ಇಹಲೋಕ ತ್ಯಜಿಸುವ ಮುನ್ನ ತನ್ನ ಸಮಸ್ತ ಆಸ್ತಿಯನ್ನು ಬಡವರಿಗಾಗಿ ದಾನ ಮಾಡಿದ ನಟಿ ಇವರು

Written by Soma Shekar

Published on:

---Join Our Channel---

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಹೀಗೆ ಐದು ಭಾಷೆಗಳಲ್ಲಿ ನಟಿಸುವ ಮೂಲಕ ಪಂಚ ಭಾಷಾ ತಾರೆಯಾಗಿ ಜನಪ್ರಿಯತೆಯನ್ನು ಪಡೆದು ಕೊಂಡ ನಟಿ ದಿವಂಗತ ಶ್ರೀವಿದ್ಯಾ ಅವರು. ನಟಿ ಶ್ರೀವಿದ್ಯಾ ವಿಶೇಷವಾಗಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಂತಹ ನಟಿಯಾಗಿದ್ದರು. ಸುಮಾರು 800 ಸಿನಿಮಾಗಳಲ್ಲಿ ನಟಿಸಿರುವ ಅವರು ಬಹಳಷ್ಟು ಸಿನಿಮಾಗಳಲ್ಲಿ ಸಹ ನಟಿಯಾಗಿ ಅನೇಕ ಉತ್ತಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರು ಭಾವನಾತ್ಮಕ ಸನ್ನಿವೇಶಗಳಲ್ಲಿ ಅತ್ಯುತ್ತಮವಾಗಿ ನಟಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದರು.

ಶ್ರೀವಿದ್ಯಾ ಅವರು ನಟಿಯಾಗಿದ್ದರೂ ಸಹಾ, ಅದರ ಜೊತೆಗೆ ಹಾಡುಗಳನ್ನು ಹಾಡುವುದರಿಂದ ಹಿಡಿದು ಬೇರೆ ನಟಿಯರಿಗೆ ಕಂಠದಾನ ಕಲಾವಿದೆಯಾಗಿ ಕೂಡಾ ಕೆಲಸವನ್ನು ಮಾಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದರು. 1953 ರಲ್ಲಿ ಮದ್ರಾಸ್ ನಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಕಠಿಣವಾದ ದಿನಗಳನ್ನು ನೋಡಬೇಕಾಯಿತು. ಬಾಲನಟಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು ಮುಂದೆ ಪ್ರತಿಭಾನ್ವಿತ ನಿರ್ದೇಶಕ ಬಾಲಚಂದರ್ ಅವರ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ನಾಯಕಿಯಾಗಿಯೂ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. ಆದರೆ ನಾಯಕಿಯ ಅವಕಾಶಗಳು ಕಡಿಮೆಯಾದ ಮೇಲೆ ಸಹ ನಟಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಛಾಪನ್ನು ಮೂಡಿಸಿದರು. ಸ್ಟಾರ್ ನಟ ಕಮಲಹಾಸನ್ ಜೊತೆ ಪ್ರೇಮದಲ್ಲಿ ಬಿದ್ದಿದ್ದ ಶ್ರೀವಿದ್ಯಾ ಅವರು ಅನಂತರ ಕಾರಣಾಂತರಗಳಿಂದ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಚಾರ್ಜ್ ಥಾಮಸ್ ಅವರೊಡನೆ ವಿವಾಹವಾದರು. ಆದರೆ ಗಂಡನ ವರ್ತನೆಯಿಂದ ಬೇಸತ್ತ ಅವರು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಪಡೆದುಕೊಂಡರು.

ಅನಂತರ ಭರತ್ ಎನ್ನುವ ಹೆಸರಿನ ಮತ್ತೋರ್ವ ನಿರ್ದೇಶಕನನ್ನು ಎರಡನೇ ಮದುವೆಯಾದರು. ಆದರೆ ಆತ ಶ್ರೀವಿದ್ಯಾ ಅವರ ಆಸ್ತಿಯನ್ನು ಲಪಟಾಯಿಸಲು ನೋಡಿದಾಗ, ಶ್ರೀವಿದ್ಯಾ ಆತನ ವಿರುದ್ಧ ಕೋರ್ಟ್ ಮೆಟ್ಟಿಲೇರಿ, ಕೇಸ್ ನಲ್ಲಿ ಜಯವನ್ನು ಪಡೆದುಕೊಂಡರು. ಶ್ರೀ ವಿದ್ಯಾ ಅವರಿಗೆ 2013ರಲ್ಲಿ ಕ್ಯಾನ್ಸರ್ ಇರುವ ವಿಷಯ ತಿಳಿದು ಬಂದಿತ್ತು. ಆಗಲೇ ಅವರು ಒಂದು ಮಹತ್ವದ ನಿರ್ಧಾರ ಮಾಡಿದರು. ಅವರು ಒಂದು ಚಾರಿಟಬಲ್ ಟ್ರಸ್ಟ್ ತೆರೆದರು.

ಶ್ರೀ ವಿದ್ಯಾ ತೆರೆದ ತಮ್ಮ ಚಾರಿಟಬಲ್ ಟ್ರಸ್ಟ್ ನ ಮೂಲಕ ಬಡತನದಲ್ಲಿ ಬಳಲುತ್ತಿದ್ದ ಸಂಗೀತ ಹಾಗೂ ನೃತ್ಯ ಕಲಾಕಾರರಿಗೆ ಸ್ಕಾಲರ್ ಶಿಪ್ ನೀಡಲು ಪ್ರಾರಂಭಿಸಿದರು. ಇನ್ನು ಕೊನೆಯ ದಿನಗಳಲ್ಲಿ ಅವರು ತಮ್ಮ ಉಳಿದ ಆಸ್ತಿಯನ್ನು ತಮ್ಮ ಮನೆ ಕೆಲಸದವರಿಗೆ, ಆಪ್ತರಿಗೆ ಹಾಗೂ ತಾನು ಹುಟ್ಟಿದ ಊರಿನ ಅಭಿವೃದ್ಧಿ ಕೆಲಸಗಳಿಗಾಗಿ ದೇಣಿಗೆಯಾಗಿ ನೀಡಿ ಬಿಟ್ಟರು. ಶ್ರೀವಿದ್ಯಾ ಅವರು ತಮ್ಮ 53 ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದರು.

Leave a Comment