ಬಹಳ ದಿನಗಳ ನಂತರ ಸಿನಿಮಾವೊಂದರ ಪ್ರಮುಖ ಪಾತ್ರಕ್ಕಾಗಿ ಬಣ್ಣ ಹಚ್ಚಿದ ಅಪ್ಪಟ ಕನ್ನಡತಿ ಅಪರ್ಣಾ
ಅಪರ್ಣಾ ವಸ್ತಾರೆ ಈ ಹೆಸರು ಕನ್ನಡಿಗರು ಮರೆಯಲಾರದ ಹೆಸರು. ಅಚ್ಚ ಕನ್ನಡ ಭಾಷೆಯನ್ನು ಬಹಳ ಸ್ಪಷ್ಟವಾಗಿ ಮಾತನಾಡುವ ಕನ್ನಡದ ನಿರೂಪಕಿ ಇವರು. ದೂರದರ್ಶನದ ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ಅವರ ಕನ್ನಡ ಭಾಷೆಯ ಬಳಕೆ ಪ್ರತಿಯೊಬ್ಬರನ್ನು ಅವರತ್ತ ನೋಡುವಂತೆ ಮಾಡುತ್ತಿತ್ತು. ಅಪರ್ಣಾ ಅವರ ಟಿವಿ ಶೋ ಗಳ ನಿರೂಪಕಿ ಮಾತ್ರವೇ ಅಲ್ಲದೇ ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಕೂಡಾ ನಟಿಸಿ ಸೈ ಎನಿಸಕೊಂಡವರು. ಕಾಮಿಡಿ ಶೋ ಒಂದರ ಭಾಗ ಕೂಡಾ ಆಗಿದ್ದರು. ಆದರೆ ಅವರ ವಿಶೇಷ ಪ್ರತಿಭೆ ಎಂದರೆ ಅದು ಕನ್ನಡ ಭಾಷೆಯನ್ನು ಅರಳು ಹುರಿದಂತೆ ಸುಸ್ಪಷ್ಟವಾಗಿ ಮಾತನಾಡುವುದು.
ಅಪರ್ಣಾ ಅವರು ಬೆಳ್ಳಿ ತೆರೆ ಹಾಗೂ ಕಿರುತೆರೆ ಎರಡನ್ನೂ ಕೂಡಾ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿಗೆ ಅವರು ನನ್ನರಸಿ ಧಾರಾವಾಹಿಯಲ್ಲಿ ವೈದೇಹಿ ಎನ್ನುವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಅಪರ್ಣಾ ಅವರು ಹೊಸ ಸಿನಿಮಾ ಒಂದರಲ್ಲಿ ಒಂದು ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು ಅಪರ್ಣಾ ಅವರು ಹೊಸ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದು, ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಸಹಾ ಭಾಗವಹಿಸಿದ್ದರು.
ಹಾಗಾದ್ರೆ ಅಪರ್ಣಾ ಅವರು ನಟಿಸಲಿರುವ ಆ ಸಿನಿಮಾ ಯಾವುದು ಎನ್ನುವುದಾದರೆ, ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರು ನಾಯಕನಾಗಿ, ಭಾವನಾ ರಾವ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿರುವ, ಗಂಗಾಧರ್ ಸಾಲಿಮಠ ಅವರ ನಿರ್ದೇಶನದ ಗ್ರೇ ಗೇಮ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚಿಗೆ ಬೆಂಗಳೂರು ನಗರದ ದೇವಾಲಯವೊಂದರಲ್ಲಿ ಶುಭಪ್ರದವಾಗಿ ನೆರವೇರಿದೆ. ಅಪರ್ಣಾ ಅವರು ಈ ವೇಳೆ ಈ ಶುಭ ಕಾರ್ಯಕ್ರಮದ ಭಾಗವಾಗಿದ್ದರು.
ಅಪರ್ಣಾ ಅವರು ಮಜಾಭಾರತ ಕಾಮಿಡಿ ಶೋ ನ ಒಂದು ಪ್ರಮುಖ ಭಾಗವಾಗಿದ್ದರು. ಇತ್ತೀಚಿಗಷ್ಟೇ ಅವರು ನಿರೂಪಣೆ ಮಾಡುತ್ತಿರುವ ಸಿಂಪಲ್ಲಾಗಿ ಒಂದು ಸಿನಿಮಾ ಕಥೆ ಕಾರ್ಯಕ್ರಮ ಕಿರುತೆರೆಯಲ್ಲಿ ಮೂಡಿ ಬರುತ್ತಿದ್ದು, ಅದರಲ್ಲಿ ಅವರು ಕನ್ನಡ ಚಿತ್ರರಂಗದಲ್ಲಿನ ಮರೆಯಲಾರದ, ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿದಿರುವ ಸಿನಿಮಾಗಳ ಕುರಿತಾಗಿ ಬಹಳಷ್ಟು ಆಸಕ್ತಿಕರ ವಿಷಯಗಳನ್ನು ಜನರ ಮುಂದೆ ತಂದಿರಿಸುವ ಪ್ರಯತ್ನ ಮಾಡುತ್ತಿದ್ದು, ಅಪರ್ಣಾ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬರುತ್ತಿದೆ.