ಈ ಹಳ್ಳಿಯಲ್ಲಿ ಹನುಮಂತನ ಆರಾಧನೆ ಮಾಡುವ ಹಾಗಿಲ್ಲ: ಈ ಗ್ರಾಮದ ಜನರಿಗೆ ಹನುಮನ ಮೇಲೇಕೆ ಕೋಪ??

Entertainment Featured-Articles News
88 Views

ವಾಯುಪುತ್ರ, ಅಂಜನೀ ಸುತ, ರಾಮಭಕ್ತ ಹನುಮಂತನ ಆರಾಧನೆ ಮಾಡದವರೇ ಇಲ್ಲ ಎನ್ನಬಹುದು. ದೇಶದ ಮೂಲೆ ಮೂಲೆಯಲ್ಲಿ ಹನುಮನ ಆರಾಧನೆ ಮಾಡುವ ಹಲವು ಮಂದಿರಗಳು ಸ್ಥಾಪಿಸಲ್ಪಟ್ಟಿವೆ. ಹನುಮ ಜಯಂತಿ ಬಂದಾಗ ಅದನ್ನು ಹಬ್ಬದಂತೆ ಸಡಗರ, ಸಂಭ್ರಮದಿಂದ ಆಚರಿಸಿ, ಹನುಮನ ಆರಾಧನೆ ಮಾಡಲಾಗುತ್ತದೆ. ಹನುಮನ ನೆನೆದರೆ ಸಾಕು ಎಲ್ಲಾ ಭಯಗಳು ದೂರಾಗುತ್ತವೆ ಎನ್ನುತ್ತಾರೆ. ಹೀಗೆ ಅಸಂಖ್ಯಾತ ಭಕ್ತರಿಂದ ಆರಾಧಿಸಲ್ಪಡುವ ಹನುಮನ ಆರಾಧನೆ ಮಾಡದ, ಹನುಮನ ಪೂಜೆಗೆ ನಿಷೇಧ ಹೇರಿರುವ ಸ್ಥಳವೊಂದು ನಮ್ಮ ದೇಶದಲ್ಲೇ ಇದೆ ಎಂದರೆ ನಂಬುವಿರಾ??

ಹೌದು, ಈ ಮಾತು ಅಕ್ಷರಶಃ ಸತ್ಯ. ಭಾರತದ ಒಂದು ಹಳ್ಳಿಯಲ್ಲಿ ಇಂದಿಗೂ ಸಹಾ ಹನುಮನಿಗಾಗಿ ಯಾವುದೇ ಆಲಯವಾಗಲೀ ನಿರ್ಮಾಣ ಮಾಡಲಾಗಿಲ್ಲ. ಅಲ್ಲದೇ ಇಲ್ಲಿ ಹನುಮನ ಆರಾಧನೆಯನ್ನು ಸಹಾ ಮಾಡಲಾಗುವುದಿಲ್ಲ. ಬನ್ನಿ ಹಾಗಾದರೆ ಆ ಸ್ಥಳ ಯಾವುದು?? ಯಾಕೆ ಇಲ್ಲಿ ಹನುಮನ ಪೂಜೆ ಮಾಡುವುದಿಲ್ಲ ಎನ್ನುವ ವಿಚಾರವನ್ನು ನಾವು ಇಂದು ತಿಳಿಯೋಣ. ಉತ್ತರಾಖಂಡ ರಾಜ್ಯದ ಅಲ್ಮೋರಾದ ಹತ್ತಿರ ಇರುವ ದ್ರೋಣಗಿರಿ ಎನ್ನುವ ಗ್ರಾಮದಲ್ಲೇ ಹನುಮನ ಆರಾಧನೆಯನ್ನು ಮಾಡಲಾಗುವುದಿಲ್ಲ.

ಈ ಗ್ರಾಮದಲ್ಲಿ ಏಕೆ ಹನುಮನ ಪೂಜೆ ಇಲ್ಲ ಎನ್ನುವ ವಿಚಾರಕ್ಕೆ ಬಂದರೆ, ರಾಮಾಯಣದ ಯುದ್ಧಕಾಂಡದಲ್ಲಿ ಮೇಘನಾಥನು ಬಿಟ್ಟ ಬಾಣಗಳ ಪ್ರಭಾವದಿಂದ ಲಕ್ಷಣನು ಪ್ರಭಾವಿತನಾಗಿ, ಮೂರ್ಛೆ ಹೋದಾಗ, ಆಯರ್ವೇದ ವೈದ್ಯ ಸುಶೇಣನು ಲಕ್ಷ್ಮಣನ ಪ್ರಾಣ ಉಳಿಸಲು ಸಂಜೀವಿನಿ ಮೂಲಿಕೆಯನ್ನು ತರುವಂತೆ ಸಲಹೆಯನ್ನು ನೀಡುತ್ತಾನೆ. ಅದಿಲ್ಲದೇ ಬೇರೆ ಯಾವುದರಿಂದಲೂ ಚಿಕಿತ್ಸೆ ಸಾಧ್ಯವಿಲ್ಲ ಎಂದು ಹೇಳಿದರು.

ಆಗ ಸಂಜೀವಿನಿಯನ್ನು ಅರಸಿ ವಾಯುಪುತ್ರ ಹನುಮನು ದ್ರೋಣಗಿರಿಯನ್ನು ತಲುಪಿದನು. ಆದರೆ ಅಲ್ಲಿ ಸಂಜೀವಿನಿ ಮೂಲಿಕೆ ಯಾವುದೆಂಬುದನ್ನು ತಿಳಿಯದೇ ಹೋದಾಗ, ಹನುಮನ ಅಲ್ಲಿದ್ದ ಬೆಟ್ಟದ ಒಂದು ಭಾಗವನ್ನೇ ಎತ್ತಿಕೊಂಡು ಲಂಕೆಗೆ ಹಾರಿ ಬಂದ, ಸುಶೇಷನು ಆಗ ಸಂಜೀವಿನಿ ಬಳಸಿ ಲಕ್ಷ್ಮಣನ ಪ್ರಾಣ ರಕ್ಷಣೆ ಮಾಡಿದೆ. ಕಥೆ ಇಲ್ಲಿಗೆ ಮುಗಿಯಲಿಲ್ಲ. ದ್ರೋಣಗಿರಿ ಪ್ರದೇಶದ ಜನರು ಇನ್ನೊಂದು ಕಥೆಯನ್ನು ಹೇಳುತ್ತಾರೆ.

ಇಲ್ಲಿನ ಸ್ಥಳ ಪುರಾಣದ ಪ್ರಕಾರ ದ್ರೋಣಗಿರಿ ಅಲ್ಲಿನ‌ ಜನರಿಗೆ ಒಂದು ಪವಿತ್ರ ಸ್ಥಾನವಾಗಿತ್ತು. ಪರ್ವತ ದೇವ ಎಂದು ಗಿರಿಯನ್ನು ಆರಾಧಿಸುತ್ತಿದ್ದ ಅಲ್ಲಿ ಹನುಮನಿಗೆ ಪ್ರವೇಶ ನೀಡಲಿಲ್ಲ. ಆಗ ಹನುಮಂತ ಒಬ್ಬ ಸಾಧುವಿನ ಹಾಗೆ ವೇಷ ಮರೆಸಿಕೊಂಡು, ಒಬ್ಬ ಮುದುಕಿಯ ಬಳಿ ಸಂಜೀವಿನಿ ಇರುವ ಜಾಗವನ್ನು ತೋರಿಸುವಂತೆ ಬೇಡಿಕೊಂಡು ಆ ಸ್ಥಳವನ್ನು ತಲುಪಿ, ಆ ಪರ್ವತದ ಒಂದು ಭಾಗವನ್ನೇ ಕದ್ದುಕೊಂಡ ಹೋದ ಎನ್ನಲಾಗಿದೆ. ತಮ್ಮ ದೈವರ ಹೃದಯ ಭಾಗ ಕತ್ತರಿಸಿ ಬಿಟ್ಟ ಎಂದು ಅಲ್ಲಿನ ಜನರು ಬೇಸರಗೊಂಡರು.

ಹೀಗೆ ಹನುಮಂತ ತಮ್ಮ ದೈವಕ್ಕೆ ಅಪಚಾರ ಮಾಡಿದ ಎನ್ನುವ ಕಾರಣಕ್ಕೆ ಅಂದಿನಿಂದ ಇಂದಿನವರೆಗೆ ದ್ರೋಣಗಿರಿಯಲ್ಲಿ ಹನುಮನ ಪೂಜೆ, ಆರಾಧನೆ ಮಾಡುವುದಿಲ್ಲ. ಇಲ್ಲಿ ಮನೆಗಳಲ್ಲಿ ಹನುಮನ ಫೋಟೋ, ಮೂರ್ತಿ ಇಡುವುದಿಲ್ಲ. ರಾಮಲೀಲಾ ನಡೆಯುವಾಗಲೂ ಹನುಮನ ಬಗ್ಗೆ ಹೇಳುವುದಿಲ್ಲ. ಅಲ್ಲದೇ ಹನುಮನ ಸಂಕೇತವಾದ ಕೆಂಪು ಧ್ವಜವನ್ನು ಕೂಡಾ ಹಾರಿಸುವುದನ್ನು ನಿಷೇಧ ಮಾಡಲಾಗಿದೆ. ನಿಜಕ್ಕೂ ಇದೊಂದು ವಿಸ್ಮಯ ಹುಟ್ಟಿಸುವ ವಿಷಯವೇ ಆಗಿದೆ.

Leave a Reply

Your email address will not be published. Required fields are marked *