ಪತ್ನಿ ಮಾಡಿದ ಆ ಒಂದು ಕೆಲಸಕ್ಕೆ ಬೇಸತ್ತು ಮರ ಏರಿದ ಪತಿ: ತಿಂಗಳೇ ಆದ್ರೂ, ಪೋಲಿಸರೇ ಬಂದ್ರು ಕೆಳಗೆ ಬರಲ್ಲ ಅಂದ
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುವ ಮಾತೊಂದನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಗಂಡ ಹೆಂಡತಿ ಮಧ್ಯೆ,ಅವರ ಸಂಸಾರ ಜೀವನದಲ್ಲಿ ಕೆಲವೊಮ್ಮೆ ಅಸಹನೆ, ಅಸಹಕಾರದಿಂದಾಗಿ ಮನಸ್ತಾಪಗಳು ಮೂಡುತ್ತವೆ, ಮಾತಿಗೆ ಮಾತು ಬೆಳೆದು ಜಗಳ ಸಹಾ ಆಗುತ್ತದೆ. ಆದರೆ ಜೀವನ ಪೂರ್ತಿ ತಾವಿಬ್ಬರು ಜೊತೆಯಾಗಿಯೇ ಬಾಳ ಬಂಡಿಯನ್ನು ನಡೆಸಬೇಕು ಎನ್ನುವುದನ್ನು ಅರಿತ ದಂಪತಿ ತಮ್ಮ ನಡುವಿನ ವಿಬೇಧವನ್ನು ಬಹಳ ಬೇಗ ಮರೆತು ಮತ್ತೆ ಒಂದಾಗಿ ಬಿಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಹೆಂಡತಿಯ ಜೊತೆ ಜಗಳ ಮಾಡಿಕೊಂಡು, ಅನಂತರ ಮಾಡಿದ ಕೆಲಸ ಈಗ ದೊಡ್ಡ ಸುದ್ದಿಯಾಗಿದ್ದು, ಈ ಸುದ್ದಿ ಕೇಳಿ ಜನರು ಅಚ್ಚರಿ ಪಡುವುದರ ಜೊತೆಗೆ ವ್ಯಂಗ್ಯ ಸಹಾ ಮಾಡುತ್ತಿದ್ದಾರೆ.
ಉತ್ತರಪ್ರದೇಶದ ಮವ್ ಜಿಲ್ಲೆಯ ಕೋಪಗಂಜ್ ಎನ್ನುವಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ರಾಮ್ ಪ್ರವೇಶ್ ಅವರು, ಕಳೆದ ಆರು ತಿಂಗಳಿನಿಂದ ಪತ್ನಿಯೊಡನೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಈ ಜಗಳದ ವೇಳೆ ಹೆಂಡತಿಯು ತನ್ನನ್ನು ಥಳಿಸಿದ್ದಾಳೆ ಎಂದು ಹೇಳಿರುವ ರಾಮ್ ಪ್ರವೇಶ್ ಅವರು, ಹೆಂಡತಿಯ ಮೇಲಿನ ಕೋಪ ಮತ್ತು ಅಸಮಾಧಾನದಿಂದ ಕಳೆದ ಒಂದು ತಿಂಗಳಿನಿಂದ ಮನೆಯ ಬದಲಾಗಿ ಮರವೊಂದರ ಮೇಲೆ ವಾಸವಿದ್ದಾರೆ. ಹೌದು, ಈ ವಿಷಯ ಅಕ್ಷರಶಃ ಸತ್ಯ. ರಾಮ್ ಪ್ರವೇಶ್ ಪತ್ನಿಯ ವರ್ತನೆಗೆ ಬೇಸತ್ತು ಮನೆಯ ಹತ್ತಿರವಿದ್ದ ಮರವೇರಿ ವಾಸ ಮಾಡುತ್ತಿದ್ದಾನೆ.
ರಾಮ್ ಪ್ರವೇಶ್ ಗೆ ಆತನ ಕುಟುಂಬದವರು ಆಹಾರವನ್ನು ಬಾಕ್ಸ್ ಗಳಲ್ಲಿ ಇಟ್ಟು, ಕಟ್ಟಿರುವ ಹಗ್ಗದ ಸಹಾಯದಿಂದ ಮರದ ಮೇಲಕ್ಕೆ ಕಳುಹಿಸುತ್ತಾರೆ. ರಾತ್ರಿ ವೇಳೆ ಆತ ಮರದಿಂದ ಕೆಳಗೆ ಇಳಿದು ಬಂದು, ತನ್ನ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಮತ್ತೆ ಮರ ಏರುತ್ತಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತಾಳೆ ಮರ ಏರಿ ಕೂರುವ ಈತನಿಗೆ ನೆರೆ ಹೊರೆಯವರು ತಿಳಿ ಹೇಳಿದರು ಆತ ಕೇಳಲು ಸಿದ್ಧವಾಗಿಲ್ಲ ಎನ್ನಲಾಗಿದೆ. ಇದೇ ವೇಳೆ ತಾಳೆ ಮರದ ಅಕ್ಕ ಪಕ್ಕದಲ್ಲಿ ಮನೆಗಳಿದ್ದು, ರಾಮ್ ಪ್ರವೇಶ್ ಮರದ ಮೇಲೆ ಕುಳಿತು ಅಲ್ಲಿನ ಮನೆಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸುತ್ತಾ ಇರುತ್ತಾನೆ ಎಂದಿದ್ದಾರೆ ಗ್ರಾಮಸ್ಥರು.
ಆತ ಹಾಗೆ ಮರದ ಮೇಲೆ ಕುಳಿತು ತಮ್ಮ ಮನೆಗಳ ಕಡೆಗೆ ನೋಡುವುದರಿಂದ ಅದು ನಮ್ಮ ಖಾಸಗಿತನಕ್ಕೆ ಧಕ್ಕೆಯನ್ನು ಉಂಟು ಮಾಡುತ್ತಿದೆ ಎಂದು ಸುತ್ತ ಮುತ್ತಲ ಮನೆಗಳವರು ಅಸಮಾಧಾನವನ್ನು ಹೊರಹಾಕಿದ್ದಾರೆ. ಸ್ಥಳೀಯ ಮಹಿಳೆಯರು ಪೋಲಿಸರಿಗೆ ದೂರು ನೀಡಿದ್ದು, ಅವರು ಬಂದು ವೀಡಿಯೋ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಪೋಲಿಸರು ಹೇಳಿದರು ಸಹಾ ರಾಮ್ ಪ್ರವೇಶ್ ಅವರ ಮಾತಿಗೂ ಕಿವಿಗೊಟ್ಟಿಲ್ಲ ಎನ್ನಲಾಗಿದ್ದು, ಗ್ರಾಮದ ಜನರು ರಾಮ್ ಪ್ರವೇಶ್ ವರ್ತನೆಗೆ ಅಸಮಾಧಾನ ಗೊಂಡಿದ್ದಾರೆ.