ಗಂಡ, ಸಂಸಾರ ಯಾವುದು ಬೇಡ ಅಂತಾ ಹಿಮಾಲಯದ ಕಡೆ ಹೊರಡಲು ಸಜ್ಜಾದ ಜನಪ್ರಿಯ ಕಿರುತೆರೆ ನಟಿ
ಕೆಲವೊಮ್ಮೆ ಜೀವನದಲ್ಲಿ ಹಣ, ಆಸ್ತಿ, ಜನಪ್ರಿಯತೆ ಎಲ್ಲವೂ ದೊರೆತರೂ ಕೂಡಾ ಅಸಮಾಧಾನವು ಅನೇಕರನ್ನು ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಅದಕ್ಕೆ ಹೊಂದಾಣಿಕೆ ಮಾಡಿಕೊಂಡರೆ, ಇನ್ನೂ ಕೆಲವರಿಗೆ ಜೀವನದ ಮೇಲೆ ಜಿಗುಪ್ಸೆ ಮೂಡಿ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಹೋಗುವ ನಿರ್ಧಾರವನ್ನು ಮಾಡಿ ಬಿಡುತ್ತಾರೆ. ಇಂತಹುದೇ ಒಂದು ನಿರ್ಧಾರವನ್ನು ಈಗ ಕಿರುತೆರೆಯ ಒಬ್ಬ ಜನಪ್ರಿಯ ನಟಿ ಮಾಡಲು ಹೊರಟಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸುತ್ತಾ, ಜನರ ಮೆಚ್ಚುಗೆಯನ್ನು ಪಡೆದಿದ್ದ ಕಿರುತೆರೆಯ ಈ ನಟಿಯು ಈಗ ಸಂಸಾರ, ಸೀರಿಯಲ್ ಯಾವುದೂ ಬೇಡ ಎಂದು ಎಲ್ಲವನ್ನೂ ತೊರೆದು ಹೋಗಲು ನಿರ್ಧಾರವನ್ನು ಮಾಡಿದ್ದಾರೆ.
ನಟಿ ನೂಪುರ್ ಅಲಂಕಾರ್ ಅವರು ಹಿಂದಿ ಕಿರುತೆರೆಯ ಜನಪ್ರಿಯ ನಟಿಯಾಗಿದ್ದಾರೆ. ಸುಮಾರು ಮೂರು ದಶಕಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಈ ನಟಿಯು ಹಲವಾರು ಧಾರಾವಾಹಿಗಳಲ್ಲಿ ವೈವಿದ್ಯಮಯವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅದೇಕೋ ನಟಿಯ ಲೌಕಿಕ ವಿಚಾರಗಳಿಂದ ಆಧ್ಯಾತ್ಮಿಕತೆಯ ಕಡೆಗೆ ಜ್ಞಾನ ಹೊರಳಿದ್ದು, ಕಳೆದ ಫೆಬ್ರವರಿಯಲ್ಲಿ ಅವರು ಸಂಸಾರವನ್ನು ತೊರೆದು ಸಂನ್ಯಾಸತ್ವವನ್ನು ಸ್ವೀಕಾರ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಯನ್ನು ಉಂಟು ಮಾಡಿದ್ದಾರೆ.
ಲೌಕಿಕ ಜೀವನವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದ ನಂತರ ನಟಿಯು ವಿವಿಧ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ಹಿಮಾಲಯಕ್ಕೆ ತೆರಳುವ ಆಲೋಚನೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ನಟಿಯು ಹಿಮಾಲಯದ ಕಡೆಗೆ ತಮ್ಮ ಪ್ರಯಾಣವು ತಮ್ಮ ಜೀವನದ ದೊಡ್ಡ ಹೆಜ್ಜೆ ಎಂದಿದ್ದು, ಹಿಮಾಲಯವು ತನ್ನ ಪ್ರಯಾಣ ವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮಾಡಲಿದೆ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಪ್ರಯಾಣ ಮತ್ತು ಇನ್ನಿತರೆ ಖರ್ಚುಗಳನ್ನು ನಿಭಾಯಿಸಲು ನಟಿಯು ಮುಂಬೈನಲ್ಲಿ ಇರುವ ತಮ್ಮ ಫ್ಲಾಟ್ ಅನ್ನು ಬಾಡಿಗೆಗೆ ನೀಡಿದ್ದಾರೆ ಎನ್ನಲಾಗಿದೆ.
ಅನೇಕರು ನಟಿಯ ನಿರ್ಧಾರದ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದರಿಂದ, ನಟಿಯು ತಾನು ಇಂತಹುದೊಂದು ನಿರ್ಧಾರವನ್ನು ಲಾಕ್ ಡೌನ್ ಅವಧಿಯಲ್ಲಿ ಮಾಡಿದ್ದಾಗಿ ಹೇಳಿದ್ದು, ತಾನು ಮನರಂಜನಾ ಲೋಕದಲ್ಲಿ ಇದ್ದಾಗ, ಜನಪ್ರಿಯತೆ ಮತ್ತು ಯಶಸ್ಸಿನ ಬಗ್ಗೆ ಚಿಂತಿಸುತ್ತಿದೆ. ಆದರೆ ಈಗ ಬಹಳ ಶಾಂತವಾಗಿದ್ದೇನೆ. ಇದೇ ವೇಳೆ ತಮ್ಮ ಪತಿ ನಟ, ಅಲಂಕಾರ್ ಶ್ರೀವಾಸ್ತವ್ ಅವರೊಂದಿಗಿನ ವಿವಾಹ ಸಂಬಂಧವನ್ನು ಸಹಾ ಕೊನೆಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಟಿ ನಿರ್ಧಾರ ಕಂಡು ಅನೇಕರು ಅಚ್ಚರಿ ಪಡುತ್ತಿರುವುದು ಮಾತ್ರ ನಿಜ.