ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಗಡೆ: ನಿರ್ಮಾಪಕ, ನಿರ್ದೇಶಕರನ್ನು ಪ್ರಶ್ನೆ ಮಾಡಿ ಎಂದಿದ್ದೇಕೆ??
ಕನ್ನಡದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಗಡೆ ಅವರು ಮಾದ್ಯಮಗಳ ಮುಂದೆ ಮಾತನಾಡುತ್ತಾ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ನಡೆದಂತಹ ರಾಣಾ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ಮಾದ್ಯಮಗಳ ಮುಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನಂದಕಿಶೋರ್ ನಿರ್ದೇಶನದ ರಾಣಾ ಸಿನಿಮಾದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಅವರು ವಿಶೇಷ ಹಾಡೊಂದರಲ್ಲಿ ಹೆಜ್ಜೆಯನ್ನು ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಸುದ್ದಿ ಗೋಷ್ಠಿಯಲ್ಲಿ ಅವರನ್ನು ಕನ್ನಡದಲ್ಲಿ ಯಾಕೆ ನಟಿಸುತ್ತಿಲ್ಲ ಎಂದು ಕೇಳಲಾಗಿದೆ.
ಕನ್ನಡ ಸಿನಿಮಾಗಳ ವಿಚಾರದಲ್ಲಿ ಯಾಕೆ ಇಷ್ಟೊಂದು ಸೆಲೆಕ್ಟಿವ್ ಆಗಿದ್ದೀರಿ?? ಎನ್ನುವ ಪ್ರಶ್ನೆ ನಟಿಯ ಮುಂದೆ ಇಟ್ಟಾಗ, ಅವರು ನಗುತ್ತಲೇ ಅದಕ್ಕೆ ಉತ್ತರವನ್ನು ನೀಡಿದ್ದು, ಆ ನಗುವಿನ ಮಾತಿನಲ್ಲೇ ಅಸಮಾಧಾನವನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಾನು ಓದ್ತಾ ಇದ್ದೀನಿ, ನನ್ನ ತಂದೆ ತಾಯಿಗೆ ಅನಾರೋಗ್ಯ ಇತ್ತು ಎನ್ನುತ್ತಾ ಸಿನಿಮಾಗಳ ವಿಚಾರದಲ್ಲಿ ನಾನೇನೂ ಸೆಲೆಕ್ಟಿವ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ಮೂರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದು, ಅವು ಬಿಡುಗಡೆಗೆ ಸಿದ್ಧವಾಗಿವೆ ಎಂದಿದ್ದಾರೆ.
ಮಾದ್ಯಮಗಳು ನನ್ನನ್ನು ಪ್ರಶ್ನೆ ಮಾಡುವಂತೆ ಬೇರೆ ಭಾಷೆಯ ನಟಿಯರನ್ನು ತಮ್ಮ ಸಿನಿಮಾಗಳಿಗೆ ಹಾಕಿಕೊಳ್ಳುವ ನಿರ್ಮಾಪಕ, ನಿರ್ದೇಶಕರನ್ನು ಯಾಕೆ ಪ್ರಶ್ನೆ ಮಾಡೋದಿಲ್ಲ?? ಇದರಲ್ಲಿ ನಮ್ಮ ಕೈಯಲ್ಲಿ ಏನೂ ಇರೋದಿಲ್ಲ. ನೀವು ನಿರ್ದೇಶಕರನ್ನು ಮತ್ತು ನಿರ್ಮಾಪಕರನ್ನು ಕೇಳಿ. ಕನ್ನಡದಲ್ಲಿ ಅವಕಾಶಗಳು ಕಡಿಮೆ ಇದೆ, ಅವಕಾಶ ಸಿಕ್ಕರೆ ಖಂಡಿತವಾಗಿ ನಟಿಸುವುದಾಗಿ ಹೇಳಿರುವ ನಟಿಯು ಕನ್ನಡ ನಮ್ಮ ಭಾಷೆ, ಬಿಟ್ಟು ಹೊರಗೆ ಹೋಗುವ ಪ್ರಶ್ನೆ ಬರೋದಿಲ್ಲ ಎಂದಿದ್ದಾರೆ.