ಪುಷ್ಪ ಸಿನಿಮಾ ದೊಡ್ಡ ಯಶಸ್ಸು ಪಡೆದ ನಂತರ ನಟಿ ರಶ್ಮಿಕಾ ಮಂದಣ್ಣ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಪುಷ್ಪ ಸಿನಿಮಾ ಹಿಂದಿಯಲ್ಲಿ ಸಹಾ ಬಿಡುಗಡೆ ಆಗಿ ಯಶಸ್ಸನ್ನು ಪಡೆದ ಹಿನ್ನೆಲೆಯಲ್ಲಿ ರಶ್ಮಿಕಾ ಬಾಲಿವುಡ್ ಮಂದಿಯ ಗಮನವನ್ನು ಮೊದಲಿಗಿಂತಲೂ ಹೆಚ್ಚಾಗಿಯೇ ಸೆಳೆದಿದ್ದಾರೆ. ಈಗಾಗಲೇ ರಶ್ಮಿಕಾ ಹಿಂದಿಯ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವು ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಅದಕ್ಕಿಂತಲೂ ಮೊದಲೇ ಪುಷ್ಪ ಸಾಧಿಸಿದ ವಿಜಯದಿಂದ ರಶ್ಮಿಕಾಗೆ ಬಾಲಿವುಡ್ ನಲ್ಲಿ ಅವಕಾಶಗಳು ಅರಸಿ ಬರುತ್ತಿವೆ ಎನ್ನುವ ಸುದ್ದಿ ಸದ್ದು ಮಾಡಿದೆ.
ಕಳೆದ ಕೆಲವೇ ದಿನಗಳ ಹಿಂದೆ ಮುಂಬೈ ಏರ್ ಪೋರ್ಟ್ ನಲ್ಲಿ ರಶ್ಮಿಕಾ ಕಾಣಿಸಿಕೊಂಡು, ಅವರು ತೊಟ್ಟಿದ್ದ ಡ್ರೆಸ್ ನಿಂದಾಗಿ ಸಾಕಷ್ಟು ಟೀಕೆಗಳಿಗೆ, ಟ್ರೋಲ್ ಗೆ ಗುರಿಯಾಗಿದ್ದರು, ಈಗ ಅದರ ಬೆನ್ನಲ್ಲೇ ರಶ್ಮಿಕಾ ಮಾಡಿದ ಮತ್ತೊಂದು ಕೆಲಸದಿಂದ ನೆಟ್ಟಿಗರ ನಟಿಯ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದು, ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಬಾಲಿವುಡ್ ನ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಎನ್ನುವುದರಲ್ಲಿ ಅನುಮಾನ ಇಲ್ಲ.
ಧರ್ಮಾ ಪ್ರೊಡಕ್ಷನ್ಸ್ ನಲ್ಲಿ ಅವಕಾಶ ಸಿಕ್ಕರೆ ಸಾಕು ಎನ್ನುತ್ತಾರೆ ಹಲವು ನಟ ನಟಿಯರು. ಇಂತಹ ನಿರ್ಮಾಣ ಸಂಸ್ಥೆಯ ಮಾಲೀಕ ಕರಣ್ ಜೋಹರ್ ಇತ್ತೀಚೆಗೆ ತಮ್ಮ ಮನೆಯಲ್ಲಿ ನಟಿ ರಶ್ಮಿಕಾ ಅವರನ್ನು ಭೇಟಿ ಮಾಡಿದ್ದು, ರಶ್ಮಿಕಾ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಿ ಟೌನ್ ನಲ್ಲಿ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಆದರೆ ವಿಷಯ ಅದಲ್ಲ, ಕರಣ್ ಜೋಹರ್ ಭೇಟಿ ಮುಗಿಸಿ ಅಲ್ಲಿಂದ ಹೊರಗೆ ಬಂದ ನಟಿ, ಹೊರಗೆ ಕೆಲವು ಬಡ ಮಕ್ಕಳ ಜೊತೆ ನಡೆದುಕೊಂಡ ವಿಧಾನ ಇದೀಗ ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ.
ಹೌದು, ಕರಣ್ ಜೋಹರ್ ಜೊತೆಗೆ ಭೇಟಿಯನ್ನು ಮುಗಿಸಿ ಹೊರಗೆ ಬಂದಾಗ ಹೊರಗೆ ಕೆಲವು ಮಕ್ಕಳು ರಶ್ಮಿಕಾ ಗಾಗಿಯೇ ಕಾಯುತ್ತಿದ್ದವೇನೋ ಎನ್ನುವ ಹಾಗೆ ನಟಿಯನ್ನು ನೋಡಿದ ಕೂಡಲೇ ಆಕೆಯ ಮುಂದೆ ಬಂದು ಕೈಚಾಚಿ ಊಟ ಬೇಕು ಎಂದು ಬೇಡಿಕೊಂಡಿದ್ದಾರೆ. ಆ ಮಕ್ಕಳು ಬೇಡಿಕೊಂಡರೂ ನಟಿ ಆ ಮಕ್ಕಳ ಕಡೆಗೆ ಗಮನ ಸಹಾ ನೀಡದೇ ಕಾರಿನ ಕಡೆಗೆ ನಡೆದಿದ್ದಾರೆ. ತನ್ನ ಮುಂದೆ ಕೈ ಚಾಚಿದ ಮಕ್ಕಳನ್ನು ಪಕ್ಕಕ್ಕೆ ತಳ್ಳಿ ಕಾರಿನ ಕಡೆ ಹೋಗಿ ಕಾರು ಹತ್ತಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ.
ವೀಡಿಯೋ ನೋಡಿದ ಜನರು, ನ್ಯಾಷನಲ್ ಕ್ರಶ್ ಬಳಿ ಹುಡುಗಿಗೆ ನೀಡಲು ಹತ್ತು ರೂಪಾಯಿ ಇಲ್ಲ, ಬಡವಳು ಎಂದಿದ್ದಾರೆ. ಕೆಲವರು ಈಕೆ ಹಣದಿಂದ ಶ್ರೀಮಂತಳೇ ಹೊರತು, ಮನಸ್ಸಿನಿಂದ ಬಡವಳು ಎಂದಿದ್ದಾರೆ. ಬಹಳಷ್ಟು ಜನರು ರಶ್ಮಿಕಾಗೆ ಆ್ಯಟಿಟ್ಯೂಡ್ ಹೆಚ್ಚಾಗಿದೆ ಎಂದಿದ್ದಾರೆ. ಇವರಿಗೆ ಹೃದಯ ಅನ್ನೋದೆ ಇಲ್ವಾ, ಈ ನಟಿಯನ್ನು ನಾನು ಇಷ್ಟಪಡುವುದಿಲ್ಲ, ಇದು ನ್ಯಾಷನಲ್ ಕ್ರಶ್ ನ ಅಸಲಿ ರೂಪ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿ ಸಿಟ್ಟು ಹೊರಹಾಕಿದ್ದಾರೆ.