ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗ ಪ್ರತ್ಯಕ್ಷ ದೈವವೆಂದು ಅನಂತ ಭಕ್ತ ಕೋಟಿಯು, ಶ್ರದ್ಧೆ ಭಕ್ತಿಯಿಂದ ಆರಾಧಿಸುವುದುಂಟು. ತಿರುಮಲ ಗಿರಿ ವಾಸನಿಗೆ ಕಾಣಿಕೆ ರೂಪದಲ್ಲಿ ಬರುವ ಸಂಪತ್ತು ಊಹೆಗೂ ಮೀರಿದ್ದು. ಕೋಟಿ ಕೋಟಿಗಳ ಮೌಲ್ಯದ ಕಾಣಿಕೆಗಳು ಶ್ರೀ ವೆಂಕಟೇಶ್ವರ ಸ್ವಾಮಿಯವರಿಗೆ ಭಕ್ತರು ಅನಂತ ಭಕ್ತಿಯಿಂದ ಅರ್ಪಿಸುತ್ತಾರೆ. ಪ್ರಸ್ತುತ ಅಂತಹುದೇ ಒಂದು ಅಪರೂಪವಾದ ಕಾಣಿಕೆಯು ಶ್ರೀ ವೆಂಕಟೇಶ್ವರ ಸ್ವಾಮಿಗೆ ತಲುಪಿದೆ. ವಿಶೇಷ ಏನೆಂದರೆ ಒಬ್ಬ ಅನಾಮಧೇಯ ಭಕ್ತರಿಂದ ಈ ಕಾಣಿಕೆ ವೆಂಕಟೇಶ್ವರ ಸ್ವಾಮಿಗೆ ಸಲ್ಲಿಕೆಯಾಗಿದೆ.
ಶ್ರೀ ವೆಂಕಟೇಶ್ವರ ಸ್ವಾಮಿಗೆ ಸಂದ ಈ ಕಾಣಿಕೆಯ ತೂಕ ಸುಮಾರು 5.3 ಕೆಜಿಗಳಾಗಿದ್ದು, ಅದರ ವಿವರಗಳನ್ನು ತಿಳಿಯೋಣ. ಸ್ವಾಮಿಯವರನ್ನು ದರ್ಶನ ಮಾಡಿದ ಭಕ್ತರೊಬ್ಬರು ಈ ಕಾಣಿಕೆಯನ್ನು ಸಮರ್ಪಿಸಿದ್ದಾರೆ ಎನ್ನಲಾಗಿದ್ದು, ವಜ್ರ, ಮಾಣಿಕ್ಯಗಳಿಂದ ಅಲಂಕರಿಸದ ಬಂಗಾರದ ಹಸ್ತಗಳನ್ನು ಸ್ವಾಮಿಯವರಿಗೆ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಇಂದು ಬೆಳಿಗ್ಗೆ ವಿಐಪಿ ದರ್ಶನದ ವೇಳೆ ಭಕ್ತರೊಬ್ಬರು ಈ ಅಪರೂಪದ ಕಾಣಿಕೆಯೊಂದಿಗೆ ಬಂದಿದ್ದರು ಎನ್ನಲಾಗಿದೆ.
ಬಂಗಾರದ ಕಂಠ ಹಾರ ಮತ್ತು ಹಸ್ತಗಳ ತೂಕ ಸುಮಾರು 5.3 ಕೆಜಿ ತೂಕವಿದ್ದು ಇದರ ಮೌಲ್ಯ ಮೂರು ಕೋಟಿ ರೂಪಾಯಿಗಳು ಎನ್ನಲಾಗಿದೆ. ಸ್ವಾಮಿಯವರಿಗೆ ವಿಶೇಷ ಕಾಣಿಕೆಯನ್ನು ನೀಡಿದ ಭಕ್ತನಿಗೆ ದೇಗುಲದ ಅಧಿಕಾರಿಗಳು ಸಹಾ ಸತ್ಕಾರವನ್ನು ಮಾಡಿದ್ದಾರೆ. ಈ ಆಭರಣಗಳನ್ನು ಟಿಟಿಡಿ ಅಧಿಕಾರಿಗಳು ಹಾಗೂ ಆಲಯದ ಅರ್ಚಕರು ದೇವರ ಪಾದಗಳ ಬಳಿ ಇಟ್ಟು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಆದರೆ ಕಾಣಿಕೆ ನೀಡಿದವರು ತನ್ನ ಹೆಸರನ್ನು ಬಹಿರಂಗ ಪಡಿಸಬಾರದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.