ನಟ ಪುನೀತ್ ರಾಜ್ಕುಮಾರ್ ಅವರು ಎಂತಹ ಅದ್ಬುತ ವ್ಯಕ್ತಿ ಎನ್ನುವುದು ಅವರ ಅಗಲಿಕೆಯ ನಂತರ ಕನ್ನಡ ನಾಡಿಗೆ ಮಾತ್ರವೇ ಅಲ್ಲದೇ ಇಡೀ ದೇಶಕ್ಕೆ ಗೊತ್ತಾಗಿದೆ. ಅಪ್ಪು ಅವರು ಪ್ರಚಾರ ಬಯಸದೇ ಮಾಡಿರುವ ಅನೇಕ ಸೇವೆಗಳು ಅವರ ಅಗಲಿಕೆಯ ನಂತರ ಸುದ್ದಿಯಾದ ನಂತರ ಅವರನ್ನು ಜನರು ದೇವರಂತೆ ನೋಡುತ್ತಿದ್ದಾರೆ. ಪುನೀತ್ ಅವರ ಸಮಾಧಿ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಬಂದು ಸಮಾಧಿಯ ದರ್ಶನವನ್ನು ಪಡೆಯುತ್ತಿದ್ದಾರೆ. ಪುನೀತ್ ಅವರ ಅಗಲಿಕೆಯ ನಂತರ ಬಹಳಷ್ಟು ಜನರು ಸೋಶಿಯಲ್ ಮೀಡಿಯಾಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದರು.
ಇಂದು ತಮಿಳುನಾಡಿನ ವಿಧಾನಸಭೆಯ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನದಂದು ಅಗಲಿದ ಗಣ್ಯರಿಗೆ ಸಂತಾಪವನ್ನು ಸೂಚಿಸುವುದು ಒಂದು ಸಂಪ್ರದಾಯವಾಗಿ ಪಾಲಿಸಿಕೊಂಡು ಬರಲಾಗಿದ್ದು, ಅದರಂತೆ ಇಂದು ತಮಿಳು ನಾಡು ವಿಧಾನಸಭೆಯಲ್ಲಿ ನಟ ಪುನೀತ್ ರಾಜ್ಕುಮಾರ್ ಅವರಿಗೆ ಗೌರವವನ್ನು ಸಲ್ಲಿಸಲಾಯಿತು. ರಾಜ್ಯಪಾಲರ ಭಾಷಣಕ್ಕೆ ಮುನ್ನ ತಮಿಳುನಾಡು ವಿಧಾನ ಸಭೆ ಸದಸ್ಯರು ಸಾಮೂಹಿಕವಾಗಿ ಗೌರವವನ್ನು ಸಲ್ಲಿಸಿದ್ದಾರೆ.
ನೆರೆ ರಾಜ್ಯದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ವಿಧಾನ ಸಭಾ ಅಧಿವೇಶನದಲ್ಲಿ ಹೀಗೊಂದು ಅಧಿಕೃತವಾಗಿ ಗೌರವವನ್ನು ಸಲ್ಲಿಸಿರುವುದು ಖಂಡಿತ ಸಾಮಾನ್ಯ ವಿಷಯವಲ್ಲ. ಪುನೀತ್ ಅವರು ಅಗಲಿದಾಗಲೂ ಸಹಾ ತಮಿಳು ನಾಡಿನ ಸಿಎಂ ಎಂ ಕೆ ಸ್ಟಾಲಿನ್ ಅವರು ಪುನೀತ್ ಅವರ ಭಾವಚಿತ್ರವನ್ನು ಟ್ವೀಟ್ ಮಾಡಿ ಸಂತಾಪವನ್ನು ಸೂಚಿಸಿದ್ದರು. ತಮಿಳು ಚಿತ್ರರಂಗದ ಜೊತೆಗೂ ಪುನೀತ್ ಅವರು ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು.