ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟನ ಮೇಲೆ ಹಲ್ಲೆ ಪ್ರಯತ್ನ: ವೈರಲ್ ಆಯ್ತು ವೀಡಿಯೋ
ತಮಿಳು ನಟ ವಿಜಯ್ ಸೇತುಪತಿ ದೊಡ್ಡ ಹೆಸರನ್ನು ಮಾಡಿರುವಂತಹ ಜನಪ್ರಿಯ ನಟ. ತಮಿಳು ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳಲ್ಲಿಯೂ ಸಹಾ ಉತ್ತಮ ಪಾತ್ರಗಳು ದೊರೆತರೆ ಅದನ್ನು ಒಪ್ಪಿಕೊಂಡು ಮಾಡುವ ಇವರು ಕೇವಲ ನಾಯಕನ ಪಾತ್ರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ವಿಜಯ್ ಸೇತುಪತಿ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ವಿಜಯ್ ಸೇತುಪತಿ ಅವರು ಬೆಂಗಳೂರಿಗೆ ಆಗಮಿಸುವ ವೇಳೆ ವಿಮಾನ ನಿಲ್ದಾಣದಲ್ಲಿ ಅವರ ಮೇಲೆ ಹಲ್ಲೆ ನಡೆದಿರುವ ಘಟನೆಯೊಂದು ನಡೆದಿದ್ದು, ಈ ವಿಷಯ ತಡವಾಗಿ ವರದಿಯಾಗಿದೆ.
ಮಂಗಳವಾರ ರಾತ್ರಿ ನಟ ವಿಜಯ್ ಸೇತುಪತಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ವಿಮಾನದಲ್ಲಿ ಬರುವ ವೇಳೆ ಸಹ ಪ್ರಯಾಣಿಕನ ಜೊತೆ ಕಿರಿಕ್ ಆಗಿತ್ತು ಎನ್ನಲಾಗಿದೆ. ಸಹ ಪ್ರಯಾಣಿಕ ಕುಡಿದಿದ್ದ ಎನ್ನಲಾಗಿದೆ. ವಿಮಾನ ನಿಲ್ದಾಣ ತಲುಪಿದ ನಂತರ, ವಿಮಾನ ಇಳಿದು ಬರುತ್ತಿದ್ದ ವಿಜಯ್ ಸೇತುಪತಿ ಮತ್ತು ಅವರ ಪಿಎ ಮೇಲೆ ಹಿಂದಿನಿಂದ ಬಂದು ಆತ ಹಲ್ಲೆಯನ್ನು ನಡೆಸಿದ್ದಾನೆ. ಈ ಘಟನೆಯ ನಂತರ ನಟ ಹಾಗೂ ಪ್ರಯಾಣಿಕರು ಏರ್ಪೋರ್ಟ್ ಪೋಲಿಸ್ ಠಾಣೆಗೆ ತೆರಳಿದ್ದರು. ಪೋಲಿಸರು ಕೇಸ್ ದಾಖಲು ಮಾಡಿಕೊಳ್ಳದೇ ಅಪಾಲಜಿ ಬರೆಸಿಕೊಂಡು, ರಾಜಿ ಮಾಡಿ ಕಳಿಸಿದ್ದಾರೆ ಎನ್ನಲಾಗಿದೆ.
ತಮಿಳಿನಲ್ಲಿ ಆರಂಭವಾಗಿರುವ ಮಾಸ್ಟರ್ ಶೆಫ್ ಶೋ ನ ನಿರೂಪಣೆಯನ್ನು ವಿಜಯ್ ಸೇತುಪತಿ ಮಾಡುತ್ತಿದ್ದು, ಈ ಶೋ ನ ಚಿತ್ರೀಕರಣ ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು ಅದಕ್ಕಾಗಿ ಬಂದಿದ್ದರು ಎನ್ನಲಾಗಿತ್ತು. ಆದರೆ ಅವರು ಪುನೀತ್ ಅವರ ಸಮಾಧಿಗೆ ನಮನವನ್ನು ಸಲ್ಲಿಸಲು ಬಂದಿದ್ದರೆಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಸೇತುಪತಿ ಅವರ ಮೇಲೆ ವಿಮಾನ ನಿಲ್ದಾಣದಲ್ಲಿ ನಡೆದ ಹಲ್ಲೆಯ ವೀಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಗಳು ವ್ಯಕ್ತವಾಗಿದೆ.