ಆಕೆ 65 ವರ್ಷದ ವೃದ್ಧೆ. ಈ ಇಳಿ ವಯಸ್ಸಿನಲ್ಲಿಯೂ ಎಂದಿನಂತೆಯೇ ಹೊಲದ ಕಡೆಗೆ ಹೊರಟಿದ್ದರು. ಆಕೆ ತನ್ನ ಹೊಲದ ಕಡೆಗೆ ಹೋಗುವ ದಾರಿಯಲ್ಲಿ ರೈಲ್ವೆ ಟ್ರಾಕ್ ಹಾದು ಹೋಗುತ್ತದೆ. ಗುರುವಾರದ ದಿನ ಆಕೆ ಆ ಮಾರ್ಗವಾಗಿ ಹೊಲದ ಕಡೆಗೆ ಹೋಗುವಾಗ ರೈಲ್ವೆ ಹಳಿಗಳು ಮುರಿದಿರುವುದನ್ನು ನೋಡಿದ್ದಾರೆ. ಈ ವಿಷಯವನ್ನು ಯಾರಿಗಾದರೂ ತಿಳಿಸೋಣ ಎಂದರೆ ಆಕೆಯ ಬಳಿ ಯಾವುದೇ ಫೋನ್ ಕೂಡಾ ಇಲ್ಲ. ಹೋಗಲಿ ಹಿಂತಿರುಗಿ ಹಳ್ಳಿಗೆ ಹೋಗಿ ಊರಿನ ಜನರಿಗೆ ವಿಷಯವನ್ನು ತಿಳಿಸೋಣ ಎಂದರೆ ಈ ನಡುವೆ ರೈಲು ಬಂದರೆ ದೊಡ್ಡ ಅ ನಾ ಹು ತವೇ ನಡೆದು ಹೋಗುವ ಸಂಭವವಿತ್ತು.
ಇಂತಹ ಸಂದಿಗ್ಧತೆಯಲ್ಲಿ ಆ ವಯಸ್ಸಾದ ಮಹಿಳೆಗೆ ಏನು ಮಾಡಬೇಕೆನ್ನುವುದು ಸಹಾ ತಿಳಿಯಲಿಲ್ಲ. ಹೀಗೆ ಆಲೋಚನೆ ಮಾಡುವಾಗಲೇ ವೃದ್ಧೆಯ ಮನಸ್ಸಿನಲ್ಲಿ ಒಂದು ಉಪಾಯ ಹೊಳೆಯಿತು. ಆ ಹಿರಿಯ ವಯಸ್ಸಿನ ಮಹಿಳೆ ತನ್ನ ಮೈಮೇಲೆ ಇದ್ದ ಕೆಂಪು ಬಣ್ಣದ ಸೀರೆಯ ಸಹಾಯದಿಂದಲೇ ರೈಲನ್ನು ನಿಲ್ಲಿಸಿ, ನೂರಾರು ಜನರ ಪ್ರಾಣವನ್ನು ಉಳಿಸಿದ್ದಾರೆ. ವಿಷಯದ ವಿವರಗಳಿಗೆ ಹೋದರೆ ಇಂತಹುದೊಂದು ಘಟನೆಯು ನಡೆದಿರುವುದು ಉತ್ತರ ಪ್ರದೇಶದಲ್ಲಿ ಎನ್ನಲಾಗಿದೆ.
ಉತ್ತರ ಪ್ರದೇಶದ ಎಟಾ ಜಿಲ್ಲೆಯ ಅವಾಗಡ್ ಮಂಡಲದ ಗುಲೇರಿಯಾ ಗ್ರಾಮದ ಓಂ ವತಿ ಹೆಸರಿನ ಮಹಿಳೆಯು ಗುರುವಾರ ಬೆಳಿಗ್ಗೆ ತನ್ನ ಹೊಲಕ್ಕೆ ಹೋಗುವಾಗ ಕುಸ್ಬಾ ರೈಲ್ವೆ ಸ್ಟೇಷನ್ ಸಮೀಪದಲ್ಲಿ ರೈಲು ಹಳಿಯು ಡ್ಯಾಮೇಜ್ ಆಗಿರುವುದನ್ನು ಗಮನಿಸಿದ್ದಾರೆ. ರೈಲು ಬಂದರೆ ಅನಾಹುತ ಸಂಭವಿಸುವುದು ಎಂಬುದನ್ನು ಅರಿತ ಮಹಿಳೆ, ಸಮಯಸ್ಪೂರ್ತಿಯನ್ನು ಮೆರೆದಿದ್ದಾರೆ. ತಡ ಮಾಡದೇ ಅಲ್ಲೇ ಹತ್ತಿರದಲ್ಲೇ ಇದ್ದ ಮರದ ಕೊಂಬೆಗಳನ್ನು ಕತ್ತರಿಸಿ ತಂದಿದ್ದಾರೆ.
ಆ ಕೊಂಬೆಗಳಿಗೆ ತನ್ನ ಕೆಂಪು ಸೀರೆಯನ್ನು ಸುತ್ತಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದಾರೆ. ಈ ಮಧ್ಯೆ ಅತ್ತ ಕಡೆ ಬಂದ ಪ್ಯಾಸೆಂಜರ್ ರೈಲಿನ ಡ್ರೈವರ್ ಕೆಂಪು ವಸ್ತ್ರವನ್ನು ನೋಡಿ ಅನುಮಾನದಿಂದ ಬ್ರೇಕ್ ಹಾಕಿದ್ದಾರೆ. ಅನಂತರ ಅವರು ರೈಲು ಇಳಿದು ಕೆಳಗೆ ಬಂದು ನೋಡಿದಾಗ ಅಲ್ಲಿ ಓಂ ವತಿ ಇರುವುದನ್ನು ಗಮನಿಸಿದ್ದಾರೆ. ಓಂ ವತಿ ಅವರು ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ರೈಲು ಚಾಲಕ ವಿಷಯವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ. ರೈಲು ಚಾಲಕ, ಪ್ರಯಾಣಿಕರು ಮತ್ತು ಗ್ರಾಮಸ್ಥರು ಓಂವತಿ ಅವರ ಕಾರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ.