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.